ಡಿ.03ರಂದು ವೇಣೂರು-ಪೆರ್ಮುಡ ಕಂಬಳ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗಿ: ಕಂಬಳ ಸಮಿತಿಯಿಂದ   ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ:

 

 

 

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ವೇಣೂರು-ಪೆರ್ಮುಡ ಹೊನಲು ಬೆಳಕಿನ 30 ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳ ಡಿ.03ರಂದು ಉದ್ಘಾಟನೆಗೊಳ್ಳಲಿದ್ದು, ಡಿ04 ರಂದು ಮಾಜಿ ಮುಖ್ಯಮಂತ್ರಿ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಂಬಳ ಕೂಟದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಂಬಳ ಸಮಿತಿಯ ಕಾರ್ಯಧ್ಯಕ್ಷ ಶೇಖರ ಕುಕ್ಕೆಡಿ ಹೇಳಿದರು.ಅವರು
ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ವಿಶೇಷವಾಗಿ ಮೂರು ದಶಕದ ಹಿನ್ನೆಲೆಯನ್ನು ಹೊಂದಿರುವ  30ನೇ ವರ್ಷದ ಕಂಬಳ ಇದಾಗಿದ್ದು ಈಗಾಗಲೇ ಕಂಬಳದ ಎಲ್ಲ ಪೂರ್ವ ತಯಾರಿ ನಡೆಸಲಾಗಿದೆ. ನಿಗದಿಯಂತೆ 48 ಗಂಟೆಯೊಳಗೆ ಮುಗಿಸಲು ಎಲ್ಲ ಸಿದ್ಧತೆಗಳನ್ನು, ಅದಕ್ಕೆ ಬೇಕಾದ ವಿವಿಧ ಸಮಿತಿಗಳನ್ನು ಈಗಾಗಲೇ ರಚಿಲಾಗಿದೆ ಎಂದು ತಿಳಿಸಿದರು.

 

 

ಜಾಹೀರಾತು

 

ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಮಾತನಾಡಿ, ಕಂಬಳವನ್ನು ಡಿ.03ರಂದು ಬೆಳಗ್ಗೆ 8-30 ಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮ ಪ್ರಸಾದ್ ಅಜಿಲರು ಉದ್ಘಾಟಿಸಲಿದ್ದಾರೆ. ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ್ ಪೃಥ್ವಿ ಸಾನಿಕಂ, ವೃತ್ತ ನಿರೀಕ್ಷಕ ಶಿವಕುಮಾರ್ ಬಿ.ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಗೌರವ ಅಧ್ಯಕ್ಷ, ಮಾಜಿ ಶಾಸಕ ಕೆ.ವಸಂತ ಬಂಗೇರ ವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಬಿ.ಕೆ.ಹರಿಪ್ರಸಾದ್, ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗಣ್ಯರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಕಂಬಳದಲ್ಲಿ ಕನೆ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ಹೀಗೆ ಒಟ್ಟು 6 ವಿಭಾಗದಲ್ಲಿ ಕೋಣಗಳ ಓಟದ ಸ್ಪರ್ಧೆಯು ನಡೆಯಲಿದೆ. ಈ ಹಿಂದೆ ಇದ್ದಂತೆ ಜಾಗದ ತಕರಾರು ಇಲ್ಲವಾಗಿದ್ದು, ಒಟ್ಟು 200 ಕ್ಕಿಂತಲೂ ಅಧಿಕ ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಸ್ಟೀವನ್ ಮೋನಿಸ್, ಸಲಹೆಗಾರ ಪದ್ಮನಾಭ ಸಾಲಿಯಾನ್ ಮಾಲಾಡಿ, ಸದಸ್ಯರಾದ ದಯಾನಂದ ದೇವಾಡಿಗ, ಜಯಂತ ಕೋಟ್ಯಾನ್ ಉಪಸ್ಥಿತರಿದ್ದರು.

error: Content is protected !!