ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನೂತನ ಮುಖ್ಯಸ್ಥರಾಗಿ ಸುನಿಲ್ ಹೆಗ್ಡೆ ನೇಮಕ

 

 

ಉಜಿರೆ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನೂತನ ಮುಖ್ಯಸ್ಥರಾಗಿ ಸುನಿಲ್ ಹೆಗ್ಡೆ ನೇಮಕಗೊಂಡಿದ್ದಾರೆ. ಈ ಹಿಂದೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ, ಇತ್ತೀಚೆಗಷ್ಟೇ ನಿವೃತ್ತರಾದ ಡಾ. ಭಾಸ್ಕರ ಹೆಗಡೆಯವರಿಂದ ತೆರವಾದ ಸ್ಥಾನಕ್ಕೆ ಸುನಿಲ್ ಹೆಗ್ಡೆ ನಿಯುಕ್ತಿಗೊಂಡಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಇದೇ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಯೂ ಆಗಿರುವ ಸುನಿಲ್ ಹೆಗ್ಡೆ ಕಸ್ತೂರಿ ವಾಹಿನಿಯಲ್ಲಿ ಕಾಪಿ ಎಡಿಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ 15 ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ “ಸಂಡೇ ಇಂಡಿಯನ್” ನಿಯತಕಾಲಿಕೆಯ ವರದಿಗಾರ ಮತ್ತು ಸಬ್ ಎಡಿಟರ್ ಆಗಿ ದೆಹಲಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಮುಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುವಾಣಿ ಮಾಸ ಪತ್ರಿಕೆಯ ಸಹ ಸಂಪಾದಕರಾಗಿ ಮತ್ತೆ ಉಜಿರೆಗೆ ಮರಳಿ, ಅಲ್ಲಿಂದಲೇ ಪತ್ರಿಕೋದ್ಯಮ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡರು.

ಟಿ.ವಿ ಮತ್ತು ಡಿಜಿಟಲ್ ಪತ್ರಿಕೋದ್ಯಮ ವಿಭಾಗದಲ್ಲಿ ಪರಿಣತಿ ಪಡೆದಿರುವ ಸುನಿಲ್ ಹೆಗ್ಡೆ ಕಾಲೇಜಿನ ಎಸ್.ಡಿ.ಎಂ ಮಲ್ಟಿಮೀಡಿಯ ಸ್ಟುಡಿಯೊದ ಕಾರ್ಯಕಾರಿ ನಿರ್ಮಾಪರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಕೌಶಲ್ಯ ತರಬೇತಿ ನೀಡುತ್ತಿದ್ದಾರೆ.

ಪತ್ರಿಕೋದ್ಯಮ, ಶಿಕ್ಷಣ ಕ್ಷೇತ್ರದ ಜೊತೆಗೆ ಅನುವಾದ, ಛಾಯಾಗ್ರಹಣ, ಆಡಿಯೋ ಬುಕ್ ಕ್ಷೇತ್ರಗಳಲ್ಲಿಯೂ ಪರಿಣತಿ ಹೊಂದಿರುವ ಸುನಿಲ್ ಹೆಗ್ಡೆ ಬರಹಗಾರಾಗಿಯೂ ಗುರುತಿಸಿಕೊಂಡಿದ್ದಾರೆ. ಮನದ ಮಾತು @ 60, ಮಹಾಯಾನ ಹಾಗೂ ಗುಣಗಣಿ ಎಂಬ ಮೂರು ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ  ಇವರ ಹಲವು ಲೇಖನಗಳು ರಾಜ್ಯದ ಹೆಸರಾಂತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಮಾಧ್ಯಮ ಶಿಕ್ಷಣ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಗಣನೀಯ ಸಾಧನೆ ಮಾಡುತ್ತಿರುವ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ರಾಜ್ಯವ್ಯಾಪಿ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿದೆ. ಮಾಧ್ಯಮ ವಲಯದಲ್ಲಿ ಹೆಮ್ಮೆಯಿಂದಲೇ ಗುರುತಿಸಲ್ಪಡುತ್ತಿದೆ.

error: Content is protected !!