ಬೆಳ್ತಂಗಡಿ: ಧರ್ಮ ಉಳಿದರೆ ಮಾತ್ರ ಜಾತಿ ಉಳಿಯಬಹುದು ಅದ್ದರಿಂದ ಎಲ್ಲಾ ಸಮಾಜದ ಬಂಧುಗಳು ಒಟ್ಟಾಗಿ ಧರ್ಮವನ್ನು ಉಳಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು
ಬಂಟರ ಯಾನೆ ನಾಡವರ ಸಂಘ, ಮಹಿಳಾ ವಿಭಾಗ, ಯುವ ವಿಭಾಗ ಆಶ್ರಯದಲ್ಲಿ ಎ 27 ರಂದು ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದಿನದಿಂದ ದಿನ ಹಿಂದೂ ಸಮಾಜ ಆತಂಕದಲ್ಲಿ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಹಂತಕರು ಹಿಂದೂ ಧರ್ಮದವರನ್ನೇ ಗುರಿಯಾಗಿಸಿ ಹತ್ಯೆ ಮಾಡಿರುವಂತಾದ್ದು ನಮಗೆಲ್ಲರಿಗೂ ಎಚ್ಚರಿಕೆಯ ಪಾಠವಾಗಿದೆ. ಅದ್ದರಿಂದ ಸಮಾಜದ ಪ್ರತಿಯೊಬ್ಬರೂ ನಮ್ಮ ಧರ್ಮದ ಉಳಿವಿಗೆ ಎಲ್ಲರೂ ಒಗ್ಗಟ್ಟಾಗಬೇಕು, ಅದೇ ರೀತಿ ಪ್ರತೀ ಮನೆಯಲ್ಲೂ ಧರ್ಮದ ಪಾಠವನ್ನು ನಮ್ಮ ಮಕ್ಕಳಿಗೆ ಕಲಿಸುವಂತಹ ಕೆಲಸ ಮಾಡಬೇಕು ಎಂದರು.
ಉದ್ಯಮಿ ಶಶಿಧರ್ ಶೆಟ್ಟಿಯವರು ಮಾತನಾಡಿ, ನಮ್ಮ ಆಚಾರ, ವಿಚಾರ,ಸಂಸ್ಕ್ರತಿ ಈಗಿನ ಯುವ ಜನತೆಗೆ ತಿಳಿಸುವಂತಹ ಕಾರ್ಯ ಇಂತಹ ಕ್ರೀಡಾಕೂಟದ ಮೂಲಕ ಬೆಳ್ತಂಗಡಿ ಬಂಟರ ಸಂಘ ಮಾಡುತ್ತಿರುವುದು ಶ್ಲಾಘನೀಯ, ಎಂದರು.
ಕ್ರೀಡಾಕೂಟವನ್ನು ಕಾಶಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ವಲಯ ಸಮಿತಿಗಳ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು. ರಾತ್ರಿಯವರೆಗೆ ವಿವಿಧ ಕ್ರೀಡಾಕೂಟಗಳು ನಡೆಯಿತು. ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ತಾಲೂಕಿನ ಹೆಚ್ಚಿನ ಬಂಟ ಸಮಾಜದ ಬಂಧುಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಅಧ್ಯಕ್ಷತೆ ವಹಿಸಿದ್ದರು,ಜಯರಾಮ ಶೆಟ್ಟಿ ಪಡಂಗಡಿ, ರಾಜೇಶ್ ಶೆಟ್ಟಿ ನವಶಕ್ತಿ, ಅಜಿತ್ ಜಿ.ಶೆಟ್ಟಿ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿ ಸುರೇಶ್ ಶೆಟ್ಟಿ ವಂದಿಸಿದರು.