ಸುವರ್ಣ ಸೇವಾ ಸಂಭ್ರಮದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್: ನ.4 ರಂದು 50 ವಿವಿಧ ಸೇವಾ ಕಾರ್ಯಕ್ರಮ: ತಾಲೂಕಿಗೆ ಜಿಲ್ಲಾ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ ಭೇಟಿ

ಬೆಳ್ತಂಗಡಿ: 50 ನೇ ವರ್ಷದ ಸುವರ್ಣ ಸೇವಾ ಸಂಭ್ರಮದಲ್ಲಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ನ.4 ರಂದು ಜಿಲ್ಲಾ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ ಅವರು ಅಧಿಕೃತ ಭೇಟಿ ನೀಡುತ್ತಿದ್ದು ಈ ವೇಳೆ 4 ಅರ್ಹ ಕುಟುಂಬಕ್ಕೆ ಮನೆಗಳ ಹಸ್ತಾಂತರ ಸೇರಿದಂತೆ 50ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಹೇಳಿದರು.

ಜೇಸಿ ಭವನ ಬೆಳ್ತಂಗಡಿಯಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಾಳ ಗೇರುಕಟ್ಟೆಯ ಶಶಿಕಲಾ ತಾರಿದಡಿ ಅವರ ಕುಟುಂಬಕ್ಕೆ ಉಮೇಶ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ 7.90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆ ಮತ್ತು ರೇಷ್ಮೆ ರೋಡ್ ನ ಮೈರಳಿಕೆ ನಿವಾಸಿ ಗುಲಾಬಿ ಅವರಿಗೆ 2.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆ, ದೇವದಾಸ ಶೆಟ್ಟಿ ಹಿಬರೋಡಿ ಅವರ ಪ್ರಾಯೋಜಕತ್ವದಲ್ಲಿ ಪಡಂಗಡಿಯ ಚಂದ್ರಕಲಾ ನಾಯ್ಕ್ ಕುಟುಂಬಕ್ಕೆ 7 ಸೆಂಟ್ಸ್ ಜಾಗ ಮಂಜೂರಾತಿ ಯೊಂದಿಗೆ 8.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆ ಮತ್ತು ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ ಶೀನ ಎಂಬವರಿಗೆ 6.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಗಳನ್ನು ನ.4 ರಂದು ಜಿಲ್ಲಾ ರಾಜ್ಯಪಾಲರು ಹಸ್ತಾಂತರಿಸಲಿದ್ದಾರೆ ಎಂದರು.
ಎನ್.ಎ ಗೋಪಾಲ ಶೆಟ್ಟಿ ಅವರ ಸ್ಮರಣಾರ್ಥ, ಅವರ ಫೇಮಿಲಿ ಟ್ರಸ್ಟ್ ಸಹಕಾರದೊಂದಿಗೆ ಲಾಯಿಲದ ಪುತ್ರಬೈಲು, ಕುವೆಟ್ಟು ಗ್ರಾಮದ ಶಕ್ತಿನಗರ ಮತ್ತು ಪಣೆಜಾಲು ಎಂಬಲ್ಲಿ ಒಟ್ಟು 4.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಉದ್ಘಾಟನೆ ನಡೆಯಲಿದೆ ಎಂದರು.

82 ಲಕ್ಷ ವೆಚ್ಚದಲ್ಲಿ ಲಯನ್ಸ್ ಸುವರ್ಣ ಸದನಕ್ಕೆ ಶಿಲಾನ್ಯಾಸ
ಕ್ಯಾಂಪ್ಕೋ ರಸ್ತೆಯಲ್ಲಿರುವ ಲಯನ್ಸ್ ಸೇವಾ ಟ್ರಸ್ಟ್ ಭೂಮಿಯಲ್ಲಿ ಲಯನ್ಸ್ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಲಯನ್ಸ್ ಸುವರ್ಣ ಸದನ ನಿರ್ಮಾಣಕ್ಕೆ ಈಗಾಗಲೇ ರಾಜು ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಟ್ಟಡ ಸಮಿತಿ ರಚಿಸಲಾಗಿದ್ದು ಅದರ ನೇತೃತ್ವದಲ್ಲಿ ಕಾಮಗಾರಿಗೆ ಶಿಲಾನ್ಯಾಸವನ್ನು ರಾಜ್ಯಪಾಲರು ಈ ವೇಳೆ ನೆರವೇರಿಸಲಿದ್ದಾರೆ.

50 ಸೇವಾ ಚಟುವಟಿಕೆ
ರಾಜ್ಯಪಾಲರ ಭೇಟಿಯ ದಿನ 50 ನೇ ವರ್ಷದ ಅಂಗವಾಗಿ 50 ಬಗೆಯ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಕೌಂಟರ್ ಟೇಬಲ್ ಸೆಟ್, ನಗರದ ಅನುಗ್ರಹ ವೃದ್ಧಾ ಕೇಂದ್ರಕ್ಕೆ ಆಹಾರ ಸಾಮಾಗ್ರಿ ವಿತರಣೆ, ಬೆಳ್ತಂಗಡಿ ಮಾದರಿ ಶಾಲೆಗೆ ನೀರು ಶುದ್ಧೀಕರಣ ಘಟಕ, ಇಂದಬೆಟ್ಟು ಸರಕಾರಿ ಶಾಲೆಗೆ ಪೀಠೋಪಕರಣ ಹಸ್ತಾಂತರ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಧ್ವಜ ಕಟ್ಟೆ ಕೊಡುಗೆ ಸೇರಿದಂತೆ 50 ರಷ್ಟು ಸೇವಾ ಚಟುವಟಿಕೆಗಳನ್ನು ರಾಜ್ಯಪಾಲರು ನಡೆಸಿಕೊಡಲಿದ್ದಾರೆ. ಇಡೀ ದಿನ ತಾಲೂಕು ಪ್ರವಾಸದ ಮಧ್ಯೆ ರಾಜ್ಯಪಾಲರು ಉಜಿರೆಯ ಸಾನಿದ್ಯ ಎಂಡೋ ಪೀಡಿತರ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ. ಸಂಜೆ ಅಯ್ಯಪ್ಪ ದೇವಸ್ಥಾನದಿಂದ ಚರ್ಚ್ ಸಭಾಂಗಣದವರೆಗೆ ರಾಜ್ಯಪಾಲರನ್ನು ವಾಹನ ಜಾಥಾದ ಮೂಲಕ ಚರ್ಚ್ ಸಭಾಂಗಣ ಕ್ಕೆ ಕರೆತರಲಾಗುವುದು. ಬಳಿಕ ಅವರು ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಸೇವಾ ವಿಭಾಗದ ಸಂಯೋಜಕ ವಸಂತ ಶೆಟ್ಟಿ “ಶ್ರದ್ಧಾ” ಮತ್ತು ಮಾಧ್ಯಮ ಸಂಯೋಜಕ  ಅಶ್ರಫ್ ಆಲಿಕುಂಞಿ ಮುಂಡಾಜೆ, ಸದಸ್ಯ ಮಂಜುನಾಥ ಜಿ ಉಪಸ್ಥಿತರಿದ್ದರು.

error: Content is protected !!