ನಂದಗೋಕುಲ ಗೋಶಾಲೆ ಕಳೆಂಜ: ದೀಪೋತ್ಸವ, ಪುಣ್ಯಕೋಟಿಗೆ ಒಂದು ಕೋಟಿ:ಗೋಮಾತೆಗೆ ಕೋಟಿಯ ನಮನ:

 

 

ಬೆಳ್ತಂಗಡಿ: ಗೋವುಗಳ ರಕ್ಷಣೆ, ಪಾರಂಪರಿಕ ಗೋ ಆಧಾರಿತ ಕೃಷಿ ವಿಧಾನಗಳು ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಥಾಪನೆಗೊಂಡ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಕಳೆಂಜ ಗ್ರಾಮದಲ್ಲಿ ನಡೆಯುತ್ತಿರುವ ನಂದಗೋಕುಲ ಗೋ ಶಾಲೆಯಲ್ಲಿ ಮೇ 26ರಂದು ಸಂಜೆ ‘ನಂದ ಗೋಕುಲ ದೀಪೋತ್ಸವ’ ಪುಣ್ಯಕೋಟಿಗೆ ಒಂದು ಕೋಟಿ.. ಗೋಮಾತೆ ಗೆ ಕೋಟಿಯ ನಮನ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.

ಅವರು ಮೇ 16 ರಂದು ಬೆಳ್ತಂಗಡಿ ಟ್ರಸ್ಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶೀ ಗೋಸಂತತಿಯನ್ನು ಉಳಿಸುವ, ಬೆಳೆಸುವ ಹಾಗೂ ನಿರ್ಗತಿಕ,
ಅನಾಥ ಮತ್ತು ಅಶಕ್ತ ಗೋವುಗಳಿಗೆ ರಕ್ಷಣೆ ಮತ್ತು ಅವುಗಳ ಬದುಕಿಗೆ ಪೂರಕ ವಾತಾವರಣವನ್ನು ಒದಗಿಸುವ ಉದ್ದೇಶದಿಂದ ಟ್ರಸ್ಟ್‌ನ ಆಶ್ರಯದಡಿಯಲ್ಲಿ ‘ನಂದಗೋಕುಲ ಗೋಶಾಲೆ’ ಯನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭಿಸಲಾಯಿತು. ಗೋ ಶಾಲೆಯಲ್ಲಿ 240 ಕ್ಕಿಂತಲೂ ಹೆಚ್ಚು ಅನಾಥ ಹಾಗೂ ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ ಗೋವುಗಳು ನೆಮ್ಮದಿಯ ದಿನಗಳನ್ನು ಕಾಣುತ್ತಿವೆ. ಅಲ್ಲದೇ ಗೋಶಾಲೆಯ ಮೂಲಕ ‘ಹೈನುಗಾರರಿಗೆ ಹಾಗೂ ಕೃಷಿಕರಿಗೆ ದೇಶೀ ಗೋತಳಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅವುಗಳನ್ನು ಪೋಷಿಸಲು ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.

ಮೇ 19 ಗೋಗ್ರಾಸ ಹೊರೆಕಾಣಿಕೆ ಬೃಹತ್ ಶೋಭಾಯಾತ್ರೆ:

