ಮದ್ಯಪಾನ, ಮಾದಕ ವಸ್ತುಗಳ ವೈಭವೀಕರಣ ನಿಲ್ಲಲಿ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಲಾಯಿಲಾ ವ್ಯಸನಮುಕ್ತ ಕೇಂದ್ರದಲ್ಲಿ 158ನೇ ವಿಶೇಷ ಮದ್ಯವರ್ಜನ ಶಿಬಿರ

ಬೆಳ್ತಂಗಡಿ: ಮದ್ಯ ಪಾಪಕೃತ್ಯಗಳನ್ನು ಮಾಡಲು ಉತ್ತೇಜಿಸುವ ವಂಚಕ ಪೇಯ. ಸ್ಥಿತಪ್ರಜ್ಞೆಯಿಂದ ಹೊರಬಂದು ತನ್ನನ್ನು ತಾನು ಮರೆತು ಮಾಡುವ ದುಷ್ಕೃತ್ಯಗಳಿಗೆ ಮೂಲ ಕಾರಣವೇ ಅಮಲು ಪದಾರ್ಥಗಳಾಗಿವೆ. ಆದುದರಿಂದ ಜಾಹೀರಾತುಗಳಲ್ಲಿ, ಸಿನೆಮಾಗಳಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ವೈಭವೀಕರಣವನ್ನು ನಿಲ್ಲಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

ಅವರು ಶನಿವಾರ ಉಜಿರೆ ಲಾಯಿಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ 158ನೇ ವಿಶೇಷ ಮದ್ಯವರ್ಜನ ಶಿಬಿರದ 66 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮನುಷ್ಯನ ವ್ಯಕ್ತಿತ್ವವನ್ನು ಮರೆಮಾಚುವ, ಸಹಜ ಸ್ವಭಾವವನ್ನು ಮರೆತು ಬಾಳಲು ಪ್ರೇರೇಪಿಸುವ, ಯಾವುದೇ ನೀಚ, ಅಮಾನವೀಯ, ಕ್ರೂರ, ಸೇಡು ತೀರಿಸಿಕೊಳ್ಳುವ ಕಾರಣಕ್ಕಾಗಿ ಸುಲಭವಾಗಿ ಉಪಯೋಗಿಸುವ ವಸ್ತುಗಳೇ ಮದ್ಯಪಾನ ಮತ್ತು ಮಾದಕ ವಸ್ತುಗಳು. ಇತ್ತೀಚೆಗೆ ಯುವಜನತೆ ಮಾದಕ ವಸ್ತುಗಳ ಬಳಕೆಯ ಒಲವಿಗೆ ಮತ್ತು ಆಕರ್ಷಣೆಗೆ ಒಳಗಾಗುತ್ತಿದ್ದಾರೆ ಎಂದರು.

ವ್ಯಸನವೆಂಬ ಪ್ರವಾಹದಲ್ಲಿ ಕೊಚ್ಚಿಹೋಗುವವರನ್ನು ಮೇಲೆ ತರಲು ಪ್ರಯತ್ನಿಸುವುದು ಸುಲಭವೇನಲ್ಲ. ಇಂತಹವರೊಂದಿಗೆ ಜಾಗ್ರತೆ ಮತ್ತು ಜಾಣ್ಮೆಯಿಂದ ವ್ಯವಹರಿಸಬೇಕಾಗಿದೆ. ಮನಸ್ಸಿನ ಪರಿವರ್ತನೆಯೇ ಬದಲಾವಣೆಯ ಮುಹೂರ್ತಕ್ಕೆ ಸಾಕ್ಷಿಯಾಗಿದೆ.

ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋವೈದ್ಯರು ಶಿಬಿರಾರ್ಥಿಗಳ ಯೋಗಕ್ಷೇಮ ಚಿಂತನೆಯೊಂದಿಗೆ ವಿಮರ್ಶೆ ನಡೆಸಿ, ಚಿಕಿತ್ಸೆ ನಡೆಸಿದ್ದಾರೆ. ವೈದ್ಯಾಧಿಕಾರಿಗಳಾದ ಡಾ.ಬಾಲಕೃಷ್ಣ ಭಟ್, ಡಾ.ಮೋಹನ್‌ದಾಸ್ ಗೌಡ ಶಿಬಿರಾರ್ಥಿಗಳ ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಜನಜಾಗೃತಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಸ್, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ದಿವಾಕರ್, ಆರೋಗ್ಯ ಸಹಾಯಕಿ ಸೌಮ್ಯ ಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರ ಮಾರ್ಚ್ 15 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

error: Content is protected !!