ಚಿಕ್ಕಮಗಳೂರು: ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ಉರುಳಿಗೆ ಚಿರತೆ ಸಿಲುಕಿ ಸಾವನ್ನಪ್ಪಿದ ಘಟನೆ ಫೆ.20ರಂದು ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಸಂಭವಿಸಿದೆ.
ನಿನ್ನೆ ರಾತ್ರಿಯೇ ಚಿರತೆ ಉರುಳಿಗೆ ಬಿದ್ದಿದೆ. ಉರುಳು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಸೊಂಟಕ್ಕೆ ಇಳಿದಿದ್ದ ಉರುಳು ಮತ್ತಷ್ಟು ಬಿಗಿಯಾಗಿ ಚಿರತೆ ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಶಿವಮೊಗ್ಗದಿಂದ ಅರಿವಳಿಕೆ ತಜ್ಞರನ್ನು ಕರೆಸಿ ಚಿರತೆಯನ್ನು ರಕ್ಷಣೆ ಮಾಡಲು ಮುಂದಾದರೂ ಫಲಕಾರಿಯಾಗಲಿಲ್ಲ.
ಪ್ರಕರಣ ಸಂಬಂಧ ಮೊದಲು ಕಾಫಿ ತೋಟದ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು, ಮರಣೋತ್ತರ ಪರೀಕ್ಷೆ ಬಳಿಕ ತನಿಖೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.