ಹುತಾತ್ಮರ ಸ್ಮರಣೆ ದೇಶದ ಪ್ರಜೆಗಳ ಕರ್ತವ್ಯ: ರಘುವೀರ್ ಹೇಳಿಕೆ: ವೇಣೂರಿನಲ್ಲಿ ‘ಹುತಾತ್ಮ ದಿವಾಸ್’ ಆಚರಣೆ

ವೇಣೂರು: ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ‌ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾಡಿದ ಸಾಧನೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ. ರಾಷ್ಟ್ರದ ಪ್ರಜೆಗಳು ಸಮಾಜಮುಖೀ ಕೆಲಸದಲ್ಲಿ ಭಾಗವಹಿಸುವುದು ಕರ್ತವ್ಯವಾಗಿದೆ ಎಂದು ಮಂಗಳೂರು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ ಹೇಳಿಸಿದರು.

ಅವರು ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಯುವತಿ ಮಂಡಲ ವೇಣೂರು, ಮಹಿಳಾ ಮಂಡಲ ವೇಣೂರು, ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕ ತರಬೇತಿ ಸಂಸ್ಥೆ ಇದರ ಸಹಯೋಗದಲ್ಲಿ ‘ಹುತಾತ್ಮ ದಿವಾಸ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸಲು ಜ.30ರಂದು ಹುತಾತ್ಮರ ದಿನಾಚರಣೆ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ಗಿರೀಶ್ ಕೆ.ಎಚ್. ಮಾತನಾಡಿ, ರಾಷ್ಟ್ರಸೇವೆ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ನೀಡುವಂತೆ ಯುವಜನತೆಗೆ ಪ್ರೋತ್ಸಾಹ ನೀಡುವುದು ಹಾಗೂ ದೇಶಸೇವೆ ಮಾಡುವವರನ್ನು ಪ್ರೋತ್ಸಾಹಿಸಿ, ಗೌರವಿಸುವುದು ದೇಶದ ಪ್ರಜೆಗಳ ಕರ್ತವ್ಯವಾಗಬೇಕು ಎಂದರು.

ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಅಧ್ಯಕ್ಷೆ ಶೋಭಾ ಹೆಗ್ಡೆ, ವೇಣೂರು ಯುವತಿ ಮಂಡಲ ಕಾರ್ಯದರ್ಶಿ ಅನುಷಾ ಭಂಡಾರಿ, ವೇಣೂರು ಮಹಿಳಾ ಮಂಡಲ ಕಾರ್ಯದರ್ಶಿ ಪದ್ಮ ಹರೀಶ್, ಮಹಿಳಾ ಮಂಡಲ ಮತ್ತು ಯುವತಿ ಮಂಡಲ ರಿ. ವೇಣೂರು ಇದರ ಸರ್ವ ಸದಸ್ಯರು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಶಿಕ್ಷಣಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ನೆಹರು ಯುವ ಕೇಂದ್ರ ಬೆಳ್ತಂಗಡಿ ತಾಲೂಕು ಸಂಯೋಜಕ ತೀಕ್ಷಿತ್ ಕುಮಾರ್ ಕೆ. ದಿಡುಪೆ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾಧ್ಯಾಪಕ‌ ಸತೀಶ್‌ ಸ್ವಾಗತಿಸಿ, ಪ್ರಭಾ ಶರ್ಮ ನಿರೂಪಿಸಿದರು. ಸಂಭಾಷಿಣಿ ವಂದಿಸಿದರು.

error: Content is protected !!