ಫಲಿಸಿದ ಸಮ್ಮೇದ್ ಶಿಖರ್ಜಿ ಹೋರಾಟ:ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಳಿಸಿ ಕೇಂದ್ರ ಆದೇಶ:ಮಂದಿರದ ಪಾವಿತ್ರ್ಯತೆ ರಕ್ಷಿಸಲು ಕ್ರಮ ಕೈಗೊಳ್ಳಲು ಸೂಚನೆ:ಧರ್ಮಾಧಿಕಾರಿ ಡಾ.ಡಿ ವೀರೆಂದ್ರ ಹೆಗ್ಗಡೆ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ:

 

 

 

 

ದೆಹಲಿ: ಜೈನ ಸಮುದಾಯದ ಅತ್ಯಂತ ಪವಿತ್ರ ಶ್ರದ್ಧಾ ಭಕ್ತಿಯ ಕೇಂದ್ರವಾದ ಶ್ರೀ ಸಮ್ಮೇದ್ ಶಿಖರ್ಜಿಯನ್ನು ‘ಪ್ರವಾಸಿ ತಾಣ’ವೆಂದು ಘೋಷಿಸಿರುವ ಜಾರ್ಖಂಡ್ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ಜೋರಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರವು ‘ಸಮ್ಮೇದ್ ಶಿಖರ್ಜಿ’ ಇರುವ ಪರಸ್ನಾಥ್ ಬೆಟ್ಟದಲ್ಲಿ ತನ್ನ ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳನ್ನು ಗುರುವಾರ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ, ಮಂದಿರಗಳ ಪಾವಿತ್ರ್ಯತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವಂತೆಯೂ ಜಾರ್ಖಂಡ್ ಸರ್ಕಾರಕ್ಕೆ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಕೇಂದ್ರ ಪರಿಸರ ಸಚಿವಾಲಯವು ಈ ಕುರಿತು ರಾಜ್ಯಕ್ಕೆ ಪತ್ರವನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಜೈನ ಸಮುದಾಯದ ಕೆಲ ಮುಖಂಡರು ಭೇಟಿ ಮಾಡಿ, ತಮ್ಮ ಪ್ರಧಾನ ದೇಗುಲದ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಘೋಷಿಸುವುದರಿಂದ ಅದರ ಪಾವಿತ್ರ್ಯಕ್ಕೆ ಧಕ್ಕೆಯಾಗಲಿದೆ. ಜೈನ ಧರ್ಮವು ಅಹಿಂಸೆಯನ್ನು ನಂಬುತ್ತದೆ. ಅಲ್ಲಿನ ಸರ್ಕಾರದ ನಿರ್ಧಾರದಿಂದಾಗಿ ಮಾಂಸಾಹಾರಿ ಹೋಟೆಲ್‌, ಬಾರ್‌ಗಳು ತಲೆ ಎತ್ತಲಿವೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು.ಅದಲ್ಲದೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕೂಡ ಈ ಬಗ್ಗೆ ಪರಿಶೀಲಿಸುವಂತೆ ಪ್ರಧಾನಿಯವರಿಗೆ ಪತ್ರ ಬರೆದಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವರು, ಸಮ್ಮೇದ್ ಶಿಖರ್ಜಿಯನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ ಬಳಿಕ ಕೇಂದ್ರ ಸರ್ಕಾರದಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದ ಜೈನರು ಹೋರಾಟವನ್ನು ಹಿಂತೆಗೆದುಕೊಂಡಿದ್ದಾರೆ.

ಶ್ರೀ ಸಮ್ಮೇದ್ ಶಿಖರ್ಜಿ ಮಹತ್ವ:

ಜೈನ ಪವಿತ್ರ ಕ್ಷೇತ್ರಗಳಿರುವ ಸಮ್ಮೇದ್ ಶಿಖರ್ಜಿ ಇರುವ ಪಾರಸ್‌ನಾಥ್ ಬೆಟ್ಟಗಳು ಜಾರ್ಖಂಡ್‌ನ ಗಿರಿಡಿ ಜಿಲ್ಲೆಯಲ್ಲಿವೆ. ಇದು ಈ ರಾಜ್ಯದ ಅತಿ ದೊಡ್ಡ ಪರ್ವತ ಶ್ರೇಣಿಯೂ ಹೌದು. ಪಾರಸ್‌ನಾಥ್ ಬೆಟ್ಟಗಳು ರಾಜಧಾನಿ ರಾಂಚಿಯಿಂದ ಸುಮಾರು 160 ಕಿ.ಮೀಟರ್‌ ದೂರದಲ್ಲಿದೆ. ಸಮ್ಮೇದ್ ಶಿಖರ್ಜಿಯು ಜೈನ ಧರ್ಮದ ದಿಗಂಬರ ಮತ್ತು ಶ್ವೇತಾಂಬರ ಪಂಥದವರಿಗೆ ಅತ್ಯಂತ ಶ್ರದ್ಧಾ ಭಕ್ತಿಯ ಯಾತ್ರಾ ಕೇಂದ್ರ. ಜೈನ ಧರ್ಮದ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಇದೇ ಬೆಟ್ಟಗಳಲ್ಲಿ ಮೋಕ್ಷ ಹೊಂದಿದ್ದಾರೆ ಎಂಬ ನಂಬಿಕೆ ಇದೆ.

