ಬೆಳ್ತಂಗಡಿ:. ಲಾಯಿಲ ಗ್ರಾಮದ ನಿವಾಸಿ ಡಾ. ರಂಜಿತ್ ಕುಮಾರ್ ಆರ್ ಜಾಗತಿಕ ಅಕಾಡೆಮಿಕ್ ವೇದಿಕೆಯಲ್ಲಿ ಅಪರೂಪದ ಹಾಗೂ ಗೌರವಾನ್ವಿತ ಅವಕಾಶವನ್ನು ಗಳಿಸಿದ್ದಾರೆ. ಜಪಾನ್ನ ಖ್ಯಾತ JSPS (Japan Society for the Promotion of Science) ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್ ಅವರು ಗಳಿಸಿದ್ದು, ಮುಂದಿನ 2 ವರ್ಷಗಳ ಕಾಲ ಜಪಾನ್ನ ಹೊಕ್ಕೈಡೊ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಅವರು ತಮ್ಮ ಸಂಶೋಧನೆಯನ್ನು ಮುಂದುವರಿಸಲಿದ್ದಾರೆ.
JSPS ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್, ವಿದೇಶಗಳಿಂದ ಬಂದ ಆರಂಭಿಕ ಹಂತದ ಸಂಶೋಧಕರಿಗೆ ಜಪಾನಿನಲ್ಲಿ ಸಹಯೋಗಿ ಸಂಶೋಧನೆ ನಡೆಸಲು ಬೆಂಬಲ ನೀಡುವ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಇದು ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ವಿಶ್ವದ ನಾನಾ ಕ್ಷೇತ್ರಗಳಿಂದ ಅನೇಕ ಅರ್ಜಿಗಳು ಬರುತ್ತವೆ, ಆದರೆ ಪ್ರತಿ ವರ್ಷ ಕೇವಲ ಸೀಮಿತ ಸಂಖ್ಯೆಯ ಫೆಲೋಶಿಪ್ಗಳನ್ನು ಮಾತ್ರ ನೀಡಲಾಗುತ್ತದೆ. ಈ ಫೆಲೋಶಿಪ್ವನ್ನು ಪಡೆಯಲು ದೃಢವಾದ ಸಂಶೋಧನಾ ಪರಿಣಿತಿ, ಚೆನ್ನಾಗಿ ಸಿದ್ಧಪಡಿಸಿದ ಸಂಶೋಧನಾ ಪ್ರಸ್ತಾವನೆ, ಮತ್ತು ಜಪಾನಿ ವಿಜ್ಞಾನಿಯೊಂದಿಗೆ ಸಂಶೋಧನಾ ಸಹಯೋಗದ ಅಗತ್ಯವಿರುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ಜಗತ್ತಿನಾದ್ಯಂತ ಕೇವಲ 41 ಮಂದಿ ಸಂಶೋಧಕರಿಗೆ ಮಾತ್ರ ಈ ಗೌರವ ದೊರೆತಿದ್ದು, ಭಾರತದಿಂದ ಕೇವಲ 6 ಮಂದಿ ಮಾತ್ರ ಇದರಲ್ಲಿ ಸ್ಥಾನ ಪಡೆದಿದ್ದಾರೆ. ಈ ಅಪೂರ್ವ ಗೌರವವು ಡಾ. ರಂಜಿತ್ ಅವರ ಭೌತಶಾಸ್ತ್ರ ಕ್ಷೇತ್ರದ ಮೇರು ಪ್ರತಿಭೆಯನ್ನು ಮಾತ್ರವಲ್ಲದೆ, ಅವರ ಬದ್ಧತೆ, ಪರಿಶ್ರಮ ಹಾಗೂ ವಿಜ್ಞಾನ ಸಂಶೋಧನೆಗೆ ಇರುವ ಅಚಲ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಜನಿಸಿದ ಡಾ. ರಂಜಿತ್ ಅವರು, ಸದ್ಯ IIT ಬಾಂಬೆ ನಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಂತ ಥೆರೆಸಾ ಪ್ರೌಢ ಶಾಲೆ, ವಾಣಿ ಪದವಿ ಪೂರ್ವ ಕಾಲೇಜು ಹಾಗೂ ಎಸ್ ಡಿ ಎಂ ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದು, ಬೆಂಗಳೂರಿನ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಅಫ್ ಸೈಂಟಿಫಿಕ್ ರಿಸರ್ಚ್ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್) ನಲ್ಲಿ ಪಿಎಚ್ ಡಿ. ಪದವಿಯನ್ನು ಪಡೆದಿದ್ದಾರೆ. ಅವರ ಸಾಧನೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಆಸಕ್ತ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ, ಪರಿಶ್ರಮ ಹಾಗೂ ಏಕಾಗ್ರತೆಯಿಂದ ಸಾಧ್ಯವೆಂಬುದಕ್ಕೆ ಸ್ಪೂರ್ತಿದಾಯಕ ಮಾದರಿಯಾಗಿದೆ.
ಇವರ ಸಾಧನೆಗೆ ಕುಟುಂಬಿಕರು,ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.