ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಮಧ್ಯಾಹ್ನ ನಂತರ ಸುರಿದ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ್ದು ಅಲ್ಲಲ್ಲಿ ಮನೆಗೆ ಹಾನಿ ಸೇರಿದಂತೆ ಮರಗಳು ಧರೆಗುರುಳಿ ಬಿದ್ದು ಹಾನಿಯುಂಟಾಗಿದೆ.ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಮನೆ ಮೇಲೆ ಅಂಗಳದಲ್ಲಿದ್ದ ತೆಂಗಿನ ಮರವೊಂದು ಮುರಿದು ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೊಳಗಾಗಿದೆ.ಮನೆಯೊಳಗೆ ಮೂವರಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಮನೆಯವರು ಹತ್ತಿರದ ಮನೆಗೆ ಸ್ಥಳೀಯರು ಸ್ಥಳಾಂತರಿಸಿದ್ದಾರೆ. ಉಜಿರೆ ಬೆಳಾಲ್ ಕ್ರಾಸ್ ಬಳಿ ಉಜಿರೆ ಪೇಟೆಯಿಂದ ನೀರ ಚಿಲುಮೆ ಬಳಿಯ ಮನೆಗೆ ಸಂಚರಿಸುತ್ತಿದ್ದ ಬೈಕ್ ಮೇಲೆ ಹೆದ್ದಾರಿ ಬದಿಯ ಮರ ತುಂಡಾಗಿ ಬಿದ್ದು ಬೈಕ್ ಗೆ ಹಾನಿಯುಂಟಾಗಿದೆ.
ಅದೃಷ್ಟವಶಾತ್ ಸವಾರ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ. ಲಾಯಿಲ ಕಿಲ್ಲೂರು ರಸ್ತೆ ಬದಿಯ ಹಲವು ಮರಗಳು ಗಾಳಿಯ ರಭಸಕ್ಕೆ ಉರುಳಿ ಬಿದ್ದ ಪರಿಣಾಮ ಅಲ್ಲಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆಯಲ್ಲದೇ ,ಸಂಗತಿ ನಗರ ಎಂಬಲ್ಲಿ ಬೃಹತ್ ಗಾತ್ರದ ಮಾವಿನಮರ ರಸ್ತೆಗೆ ಬಿದ್ದು ಹಲವಾರು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ತಾಲೂಕಿನ ವಿವಿಧೆಡೆಗಳಲ್ಲಿಯೂ ವಿಪರೀತ ಗಾಳಿಯಿಂದಾಗಿ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.