
ಬೆಳ್ತಂಗಡಿ: ಅನುಗ್ರಹ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉಜಿರೆ ಇದರ ರಕ್ಷಕ ಶಿಕ್ಷಕರ ಸಭೆಯು ಜೂನ್ 20 ಶನಿವಾರ ಅನುಗ್ರಹ ಸಭಾ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಗುರುರಾಜ ಡಿ.ಹೆಗ್ಡೆ ಉದ್ಘಾಟಿಸಿ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತು ಇತ್ತು ಅದರೆ ಮೊಬೈಲ್ ಬಂದ ನಂತರ ಮನೆಯಲ್ಲಿ ಎಲ್ಲರೂ ಅದರಲ್ಲೇ ಹೆಚ್ಚು ಹೊತ್ತು ಕಳೆಯುವುದರಿಂದ ಮಕ್ಕಳ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ. ಅದ್ದರಿಂದ ಪೋಷಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕು.ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಕಠಿಣ ಪರಿಶ್ರಮ ಇದೆ. ಶಿಕ್ಷಕರ ಶ್ರಮವನ್ನು ಅಭಿನಂದಿಸುವುದು ಪೋಷಕರಾದ ನಮ್ಮೆಲ್ಲರ ಕರ್ತವ್ಯ ಅದೇ ರೀತಿ ಮಕ್ಕಳಿಗೂ ಉತ್ತಮ ಸಂಸ್ಕಾರದ ಪಾಠವನ್ನು ಹೇಳಿಕೊಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ಫಾ ಅಬೆಲ್ ಲೋಬೊ ಮಕ್ಕಳ ಸಾಧನೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು ಪ್ರಾಂಶುಪಾಲ ವಿಜಯ್ ಲೋಬೋ, ಪ್ರಾಸ್ತಾವನೆಗೈದು ಮಕ್ಕಳಲ್ಲಿ ಪ್ರೀತಿ ವಿಶ್ವಾಸದಿಂದಿದ್ದರೆ ಅವರು ಆತ್ಮವಿಶ್ವಾಸದಿಂದ ಉತ್ತಮ ಸಾಧನೆಗೈಯಲು ಸಾಧ್ಯ,ಈ ನಿಟ್ಟಿನಲ್ಲಿ ಪೋಷಕರ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
2025-26 ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ 625 ಅಂಕ ಪಡೆದ ಅನನ್ಯ ಸೇರಿದಂತೆ ಸಾಧನೆಗೈದ ಇತರ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
2026–27ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಉಪಾಧ್ಯಕ್ಷರಾಗಿ ಶ್ರೀ ಶಶಿಕಿರಣ್ ಅವರು ಸರ್ವಾನುಮತದಿಂದ ಆಯ್ಕೆಯಾದರು. ಆಯ್ಕೆಯಾದ ಪದಾಧಿಕಾರಿಗಳನ್ನು ಸಂಚಾಲಕರು ಹೂಗುಚ್ಛ ನೀಡಿ ಅಭಿನಂದಿಸಿ ಸ್ವಾಗತಿಸಿದರು.ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿಸೋಜಾ, ಸದಸ್ಯರಾದ ಬಬಿತಾ ಮೋರಸ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸ್ಟೀವನ್ ಮೊಂತೆರೊ, ಮರ್ಲಿನ್ ಮೆನೇಜಸ್ ಮತ್ತು ಜೈಸನ್ ಮೋರಸ್ ಹಾಗೂ ಹಾಲಿ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಗುರುರಾಜ ಶಬರಾಯ ಉಪಸ್ಥಿತರಿದ್ದರು.
ಪೋಷಕರು ಅತ್ಯಂತ ಆಸಕ್ತಿ ಹಾಗೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಸಹಕರಿಸಿದರು.
ಸಹಶಿಕ್ಷಕ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ರವಿಕುಮಾರ್ ಸ್ವಾಗತಿಸಿ, ರಕ್ಷಾ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.