ಬೆಳ್ಳಂಬೆಳಗ್ಗೆ ಧರ್ಮಸ್ಥಳದಲ್ಲಿ ಕಾಡಾನೆ ಪ್ರತ್ಯಕ್ಷ: ಆನೆ ನೋಡಿ ಆತಂಕದಲ್ಲಿ ಓಡಿದ ಶಾಲಾ ವಿದ್ಯಾರ್ಥಿಗಳು:

 

 

ಬೆಳ್ತಂಗಡಿ:ಧರ್ಮಸ್ಥಳದಲ್ಲಿ ಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಆನೆಯೊಂದು ಕಂಡು ಬಂದಿದೆ.

ಕಳೆದ ಕೆಲ ದಿನಗಳಿಂದ ಧರ್ಮಸ್ಥಳ ಗ್ರಾಮದ ಬೊಳಿಯಾರ್ ನೆರ್ತನೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಆನೆಗಳು ಕೃಷಿ ನಾಶಮಾಡುತ್ತಿದ್ದು, ಜು.28 ರಂದು ಬೆಳಿಗ್ಗೆ ಬೊಳಿಯರ್ ಬಳಿ ಧರ್ಮಸ್ಥಳ ಸುಬ್ರಹ್ಮಣ್ಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಪ್ರತ್ಯಕ್ಷವಾಗಿದೆ.

ರಸ್ತೆ ಬದಿ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗ ಬಸ್ ನಿಲ್ದಾಣದ ಕಡೆಗೆ ನುಗ್ಗಿ ಬಂದಿದೆ. ಸ್ಥಳದಲ್ಲಿದ್ದ ಮಕ್ಕಳು ಬೃಹತ್ ಗಾತ್ರದ ಆನೆಯನ್ನು ಕಂಡು ಭಯಭೀತರಾಗಿ ಸ್ಥಳೀಯ ಅಂಗಡಿಗೆ  ಓಡಿ ಪಾರಾದ  ಘಟನೆ ನಡೆದಿದೆ.

ಬಳಿಕ ಆನೆ ಕಾಡಿನತ್ತ ಸಂಚರಿಸಿದ್ದು, ಸ್ವಲ್ಪದರಲ್ಲೇ ಅಪಾಯ ತಪ್ಪಿದೆ. ಕಳೆದ ಎರಡು ವಾರಗಳ ಹಿಂದೆಯಷ್ಟೆ ಕೊಕ್ಕಡ ಸೌತಡ್ಕ ಸಮೀಪದ ಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕಾಡಾನೆ ಸಾಯಿಸಿದ ಬೆನ್ನಲ್ಲೇ ಈ ಘಟನೆ ಸಂಭವಿಸಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ.

ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಿರಂತರ ದಾಳಿಯಿಂದ‌ ಕೃಷಿಕರು ನಷ್ಟ ಅನುಭವಿಸಿರುವ ಮಧ್ಯೆಯೇ, ಕಾಡಾನೆಗಳು ಮಾನವನ ಮೇಲೆ‌ ಎರಗಲು ಆರಂಭಿಸಿದೆ. ಇದರಿಂದ ಮುಂಜಾನೆ ಶಾಲಾ ಮಕ್ಕಳು, ಕೃಷಿಕರು ಜೀವಭಯದಲ್ಲಿ ಸಂಚರಿಸುವಂತಾಗಿದೆ.

error: Content is protected !!