ಕೇಂದ್ರ ಪರಿಸರ ಸಚಿವಾಲಯದ ಪತ್ರದಲ್ಲೇನಿದೆ?:

ಪಾರಸ್ನಾಥ್ ಬೆಟ್ಟದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಸಮುದಾಯದ ಸದಸ್ಯರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರು. ಆಗಸ್ಟ್ 2019ರಲ್ಲಿ ಪರಿಸರ ಸಚಿವಾಲಯವು ಪರಸ್ನಾಥ್ ವನ್ಯಜೀವಿ ಅಭಯಾರಣ್ಯದ ಸುತ್ತಲೂ ಪರಿಸರ-ಸೂಕ್ಷ್ಮ ವಲಯ (ESZ)ವೆಂದು ಸೂಚಿಸಿತ್ತು. ರಾಜ್ಯ ಸರ್ಕಾರವು ಸಲ್ಲಿಸಿದ ಪ್ರಸ್ತಾವನೆಗೆ ಅನುಗುಣವಾಗಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತೆ ಅನುಮೋದಿಸಿತ್ತು. ಇದು ಜೈನ ಧರ್ಮದ ಅನುಯಾಯಿಗಳ ಭಾವನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಜಾರ್ಖಂಡ್ ಸರ್ಕಾರವು ಪರಾಸ್ನಾಥ್ ಬೆಟ್ಟವನ್ನು ‘ಪರಿಸರ ಪ್ರವಾಸೋದ್ಯಮ’ ಪ್ರದೇಶ ಎಂದು ಘೋಷಣೆ ಮಾಡಿರುವುದು ಮತ್ತು ಪರಿಸರ-ಸೂಕ್ಷ್ಮ ವಲಯ ಅಧಿಸೂಚನೆಯ ನಿಬಂಧನೆಗಳು ದೋಷಪೂರಿತವಾಗಿದೆ. ರಾಜ್ಯದ ಅಧಿಕಾರಿಗಳ ಇಂತಹ ನಿರ್ಲಕ್ಷ್ಯವು ಜೈನರ ಭಾವನೆಗಳನ್ನು ಘಾಸಿಗೊಳಿಸಿದೆ. ಹಾಗಾಗಿ, ಎಲ್ಲಾ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಒಳಗೊಂಡಂತೆ ಹೇಳಲಾದ ಪರಿಸರ-ಸೂಕ್ಷ್ಮ ವಲಯ ಅಧಿಸೂಚನೆಯ ಷರತ್ತು 3 ರ ನಿಬಂಧನೆಗಳ ಅನುಷ್ಠಾನವನ್ನು ತಕ್ಷಣವೇ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ. ಜೊತೆಗೆ, ಕೇಂದ್ರ ಸರ್ಕಾರವು ಸಮ್ಮೇದ್ ಶಿಖರ್ಜಿ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಲು ಸದಾ ಸಿದ್ಧ, ಇದು ಜೈನ ಸಮುದಾಯಕ್ಕೆ ಮಾತ್ರವಲ್ಲದೇ ರಾಷ್ಟ್ರಕ್ಕೆ ಮಹತ್ವದ್ದಾಗಿದೆ. ಅದನ್ನು ಕಾಪಾಡಿಕೊಳ್ಳುವುದು ಸರ್ಕಾರದ ಬದ್ಧತೆ ಎಂದು ಪುನರುಚ್ಚರಿಸಿದೆ.

ಕೇಂದ್ರ, ಜಾರ್ಖಂಡ್‌ ಸರ್ಕಾರಕ್ಕೆ ಧನ್ಯವಾದ:

ಸರ್ಕಾರದಿಂದ ಆದೇಶ ಹೊರಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಜೈನ ಪ್ರತಿನಿಧಿಗಳು, ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ನಮ್ಮ ಕಳವಳಮತ್ತು ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜಾರ್ಖಂಡ್‌ ಸರ್ಕಾರಕ್ಕೂ ಧನ್ಯವಾದ ತಿಳಿಸಿದ್ದಾರೆ.

error: Content is protected !!