ಕಳಿಯ ಬದಿನಡೆ ದೈವಸ್ಥಾನ ಮೇಲ್ಛಾವಣಿ ಮಾಡು ಜೋಡಣೆ ಮುಹೂರ್ತ: ಕ್ಷೇತ್ರಕ್ಕೆ 150ಕ್ಕೂ ಹೆಚ್ಚು ವರ್ಷಗಳ ಇತಿಹಾಸ

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆಯ ಬದಿನಡೆ ದೈವಸ್ಥಾನದ ಮೇಲ್ಛಾವಣಿ ಜೋಡಣೆ ಮುಹೂರ್ತ ಕಾರ್ಯಕ್ರಮ ಕಳಿಯಬೀಡು ಸುರೇಂದ್ರ ಕುಮಾರ್ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರಾದ ರಾಘವೇಂದ್ರ ಭಾಂಗಿಣ್ಣಾಯ ಕುಂಠಿನಿ ಪೌರೋಹಿತ್ಯದಲ್ಲಿ ಶುಕ್ರವಾರ ನೆರವೇರಿತು.

ಬದಿನಡೆ, ಮಂಜಲಡ್ಕ ಕಲ್ಕುಡ ಮಾಡ ದೈವಗಳ ಸನ್ನಿಧಿಗೆ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬದಿನಡೆ ದೈವಸ್ಥಾನದಲ್ಲಿ ಐವೇರ್ ಉಳ್ಳಾಕುಲು, ಉಳ್ಳಾಲ್ತಿ, ಬಂಗಾಡಿ ದೈವ ಮತ್ತು ಮಂಜಲಡ್ಕ ದೈವಸ್ಥಾನದಲ್ಲಿ ಕೊಡಮಣಿತ್ತಾಯ, ಕಲ್ಕುಡ- ಕಲ್ಲುರ್ಟಿ, ಪಿಲಿಚಾಮುಂಡಿ ದೈವಗಳ ಮೂಲಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ.
ಶಿಲ್ಪಿ ಶ್ಯಾಮರಾಯ ಆಚಾರ್ಯ ನಾಳ ಮತ್ತು ಶಿಲ್ಪಾ ಕಲಾ ಪ್ರಶಸ್ತಿ ವಿಜೇತ ಜಯಚಂದ್ರ ಆಚಾರ್ಯ ನೇತೃತ್ವದಲ್ಲಿ ಮರದ ಮೇಲ್ಛಾವಣಿ ಜೋಡಣೆ ನೆರವೇರಿಸಿದರು.

ದೈವಸ್ಥಾನದ ಮೇಲ್ಛಾವಣಿ ಜೋಡಣೆ ಮೂಹೂರ್ತ ಸಂದರ್ಭ ದೈವಸ್ಥಾನದ ಜೀರ್ಣೋದ್ಧಾರದ ಮಾರ್ಗದರ್ಶಕರಾದ
ಶಾಸಕ ಹರೀಶ್ ಪೂಂಜ ಅವರು ಸೂಕ್ತ ಮಾರ್ಗದರ್ಶನ ಜತೆಗೆ ಜೀರ್ಣೋದ್ಧಾರ ಮತ್ತು ಮುಂಬರುವ ಬ್ರಹ್ಮಕಲಶದ ಕುರಿತು ಸಲಹೆಗಳನ್ನು ನೀಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಕುಮಾರ್ ಗ್ರಾಮಸ್ಥರ ಸಹಕಾರ ಕೋರಿದರು.
ಕುದ್ರೋಳಿ ನಾರಾಯಣಗುರು ಕಾಲೇಜಿನ ಪ್ರಾಧ್ಯಾಪಕ ಬಿ. ಕೇಶವ ಬಂಗೇರ ಪ್ರಸ್ತಾವಿಸಿ, ದೈವಸ್ಥಾನದ ಮುಂದಿನ ಜೀರ್ಣೋದ್ದಾರದ ರೂಪರೇಶೆಗಳ ಕುರಿತು ಮಾಹಿತಿ ನೀಡಿದರು. ಕಳಿಯ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ನಿರ್ದೇಶಕರಾದ ಶೇಖರ ನಾಯ್ಕ್, ರತ್ನಾಕರ ಬಳ್ಳಿದಡ್ಡ, ಶಶಿಧರ ಶೆಟ್ಟಿ, ಬೆಳ್ತಂಗಡಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿ, ಕಳಿಯ ಗ್ರಾ.ಪಂ. ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಸದಸ್ಯರಾದ ತುಕರಾಮ್ ಬಿ., ದಿವಾಕರ ಮೆದಿನ, ಉದ್ಯಮಿ ವೆಂಕಟರಮಣ ಪೈ, ರೈಲ್ವೇ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣ ಕುಂಟಿನಿ, ಕೊಂಕಣ್ ರೈಲ್ವೇ ಅಧಿಕಾರಿ ಸತೀಶ್ ಕುಮಾರ್ ಆರ್.ಎನ್., ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ., ಉಪಾಧ್ಯಕ್ಷ ಯಶೋಧರ ಶೆಟ್ಟಿ ಕುವೆಟ್ಟು, ಗ್ರಾ. ಪಂ. ಮಾಜಿ ಅಧ್ಯಕ್ಷ ಪೂವಪ್ಪ ಭಂಡಾರಿ, ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಸತ್ಯೇಂದ್ರ ಕುಮಾರ್, ಕೋಶಾಧಿಕಾರಿ ಕೂಸಪ್ಪ ಗೌಡ, ಬ್ಯಾಂಕಿನ ನಿವೃತ ಅಧಿಕಾರಿ ರಾಮಪ್ಪ, ಪ್ರಮುಖರಾದ ಬಾಲಕೃಷ್ಣ ಬಿರ್ಮೊಟ್ಟು, ವಿಜಯ ಗೌಡ, ಸದಾನಂದ ಶೆಟ್ಟಿ, ಹರೀಶ್ ಬೆರ್ಕೆತ್ತೋಡಿ, ಪ್ರಕಾಶ್ ಮೇರ್ಲ, ರಂಜನ್ ಹೇರೋಡಿ, ಕಮಲಾಕ್ಷ ಬಳ್ಳಿದಡ್ಡ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳು, ಕಳಿಯ, ನ್ಯಾಯತರ್ಪು, ಓಡಿಲ್ನಾಳ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ರಾಘವ ಹೆಚ್. ಸ್ವಾಗತಿಸಿ, ನಿರ್ವಹಿಸಿದರು.

error: Content is protected !!