ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯದ ದತ್ತ ಕೃಪಾ ನಿವಾಸಿ ಗಜಾನನ ವಝೆ (70) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.30 ರಂದು ನಿಧನ ಹೊಂದಿದರು.ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು ಬಳಿಕ ನೆರಿಯದ ಖಾಸಗಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ, ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಕೃಷಿಯಲ್ಲಿ ಅಪಾರಜ್ಞಾನ ಹೊಂದಿದ್ದ ಅವರು ತಮ್ಮ ತೋಟದಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಮೂಲಕ ಕೃಷಿ ಕ್ರಾಂತಿ ನಡೆಸಿದ್ದರು ಹಾಗೂ ಕೃಷಿ ಸಂಬಂಧಿ ಉಪಕರಣಗಳನ್ನು ತಯಾರಿಸಿದ್ದರು. ಜಲ ಸಂರಕ್ಷಣೆ ಕುರಿತು ತಾಲೂಕಿನ ಅನೇಕ ಕಡೆಗಳಲ್ಲಿ ಕೃಷಿ ಹೊಂಡ ತಯಾರಿ,ಗದ್ದೆ, ಮನೆಗಳಲ್ಲಿ ನೀರು ಇಂಗಿಸುವ ಮೂಲಕ ಜಾಗೃತಿ ಮೂಡಿಸಿದ್ದರು. ಅನೇಕ ಕಡೆಗಳಲ್ಲಿ ಈ ಬಗ್ಗೆ ತರಬೇತಿಗಳನ್ನು ನೀಡಿದ್ದರು.
ಯೋಗಪಟುವಾಗಿದ್ದ ಅವರು ಯೋಗ ಶಿಕ್ಷಣವನ್ನು ನೀಡುತ್ತಿದ್ದರು. ನಾಟಕಗಳಲ್ಲಿ ಹಿನ್ನೆಲೆ ಸಂಗೀತಗಾರರಾಗಿಯು ಗುರುತಿಸಿಕೊಂಡಿದ್ದರು.ಮುಂಡಾಜೆ ಗ್ರಾಮದ ಅರಣ್ಯ ಪ್ರದೇಶದಲ್ಲಿನ ನಾನಾ ಜಾತಿಯ ಸಸ್ಯ, ಮರಗಳನ್ನು ಗುರುತಿಸಿ ಇದರ ಬಗ್ಗೆ ಸಂಪೂರ್ಣ ಮಾಹಿತಿ-ವಿವರ ಸಂಗ್ರಹಿಸಿ ಸ್ಥಳೀಯಾಡಳಿತಕ್ಕೆ ಸಲ್ಲಿಸುವ ಮೂಲಕ ಸಸ್ಯ ಜಾಗೃತಿಯನ್ನು ಮೂಡಿಸಿದ್ದರು.ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಅವರು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿಯು ಸೇವೆ ಸಲ್ಲಿಸಿದ್ದರು.