ಬೆಂಗಳೂರು:ಧರ್ಮಸ್ಥಳದಲ್ಲಿ ಕಳೆದ 13 ದಿನಗಳಿಂದ ನಡೆಯುತ್ತಿರುವ ಶವ ಶೋಧನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸೂಚನೆ ಕಂಡು ಬಂದಿದೆ.
13 ಸ್ಥಳಗಳಲ್ಲೂ ಕಳೇಬರ ಸಿಗದಿದ್ದಲ್ಲಿ ಎಸ್ಐಟಿ ಶವ ಶೋಧನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಶಾಸಕಾಂಗ ಸಭೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ವಿಚಾರವಾಗಿ ಬೇಳೂರು ಗೋಪಾಲಕೃಷ್ಣ ವಿಷಯ ಪ್ರಸ್ತಾಪಿಸಿದರು. ಈ ಸಂಬಂಧ ಮಾತನಾಡಿದ ಸಿಎಂ, ಎಸ್ಐಟಿ ಮಾಡಿದ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ, 13 ಸ್ಥಳಗಳಲ್ಲಿ ಎಸ್ಐಟಿ ಶೋಧನೆ ಮಾಡಿದೆ ಎಂದಿದ್ದಾರೆ ಎನ್ನಲಾಗಿದೆ.
13ನೇ ಪಾಯಿಂಟ್ ನಲ್ಲೂ ಮೂಳೆಗಳು ಸಿಗದೇ ಹೋದರೆ ಎಸ್ಐಟಿ ಪರಿಶೋಧನೆ ನಿಲ್ಲಿಸಬೇಕಾಗಬಹುದು. ಈ ಬಗ್ಗೆ ಸಚಿವರ ಜೊತೆಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತೇವೆ. ಎಸ್ಐಟಿಯಿಂದ ಶವ ಶೋಧನೆಯನ್ನು ಮುಂದುವರಿಸಬೇಕಾ, ಬೇಡವ ಎಂದು ತೀರ್ಮಾನ ಮಾಡುತ್ತೇವೆ. ಯಾರೂ ಭಾವನಾತ್ಮಕ ಹೇಳಿಕೆ ನೀಡಬೇಡಿ. ಸೋಷಿಯಲ್ ಮೀಡಿಯಾ ಚರ್ಚೆಗಳ ಬಗ್ಗೆ ಯಾರೂ ಆತಂಕಪಡಬೇಡಿ. ಚರ್ಚಿಸಬೇಕಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ 13 ನೇ ಪಾಯಿಂಟ್ ಜಾಗದಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸಿ ಜಾಗ ಶೋಧ ನಡೆಸಿ ಜೆಸಿಬಿ ಮೂಲಕ 15 ಅಡಿ ಅಗೆದರೂ ಯಾವುದೇ ಕುರುಹುಗಳು ಕಂಡು ಬಂದಿಲ್ಲ, ಕತ್ತಲು ಆವರಿಸಿದ್ದರಿಂದ ಇವತ್ತೂ ದೂರುದಾರ ಮಾರ್ಕ್ ಮಾಡಿದ ಇನ್ನುಳಿದ ಜಾಗದಲ್ಲಿ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಅಲ್ಲೂ ಏನೂ ಕಳೇಬರದ ಕುರುಹು ಸಿಗದಿದ್ದಲ್ಲಿ ಎಸ್ಐಟಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಸರ್ಕಾರಕ್ಕೆ ಅಂತಿಮ ವರದಿಯನ್ನು ನೀಡುವ ಸಾಧ್ಯತೆ ಇದೆ.