ಕಾಜೂರು ದರ್ಗಾ ಶರೀಫ್‌ನಲ್ಲಿ ಫೆ.19ರಿಂದ ಆರಂಭವಾಗಿ ಫೆ. 28 ರವರೆಗೆ ಉರೂಸ್: ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಕಾಜೂರು ಮಾಹಿತಿ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾ ಶರೀಫ್‌ನಲ್ಲಿ ಫೆ.19 ರಿಂದ ಉರೂಸ್ ಆರಂಭವಾಗಲಿದೆ. ಫೆ.19ರಿಂದ ಆರಂಭವಾಗಿ ಫೆ. 28 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಕಾಜೂರು ‌ತಿಳಿಸಿದರು.

ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮತ್ತು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ರವರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸಲಿದ್ದಾರೆ. ಫೆ. 19 ರಂದು ಉರೂಸನ್ನು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಉದ್ಘಾಟಿಸಲಿದ್ದು, ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ಧ್ವಜಾರೋಹಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಯ್ಯಿದ್ ಕೂರತ್ ತಂಙಳ್ ಅಧ್ಯಕ್ಷತೆ ವಹಿಸಿ, ದುಆ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಸಯ್ಯಿದರುಗಳು, ಕಾವಳಕಟ್ಟೆ ಹಝ್ರತ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ತಾಲೂಕಿನ ಮಸ್ಜಿದ್‌ಗಳ ಅಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದರು.

ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ಧ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಫೆ. 19 ರಂದು ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ. ಫೆ. 25ರಂದು ಬೃಹತ್ ದಿಕ್ರ್ ಮಜ್ಲಿಸ್‌ಗೆ ಸುಲ್ತಾನುಲ್ ಉಲಮಾ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಖಾಝಿ ಮಾಣಿ ಉಸ್ತಾದ್ ಸಹಿತ ಹಲವಾರು ವಿದ್ವಾಂಸರು, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಜಿಫ್ರಿ ತಂಙಳ್ ಬೆಳ್ತಂಗಡಿ ಸಹಿತ ಅನೇಕ ಸಯ್ಯಿದರು, ಉಲಮಾಗಳು, ಸಾಮಾಜಿಕ ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ. ಫೆ. 28ರಂದು ಸಂಜೆ ಸರ್ವ ಧರ್ಮೀಯರ ಸೌಹಾರ್ದ ಸಮಾರಂಭ ನಡೆಯಲಿದ್ದು, ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಎಮ್ ಶಾಫಿ ಸಅದಿ ಬೆಂಗಳೂರು, ಡಾ. ಅಬ್ದುಲ್ ರಶೀದ್ ಝೈನಿ ಸಖಾಫಿ ಅಲ್ಲದೆ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರು, ಕೇಂದ್ರ ಹಾಗೂ ರಾಜ್ಯದ ಸಚಿವರುಗಳು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ರಾತ್ರಿ ಉರೂಸ್ ಸಮಾರೋಪದಲ್ಲಿ ವಿಶ್ವವಿಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲಾರ ಮುಖ್ಯ ಭಾಷಣಗೈಯ್ಯಲಿದ್ದಾರೆ. ಮರ್‌ಹೂಮ್ ಕಾಜೂರು ತಂಙಳ್ ಸಹೋದರ ಸಯ್ಯಿದಲವಿ ಕೋಯ ಜಮಲುಲ್ಲೈಲಿ ತಂಙಳ್ ಕೇರಳ ಭಾಗಿಯಾಗಲಿದ್ದಾರೆ. ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಬೆಲ್ಲದಗಂಜಿ ವಿತರಣೆ, ಸಾರ್ವಜನಿಕರಿಗೆ ಮಹಾ ಅನ್ನದಾನ ನಡೆಯಲಿದೆ ಎಂದು ಮಾಹಿತಿ ‌ನೀಡಿದರು.

ಕಿಲ್ಲೂರು ಆಡಳಿತ ಸಮಿತಿ ಉಪಾಧ್ಯಕ್ಷ ಎಂ. ಅಬೂಬಕ್ಕರ್ ಮಲ್ಲಿಗೆಮನೆ, ಉರೂಸ್ ಸಮಿತಿ ಪ್ರ. ಕಾರ್ಯದರ್ಶಿ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಎಂ.ಎ. ಕಾಸಿಂ ಮಲ್ಲಿಗೆ ಮನೆ ಕಿಲ್ಲೂರು, ಕೋಶಾಧಿಕಾರಿ ಕೆ.ಯು ಮುಹಮ್ಮದ್ ಕಮಾಲ್ ಕಾಜೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!