ಅನಾಗರೀಕರಂತೆ‌ ಮಾತನಾಡಿದ ಮಾಜಿ‌ ಶಾಸಕರು: ಮೊದಲಿನಿಂದಲೂ ಇದೆ ಆಣೆ ಪ್ರಮಾಣದ ಚಟ : ಪ್ರತಾಪ್ ಸಿಂಹ‌ ನಾಯಕ್

ಬೆಳ್ತಂಗಡಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು‌ ತಮ್ಮ ಕೀಳು ಮಟ್ಟದ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಶಾಸಕ ವಸಂತ ಬಂಗೇರ ಅವರು ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಏಕವಚನ, ಅನಾಗರೀಕವಾಗಿ ಪದ ಬಳಕೆ ಮಾಡುವ ಮೂಲಕ ಕೀಳು‌ಮಟ್ಟಕ್ಕೆ ಇಳಿದಿದ್ದಾರೆ.‌ ಇದು ಅವರು ಐದು ಬಾರಿ ತಾಲೂಕಿನ ಶಾಸಕರಾದ ಅವರಿಗೆ ಶೋಭೆ ತರುವುದಿಲ್ಲ. ಜನ ಇದನ್ನು ಗಮನಿಸುತ್ತಿದ್ದು ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇ.ವಿ.ಎಂ. ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ಬ್ಯಾಲೆಟ್ ಪೇಪರ್ ಬಳಸುವಂತೆ ಈ ಹಿಂದೆ ಕಾಂಗ್ರೆಸ್ ಪಕ್ಷದವರು ಒತ್ತಾಯಿಸಿದ್ದರು. ಇದೀಗ ಗ್ರಾ.ಪಂ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿಲ್ಲ ಎಂಬ ಕಾರಣಕ್ಕಾಗಿ ಬ್ಯಾಲೆಟ್ ಪೇಪರ್ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಪೂರಕವಾದ ಟೀಕೆ ಮಾಡುವುದು ಸರಿ ಆದರೆ ವಯಕ್ತಿಕ ಧೂಷಣೆ ಮಾಡುವ ಮೂಲಕ, ಯಾವುದೇ ಆಧಾರಗಳಿಲ್ಲದೆ ಟೀಕೆ ಮಾಡುವುದು ಸರಿಯಲ್ಲ ಎಂದರು.

ಮಾಜಿ ಶಾಸಕ ವಸಂತ ಬಂಗೇರ ಅವರು ‌ಜನರನ್ನು ಬೇರೆಡೆ ತಿರುಗಿಸಲು ಆಣೆ ಪ್ರಮಾಣದ ‌ಮಾತು‌ ಹಿಂದಿನಿಂದಲೂ ‌ಆಡುತ್ತಿದ್ದರು. ಅವರಿಗೆ ಅದು ಚಟವಿದ್ದಂತೆ. ಇವುಗಳಿಗೆ ಬಿ.ಜೆ.ಪಿ. ಯಾವುದೇ ಉತ್ತರ ನೀಡುವುದಿಲ್ಲ. ತಾಲೂಕಿನಲ್ಲಿ ಇಲ್ಲಿಯವರೆಗೂ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದು, ಮುಂದೆಯೂ ಅಭಿವೃದ್ಧಿ ಕಾರ್ಯ‌ಕೈಗೊಳ್ಳಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಸ್ಥಳೀಯ ಶಾಸಕ ಹರೀಶ್ ಪೂಂಜಾ ಅವರ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿ ಜನತೆ‌ ಮತ ನೀಡಿದ್ದಾರೆ. ಕಡಿಮೆ ಅವಧಿಯಲ್ಲಿ ತಾಲೂಕು ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು ಇದಕ್ಕೆ ‌ಅನುಗುಣವಾಗಿ‌ ಜನತೆ ಮತ ನೀಡುತ್ತಿದ್ದಾರೆ. ಬಿಜೆಪಿ ಯಾವುದೇ ಟೀಕೆಗಳಿಗೆ ಕಿವಿಗೊಡದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವತ್ತ ಮುಂದುವರಿಯಲಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಧನಲಕ್ಷ್ಮೀ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.

error: Content is protected !!