ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ಬೆಳ್ತಂಗಡಿ ತಾಲೂಕಿನ ಸುಧಾಕರ ಗೌಡ: 17 ವರ್ಷಗಳ ಸುದೀರ್ಘ ದೇಶ ಸೇವೆ

ಬೆಳ್ತಂಗಡಿ: ಪುಡ್ಕೆತ್ತು ನಿವಾಸಿ ಧರ್ಮಸ್ಥಳ ಮಂಡಲ‌ ಪಂಚಾಯತ್ ಮಾಜಿ ಪ್ರಧಾನ್ ಹಾಗೂ ಪ್ರಗತಿಪರ ಕೃಷಿಕ ಸುಂದರ ಗೌಡ ಮತ್ತು ವಿಶಾಲಾಕ್ಷಿ ದಂಪತಿ ಪುತ್ರ ಸುಧಾಕರ ಗೌಡ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.

ಭಾರತೀಯ ಸೇನೆಯಲ್ಲಿ 2004 ರಿಂದ 2021 ರವರೆಗೆ ಒಟ್ಟು 17 ವರ್ಷಗಳಲ್ಲಿ‌ ದೇಶಸೇವೆಗೈದು ಜ.31ರಂದು ನಿವೃತ್ತಿ ಹೊಂದಿದರು.
ಕರ್ತವ್ಯ ನಿರ್ವಹಿಸುವ ಸಂದರ್ಭ, ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್‌ಸಿ) ನಲ್ಲಿ ಸಿಪಾಯಿಯಾಗಿ ಜಮ್ಮು ಕಾಶ್ಮೀರದ ರಜೋರಿ, ಕಾರ್ಗಿಲ್, ಹರ್ಯಾಣ, ದೆಹಲಿ, ರಾಜಸ್ಥಾನ ಮತ್ತು ಕಲ್ಕತ್ತಾದಲ್ಲಿ ಸೇವೆ ಸಲ್ಲಿಸಿದ್ದಾರೆ‌.

ಇವರು ಪ್ರಾಥಮಿಕ ಶಿಕ್ಷಣವನ್ನು ಧರ್ಮಸ್ಥಳ ಕನ್ಯಾಡಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯಲ್ಲಿ ಪೂರ್ತಿಗೊಳಿಸಿ, ನೆಲ್ಯಾಡಿಯ ಬೆಥನಿ ಸಂಸ್ಥೆಯಲ್ಲಿ ಐಟಿಐ ಓದುತ್ತಿದ್ದ ಸಂದರ್ಭ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ, ಆಯ್ಕೆಯಾಗಿದ್ದರು.

ಸುಧಾಕರ್ ಅವರ ಸಹೋದರಿ ಗಾಯತ್ರಿ ದಿನೇಶ್ ಗೌಡ ಅವರು ನಿಡ್ಲೆ ಮತ್ತು ನೆರಿಯ ಗ್ರಾ.ಪಂ. ಪಿಡಿಒ ಆಗಿದ್ದು, ಇನ್ನೋರ್ವ ಸಹೋದರ ಸುದರ್ಶನ ಗೌಡ ಅವರು ಬೆಂಗಳೂರಿನ ಖಾಸಗಿ ಸುದ್ದಿ ವಾಹಿನಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ‌.

error: Content is protected !!