
ವಯನಾಡ್ : ಕಳೆದ ಬಾರಿ ಸಂಭವಿಸಿದ್ದ ಭೀಕರ ಭೂ ಕುಸಿತದಿಂದ ಚೇತರಿಸಿಕೊಳ್ಳುತ್ತಿರುವ ವಯನಾಡ್ನಲ್ಲಿ ಮತ್ತೊಂದು ಭಾರೀ ಭೂ ಕುಸಿತ ಉಂಟಾಗಿದೆ. ವಯನಾಡ್ನಲ್ಲಿನ ಮೆಪ್ಪಾಡಿ ಬಳಿಯ ಕಲ್ಲಾಡಿಯ ಹತ್ತಿರ ಭಾರಿ ಭೂಕುಸಿತ ಸಂಭವಿಸಿದೆ. ಅವಶೇಷಗಳಡಿ ಕೆಲವರು ಸಿಕ್ಕಿಹಾಕಿಕೊಂಡಿರಬಹುದು ಎಂಬ ಆತಂಕವಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಲ್ಲಾಡಿಯ ಮೀನಾಕ್ಷಿ ಸೇತುವೆ ಬಳಿ ಈ ಭೂ ಕುಸಿತ ಸಂಭವಿಸಿದೆ. ಇಲ್ಲಿ ವಯನಾಡ್ ಜಿಲ್ಲೆ ಮತ್ತು ಮಲ್ಲಪುರಂಗೆ ಸಂಪರ್ಕಿಸುವ ರಸ್ತೆ ಸುರಂಗ ಮಾರ್ಗದ ಯೋಜನೆ ಕಾರ್ಯ ಸಾಗುತ್ತಿತ್ತು. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ.
ಈ ವರದಿಯಾಗುತ್ತಿದ್ದಂತೆ ಕಲ್ಲಪೆಟ್ಟದಿಂದ ಅಗ್ನಿಶಾಮಕ ದಳ ಮತ್ತು ರಕ್ಷಣಾ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ. ಸುಮಾರು 30 ರಿಂದ 50 ಕಾರ್ಮಿಕರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಭೂ ಕುಸಿತ ಸಂಭವಿಸಿದ ಬಳಿಕ ಸ್ಥಳೀಯರು ಸುರಂಗ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೂವರು ಸಿಬ್ಬಂದಿಗಳನ್ನು ರಕ್ಷಿಸಿದ್ದು, ಇನ್ನೂ ಹಲವರು ಈ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಈ ಪ್ರದೇಶದಲ್ಲಿ ಕೆಲವು ಮನೆ ಮತ್ತು ಹೋಂ ಸ್ಟೇಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಹೊರತಾಗಿ, ಸುರಂಗದಲ್ಲಿ ಕೆಲಸ ಮಾಡುವವರನ್ನು ಸಾಗಿಸುವ ಕೆಲವು ವಾಹನಗಳು ಭೂಕುಸಿತದಲ್ಲಿ ಹಾನಿಗೀಡಾಗಿವೆ. ಕಂಟೇನರ್ಗಳು, ಕಾರ್ಮಿಕರೊಂದಿಗೆ ಬಂದ ಬಸ್, ಕಾರುಗಳು ಮತ್ತು ಮಣ್ಣು ತೆಗೆಯುವ ಯಂತ್ರಗಳು ಸಂಪೂರ್ಣವಾಗಿ ನೆಲದಡಿಯಲ್ಲಿ ಹೂತುಹೋಗಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಮದುವರಿದಿದೆ.
ಈ ಪ್ರದೇಶದಲ್ಲಿ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮೀನಾಕ್ಷಿ ಸೇತುವೆ ಬಳಿಯಿರುವ ಸಣ್ಣ ನದಿ ಉಕ್ಕಿ ಹರಿಯುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ಸದ್ಯ ಸ್ಥಳದಲ್ಲಿ ಅಪಾಯವನ್ನು ಪರಿಗಣಿಸಿ, ಹತ್ತಿರದ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸುವಂತೆಯೂ ಸೂಚನೆಗಳನ್ನು ನೀಡಲಾಗಿದೆ.
ಮುಖ್ಯಮಂತ್ರಿ ವಿ.ಡಿ. ಸತೀಶನ್ ತುರ್ತು ಸಭೆಯೊಂದನ್ನು ಕರೆದಿದ್ದು, ವಯನಾಡ್ನ ಸಚಿವ ಟಿ. ಸಿದ್ದಿಕ್ ಅವರೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದರು. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ಸಂಘಟಿಸುವಂತೆ ಸಚಿವ ಟಿ ಸಿದ್ದಿಕ್ ಮತ್ತು ಜಿಲ್ಲಾಧಿಕಾರಿ ಶೋಧ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ. ಅವಘಡದ ಸ್ಥಳದಲ್ಲಿ ಹೆಚ್ಚಿನ ಜನರು ಸಿಲುಕಿಕೊಂಡಿದ್ದಾರೆಯೇ ಎಂಬ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಸ್ಥಳೀಯರು, ಇದ್ದಕ್ಕಿದ್ದಂತೆ ಯಾವುದೇ ಮುನ್ಸೂಚನೆ ನೀಡದೆ, ಭಾರಿ ಸದ್ದಿನೊಂದಿಗೆ ಭೂಕುಸಿತ ಸಂಭವಿಸಿತು. ದೊಡ್ಡ ಮರಗಳು ಉರುಳಿಬಿದ್ದಿರುವುದು ರಕ್ಷಣಾ ಕಾರ್ಯಾಚರಣೆಕ್ಕೆ ಸವಾಲಾಗಿದೆ ಎಂದರು.
ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್ ಮೆಪ್ಪಾಡಿ ಕಾಮಗಾರಿ ಕಳೆದ ವರ್ಷ ಪ್ರಾರಂಭವಾಗಿತ್ತು.