‘ನಂದಗೋಕುಲದಲ್ಲಿ ಇನ್ನಷ್ಟು ಅನಾಥ ಗೋವುಗಳಿಗೆ ರಕ್ಷಣೆ , ಅದಕ್ಕಾಗಿ ಹಟ್ಟಿಗಳ ನಿರ್ಮಾಣ, ಮೇವಿನ ವ್ಯವಸ್ಥೆ, ಎರೆಗೊಬ್ಬರ ಘಟಕ, ಹಣತೆ, ದೂಪದ ಕಡ್ಡಿ ಇತ್ಯಾದಿ ಉಪ ಉತ್ಪನ್ನಗಳ ತಯಾರಿಗಾಗಿ ಯಂತ್ರೋಪಕರಣಗಳು ಮುಂತಾದವುಗಳ ಅವಶ್ಯಕತೆ ಇರುತ್ತಿದ್ದು, ಅದರ ಜೊತೆಗೆ ಈಗಾಗಲೇ ಇರುವ ಗೋವುಗಳ ಮೇವಿಗಾಗಿ ಸಮಾಜದ ಸಹಕಾರ ಬೇಕಾಗಿರುತ್ತದೆ. ಅದಕ್ಕಾಗಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಗೋಮಾತೆಗೆ ಗೋಗ್ರಾಸ ಸಂಗ್ರಹದ ‘ಗೋಗ್ರಾಸ ಹೊರೆಕಾಣಿಕೆ ಅರ್ಪಣೆ’ ಕಾರ್ಯಕ್ರಮವನ್ನು ಮೇ 19 ರಂದು ಹಮ್ಮಿಕೊಳ್ಳಲಾಗಿದೆ . ತಾಲೂಕಿನ ಪ್ರತಿ ಗ್ರಾಮದಿಂದ ಗೋ ಪ್ರೇಮಿಗಳು ಗೋಗ್ರಾಸವನ್ನು ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಎಪಿಎಂಸಿಗೆ ಮೈದಾನದಲ್ಲಿ ಒಟ್ಟು ಸೇರಿ ಅಲ್ಲಿಂದ ವಾಹನ ಮೆರವಣಿಗೆ ಮೂಲಕ ಕಳೆಂಜ ಗೋಶಾಲೆಗೆ ಕೊಂಡುಹೋಗಿ ಸಮಪಿ೯ಸಲಾಗುವುದು. ಉಜಿರೆ, ಧರ್ಮಸ್ಥಳ, ನಿಡ್ಲೆ, ಕೊಕ್ಕಡದ ಭಾಗದವರು ಅಲ್ಲಲ್ಲಿ ಮೆರವಣಿಗೆಯಲ್ಲಿ ಸೇರಿಕೊಳ್ಳಲಿದ್ದಾರೆ. ಗೋ ಪ್ರೇಮಿಗಳು ಹಸಿ ಹುಲ್ಲು, ಒಣಹುಲ್ಲು, ಪಶು ಆಹಾರ, ಕೃಷಿ ಉತ್ಪನ್ನಗಳಾದ ಅಡಿಕೆ, ತೆಂಗಿನಕಾಯಿ, ಅಕ್ಕಿ ಇತ್ಯಾದಿಗಳನ್ನು ಹೊರೆಕಾಣಿಕೆಯಾಗಿ ಅರ್ಪಿಸಬಹುದಾಗಿರುತ್ತದೆ. ಸಾರ್ವಜನಿಕರು ಗೋಗ್ರಾಸ ಅರ್ಪಿಸಿ, ತನು, ಮನ, ಧನದ ಸಹಕಾರವನ್ನು ನೀಡಬೇಕಾಗಿ ವಿನಂತಿಸುತ್ತೇವೆ ಎಂದು ತಿಳಿಸಿದರು.

ಮೇ 26: ನಂದಗೋಕುಲ ದೀಪೋತ್ಸವ

ಮೇ 26 ರಂದು ಕಾಮಧೇನು ವೇದಿಕೆ, ನಂದಗೋಕುಲ ಗೋಶಾಲೆ ಕಾಯರ್ತಡ್ಡ, ಕಳೆಂಜದಲ್ಲಿ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ಬಳಿಕ ಸಂಜೆ 6 .30 ಗಂಟೆಗೆ ಗೋ ಶಾಲೆಯಲ್ಲಿ
ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಇವರು ಗೌರವಾಧ್ಯಕ್ಷ ರಾಗಿರುವ ಸಮಿತಿ ನೇತೃತ್ವದಲ್ಲಿ ಮಾನವನ ಬದುಕಿನ ಸಂಜೀವಿನಿಯಾದ ಜಗಜ್ಜನನಿ ಗೋಮಾತೆಗೆ ಪ್ರಣಾಮ ಸಲ್ಲಿಸುವ ವಿಶಿಷ್ಠ ಕಾರ್ಯಕ್ರಮ. ‘ನಂದಗೋಕುಲ ದೀಪೋತ್ಸವ’ ಪುಣ್ಯಕೋಟಿಗೆ ಒಂದು ಕೋಟಿ… ಗೋಮಾತೆಗೆ ಕೋಟಿಯ ನಮನ… ಸಾಮೂಹಿಕ ಗೋಪೂಜೆ, ಗೋನಂದಾರತಿ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಸಮಿತಿ ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಮಾತನಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಎಲ್ಲಾ ತಯಾರಿ ನಡೆಸಲಾಗುತ್ತಿದೆ. ಗೋವುಗಳ ಆರೈಕೆಗಾಗಿ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಪುಣ್ಯಕೋಟಿಗೆ ಒಂದು ಕೋಟಿ ಗೋಮಾತೆಗೆ ಕೋಟಿ ನಮನ. ಎಂಬಂತೆ  ತಾಲೂಕಿನ ಎಲ್ಲಾ ಹಿಂದುಗಳ ಮನೆಗಳಿಗೆ ಆಮಂತ್ರಣವನ್ನು ಹಂಚುವ ಕೆಲಸ ನಡೆಯುತ್ತಿದೆ. ಎಲ್ಲರೂ ಉತ್ತಮ ರೀತಿಯಲ್ಲಿ ಸ್ಪಂದಿಸುತಿದ್ದಾರೆ. ಆದ್ದರಿಂದ ಎಲ್ಲರೂ ಗೋ ರಕ್ಷಣೆಗಾಗಿ ತನು ಮನ ಧನದ ಸಹಾಯವನ್ನು ನೀಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ , ಪದ್ಮಕುಮಾರ್ ಹೆಚ್ ಉಪಸ್ಥಿತರಿದ್ದರು.

error: Content is protected !!