‘ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ: ಬ್ಯಾನರ್ ಹಾಕೋದು, ಕಟೌಟ್ ಕಟ್ಟೊದು ಬೇಡ’: ಅಭಿಮಾನಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಮನವಿ

ಗದಗ: ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೂವರು ಮೃತಪಟ್ಟಿದ್ದು, ಮೃತರ ಮನೆಗೆ ಜ.08ರಂದು ನಟ ಯಶ್ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ.

ಕುಟುಂಬಸ್ಥರ ಆಕ್ರಂದನ ಕೇಳಿ ತೀವ್ರ ಸಂಕಟಪಟ್ಟ ನಟ ಯಶ್ , ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ. ಯಾರೂ ಈ ರೀತಿ ಮಾಡಬೇಡಿ. ಬರ್ತಡೇ ಮಾಡಬೇಡಿ ಎಂದು ಹೇಳಿದರೆ, ಬೇಸರ ಮಾಡಿಕೊಳ್ಳುತ್ತಾರೆ. ನೀವು ಬ್ಯಾನರ್, ಕಟೌಟ್ ಹಾಕುವುದನ್ನು ನಾನು ಇಷ್ಟಪಡುವುದಿಲ್ಲ. ನನ್ನ ಮೇಲೆ ಪ್ರೀತಿ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ . ಇನ್ನು ಮುಂದೆ ಈ ರೀತಿ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕುಟುಂಬಸ್ಥರಿಗೆ ಧೈರ್ಯ ತುಂಬಿದ ನಟ ಮನೆ ಮಕ್ಕಳನ್ನು ಕಳೆದುಕೊಂಡಿರುವ ಮೂರು ಕುಟುಂಬಕ್ಕೂ ಏನು ನೆರವು ಬೇಕೋ ಅದನ್ನು ಮಾಡುತ್ತೇನೆ ಎಂದಿದ್ದಾರೆ.

2019ರಲ್ಲೂ ಅಭಿಮಾನಿಯೊಬ್ಬರು ಪ್ರಾಣ ಕಳೆದುಕೊಂಡಿದ್ದ ನೋವು ನಟ ಯಶ್ ಅವರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ರವಿ ಎಂಬ ಅಭಿಮಾನಿ ಹೊಸಕೆರೆಹಳ್ಳಿಯ ಯಶ್ ಅವರ ನಿವಾಸದ ಬಳಿ ಯಶ್ ಅವರನ್ನು ನೋಡಲು ಬಿಡದ ಕಾರಣ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮರುದಿನ ಅವರು ಮೃತಪಟ್ಟಿದ್ದರು. ಆದರೆ ಈ ಬಾರಿ ಮೂವರು ಅಭಿಮಾನಿಗಳನ್ನು ನಟ ಯಶ್ ಕಳೆದುಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚು ಮೂವರ ಕುಟುಂಬಸ್ಥರು ಮನೆ ಆಧಾರ ಸ್ಥಂಭಗಳನ್ನೇ ಕಳೆದುಕೊಂಡಿದ್ದಾರೆ.

error: Content is protected !!