ಭಟ್ಕಳದಲ್ಲಿ ನಾಲ್ವರನ್ನು ಹತ್ಯೆಗೈದ ಪ್ರಕರಣ: ನಾಪತ್ತೆಯಾಗಿದ್ದ ಆರೋಪಿಯನ್ನು ಶಿವಮೊಗ್ಗದಲ್ಲಿ ಹೆಡೆಮುರಿ ಕಟ್ಟಿದ ಫೊಲೀಸರು: ಆಸ್ತಿ ಜಗಳ ವಿಚಾರವಾಗಿ ಕೊಲೆ ನಡೆದಿರುವ ಶಂಕೆ, ವಿಚಾರಣೆಯಲ್ಲಿ ಬಯಲಾಗಲಿದೆ ಮಾಹಿತಿ

ಭಟ್ಕಳ : ಆಸ್ತಿ ಜಗಳ ವಿಚಾರವಾಗಿ ಒಂದೇ ಕುಟುಂಬ ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಫೆ. 24ರಂದು ಭಟ್ಕಳದ ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಹತ್ಯೆಯ ಪ್ರಮುಖ ಆರೋಪಿ ವಿನಯ್ ಭಟ್‌ನನ್ನು ಭಟ್ಕಳ ಪೊಲೀಸರು ಫೆ.26ರಂದು ಶಿವಮೊಗ್ಗದಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ವಿನಯ್ ಭಟ್ ಘಟನಾ ಸ್ಥಳದಿಂದ ಪರಾರಿಯಾಗಿ ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡಿದ್ದ, ಆದರೆ ಈ ಬಗ್ಗೆ ತನಿಖೆ ಆರಂಭಿಸಿದ ಭಟ್ಕಳ ಪೊಲೀಸರು ಈತನ ಪತ್ತೆಗೆ ಬಲೆಬೀಸಿದ್ದರು. ವಿನಯ್ ಭಟ್
ಶಿವಮೊಗ್ಗದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಇಬ್ಬರು ಆರೋಪಿಗಳಾದ ವಿದ್ಯಾ ಭಟ್ ಹಾಗೂ ಶ್ರೀಧರ್ ಭಟ್‌ರನ್ನು ಫೆ.25ರಂದು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಕೊಲೆಗೆ ಕಾರಣವಾದ ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಳೆದ ಸಪ್ಟೆಂಬರ್ ತಿಂಗಳಲ್ಲಿ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶ್ರೀಧರ್ ಭಟ್ ಸಾವಿನ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದವರು ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿದ್ದರು. ಮಾತುಕತೆ ನಂತರ ಕೊಲೆಯಾದ ಶಂಭು ಭಟ್ಟರ ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಆದರೆ ಶುಕ್ರವಾರ ಶಂಭು ಭಟ್ ಮನೆಯ ಪಕ್ಕದಲ್ಲಿ ಅಂದರೆ ವಿದ್ಯಾ ಭಟ್ ಅವರ ಪಾಲಿಗೆ ಬರುವ ಜಾಗದಲ್ಲಿದ್ದ ಕೊಟ್ಟಿಗೆಯನ್ನು ತೆಗೆದು ಅದರ ಕಲ್ಲುಗಳನ್ನು ಬೇರೆ ಕಡೆಗೆ ಒಯ್ಯಲಾಗಿತ್ತು. ಈ ವಿಚಾರವಾಗಿ ಜಗಳ ನಡೆದು ವಿದ್ಯಾ ಸಹೋದರ ಹಲ್ಯಾಣಿ ನಿವಾಸಿ ವಿನಯ್ ಭಟ್ ನಾಲ್ವರನ್ನು ಹತ್ಯೆ ಮಾಡಿದ್ದಾನೆ ಎಂಬುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಶಂಭು ಭಟ್ ಮಗಳಾದ ಜಯಶ್ರೀ ಪ್ರಕಾಶ ಅಡಿಗ ಪ್ರಕರಣ ದಾಖಲಿಸಿದ್ದಾರೆ.

error: Content is protected !!