ಮಂಗಳೂರು- ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಣೆ: “ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ” ಸಂಸದ ಬ್ರಿಜೇಶ್ ಚೌಟ

ಪುತ್ತೂರು: ಮಂಗಳೂರಿನಿಂದ ಪುತ್ತೂರಿನವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ವಿಸ್ತರಿಸಬೇಕೆಂಬ ನಿಟ್ಟಿನಲ್ಲಿ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಸದ್ಯ ರೈಲು ಸಂಚಾರ ವಿಸ್ತರಿಸಲು ಭಾರತೀಯ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ.

ಈ ಸಂಬಂಧ ಚೆನ್ನೈ  ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ರೈಲ್ವೆ ಮತ್ತು ಹುಬ್ಬಳ್ಳಿ ಪ್ರಧಾನ ಕಚೇರಿ ಹೊಂದಿರುವ ನೈಋುತ್ಯ ರೈಲ್ವೆಯು ನಿರ್ಣಯ ಅಂಗೀಕರಿಸಿ 2024ರ ನವೆಂಬರ್ 25ರಂದು ಶಿಫಾರಸು ಪತ್ರವನ್ನು ರೈಲ್ವೆ ಮಂಡಳಿಗೆ ಕಳುಹಿಸಿತ್ತು. ಇದೀಗ ಮಂಗಳವಾರ ಭಾರತೀಯ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕರಾದ ( ಕೋಚಿಂಗ್) ವಿವೇಕ್ ಕುಮಾರ್ ಸಿನ್ಹಾ ಅವರು ಹೊರಡಿಸಿದ ಆದೇಶದಲ್ಲಿ ಸುಬ್ರಹ್ಮಣ್ಯ ರೋಡ್ ನಿಲ್ದಾಣದ ವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ.

ಬಹುಕಾಲದ ಬೇಡಿಕೆ ಈಡೇರುತ್ತಿರುವ ಬೆನ್ನಲ್ಲೆ ಪ್ರಯಾಣಿಕರು, ರೈಲ್ವೆ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಈ ರೈಲು ಸಂಚಾರ ವಿಸ್ತರಣೆಯಿಂದ ಕುಕ್ಕೆ ಸುಬ್ರಹ್ಮಣ್ಯದ ಯಾತ್ರಾರ್ಥಿಗಳಿಗೆ ಅನುಕೂಲ ಆಗುವುದಲ್ಲದೆ, ಸುಬ್ರಹ್ಮಣ್ಯ, ಎಡಮಂಗಲ, ಕಾಣಿಯೂರು, ಸರ್ವೆ ಮುಂತಾದ ಭಾಗದ ನೂರಾರು ಮಂದಿಗೆ ನಿತ್ಯ ಮಂಗಳೂರಿಗೆ ಕಡಿಮೆ ಪ್ರಯಾಣ ದರದಲ್ಲಿ ಹೋಗಿ ಬರಲು ಸಾಧ್ಯವಾಗಲಿದೆ.

“ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ” ಸಂಸದ ಕ್ಯಾ.ಬ್ರಿಜೇಶ್ ಚೌಟ 

ರೈಲು ವಿಸ್ತರಣೆ ಸಂಬಂಧ ರೈಲ್ವೆ ಮಂಡಳಿಯ ಅನುಮತಿ ಕೊಡಿಸುವಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಯತ್ನಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಂಸತ್ತಿನ ಮೊದಲ ಅಧಿವೇಶನದಲ್ಲೇ ಈ ರೈಲು ವಿಸ್ತರಣೆ ಬೇಡಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ರೈಲ್ವೆ ಸಚಿವರ ಗಮನಸೆಳೆದಿದ್ದೆ. ಇತ್ತೇಚೆಗಟಷೇ ರೈಲ್ವೆ ಮಂಡಳಿ ಅಧ್ಯಕ್ಷರನ್ನು ಖುದ್ದು ಭೇಟಿಯಾಗಿ ಈ ಪ್ಯಾಸೆಂಜರ್ ರೈಲನ್ನು ಆದಷ್ಟು ಬೇಗ ಸುಬ್ರಹ್ಮಣ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದೆ. ಇದೀಗ ಕರಾವಳಿ ರೈಲ್ವೆ ಯಾತ್ರಿಕರ ಅನುಕೂಲಕರವಾಗುವಂತೆ ಬಹುಬೇಡಿಕೆಯಾಗಿರುವ ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ನಿಲ್ದಾಣ ವರೆಗೆ ವಿಸ್ತರಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಕೂಡ ರೈಲ್ವೆ ಮಂಡಳಿ ಪ್ರಕಟಿಸಿರುವುದು ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ ಎಂದು ಹೇಳಿದ್ದಾರೆ.

ಪರಿಷ್ಕೃತ ವೇಳಾಪಟ್ಟಿ
ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದ ಪ್ರಕಾರ ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದೆ. ಅದು ಬೆಳಗ್ಗೆ 6.30ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪಲಿದೆ. ನಂತರ ಬೆಳಗ್ಗೆ 7 ಗಂಟೆಗೆ ರೈಲು ಹೊರಟು ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಸಂಜೆ 5.45ಕ್ಕೆ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟು ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪಲಿದೆ. ರಾತ್ರಿ 8.40ಕ್ಕೆ ಅಲ್ಲಿಂದ ಹೊರಟು ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಈ ರೈಲು ರಾತ್ರಿ ತಂಗಬೇಕೆAಬ ಬೇಡಿಕೆ ಆರಂಭದಲ್ಲಿತ್ತಾದರೂ ತಾಂತ್ರಿಕ ಸಮಸ್ಯೆಯ ಕಾರಣದಿಂದ ಆ ಬೇಡಿಕೆ ಕೈ ಬಿಡಲಾಗಿತ್ತು. ಹೀಗಾಗಿ ರಾತ್ರಿ ರೈಲು ಮಂಗಳೂರಿಗೆ ಮರಳಲಿದೆ. ಮರುದಿನ ಮುಂಜಾನೆ ಮತ್ತೆ ಹೊರಟು ಬರಲಿದೆ.

ಮಂಗಳೂರಿನಿAದ ಪುತ್ತೂರಿನವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಣೆಯಾಗಲು ರೈಲ್ವೆ ಸಚಿವಾಲಯದೊಂದಿಗೆ ನಿರಂತರ ಸಂವಹನ ನಡೆಸಿದ ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಈ ಸಂದಭ್ ಮರೆಯುವಂತಿಲ್ಲ. ಅವರ ಬಳಿಕ ಈ ಪ್ರಯತ್ನ ಮುಂದುವರೆಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ. ಹೋರಾಡಿದ ಎಲ್ಲರಿಗೂ ದಕ್ಷಿಣ ಕನ್ನಡ ಜಿಲ್ಲಾ ರೈಲು ಯಾತ್ರಿಗಳ ಪರವಾಗಿ ಧನ್ಯವಾದಗಳು ಎಂದು ರೈಲ್ವೆ ಹೋರಾಟಗಾರ ಹನುಮಂತ ಕಾಮತ್ ಹೇಳಿದ್ದಾರೆ.

error: Content is protected !!