ತಂಡದ ಪರಿಶ್ರಮದ ಫಲದಿಂದ “ಸರ್ಕಸ್” ಸಿನಿಮಾ ಗೆದ್ದಿದೆ:ನಿರ್ದೇಶಕ ರೂಪೇಶ್ ಶೆಟ್ಟಿ:

 

 

 

 

ಮಂಗಳೂರು:   ಸಿನಿಮಾ ತಂಡದ ಎಲ್ಲರ ಪರಿಶ್ರಮದ ಫಲವಾಗಿ “ಸರ್ಕಸ್” ಸಿನಿಮಾ ಗೆದ್ದಿದೆ . ನನ್ನ ಇಡೀ ತಂಡ ಇದಕ್ಕಾಗಿ ರಾತ್ರಿ ಹಗಲು ಶ್ರಮವಹಿಸಿ ದುಡಿದಿದೆ. ಹೆಚ್ಚಿನವರು ಭಾಷೆಯ ಮೇಲೆ ಪ್ರೀತಿಯಿಟ್ಟು ತುಳು ಸಿನಿಮಾ ಮಾಡುತ್ತಾರೆ, ಆದರೆ ಬಿಡುಗಡೆ ವೇಳೆ ಅವಸರ ಮಾಡುತ್ತಾರೆ. ಇದರಿಂದ ಒಳ್ಳೆಯ ಸಿನಿಮಾಗಳು ಕೂಡ ಸೋಲುತ್ತಿರುವುದು ವಿಷಾದದ ಸಂಗತಿ. ಆದ್ದರಿಂದ ಸಿನಿಮಾ ಬಿಡುಗಡೆ ವೇಳೆ ಪೈಪೋಟಿ ಬೇಡ.ಮಾಧ್ಯಮ ಮಿತ್ರರ ಸಹಕಾರದಿಂದಾಗಿ
ದೇಶ ವಿದೇಶಗಳಲ್ಲೂ ಸರ್ಕಸ್ ಸಿನಿಮಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರದ ನಿರ್ಮಾಪಕರು ಹಾಕಿರುವ ಬಂಡವಾಳ ವಾಪಾಸ್ ಬಂದಿದೆ. ಇದಕ್ಕಾಗಿ ಪ್ರತಿಯೊಬ್ಬ ಪ್ರೇಕ್ಷಕನಿಗೂ ಧನ್ಯವಾದಗಳು. ಗಿರ್ಗಿಟ್, ಗಮ್ಜಾಲ್, ಸರ್ಕಸ್ ಮೂರೂ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಪ್ರಸನ್ನ ಶೆಟ್ಟಿ ಬೈಲೂರು ಅವರು ನನ್ನ ಬೆನ್ನೆಲುಬು. ಅವರಿಗೆ ನಾನು ಚಿರಋಣಿ ಎಂದು ಸರ್ಕಸ್ ಚಿತ್ರ ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದರು.
ಅವರು ತಮ್ಮ ನಿರ್ದೇಶನ ಮತ್ತು ಅಭಿನಯದ “ಸರ್ಕಸ್” ತುಳು ಸಿನಿಮಾ ಜೂನ್ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಗಳಿಸಿರುವ ಹಿನ್ನೆಲೆಯಲ್ಲಿ ಕರೆದಿದ್ದ ಸಕ್ಸಸ್ ಮೀಟ್ ನಲ್ಲಿ ಮಾತಾಡುತ್ತಿದ್ದರು.
ಬಳಿಕ ಮಾತಾಡಿದ ಭೋಜರಾಜ್ ವಾಮಂಜೂರು ಅವರು, “ಸರ್ಕಸ್ ಚಿತ್ರದ ಬಗ್ಗೆ ಮಾತಾಡಲು ಹೆಮ್ಮೆ ಎನಿಸುತ್ತಿದೆ. ಯಾಕೆಂದರೆ ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿಯೂ ಸಿನಿಮಾ ಹೆಸರು ಮಾಡುತ್ತಿದೆ. ಸಿನಿಮಾ ಗೆಲ್ಲಲು ಮಾಧ್ಯಮ ಮಿತ್ರರ ಸಹಕಾರ ತುಂಬಾ ಅಗತ್ಯ. ಅದೇ ರೀತಿ ಸರ್ವಧರ್ಮದ ಪ್ರೇಕ್ಷಕರ ಪ್ರೀತಿಯಿಂದ ಸಿನಿಮಾ ಗೆದ್ದಿದೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರೂಪೇಶ್ ಶೆಟ್ಟಿ ಟೀಮ್ ಮಾಡಿರುವ ನಿರಂತರ ಪ್ರಯತ್ನದ ಫಲವಾಗಿ ಸಿನಿಮಾ ಒಳ್ಳೆಯ ಹೆಸರು ಪಡೆದಿದೆ. ಇದೇ ರೀತಿ ಮುಂದೆ ಬರಲಿರುವ ಎಲ್ಲ ತುಳುಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ” ಎಂದರು.
ಚಿತ್ರಕ್ಕೆ ಸಂಭಾಷಣೆ ಬರೆದಿರುವ ಪ್ರಸನ್ನ ಶೆಟ್ಟಿ ಬೈಲೂರು ಅವರು ಮಾತಾಡಿ, “ಬಲೇ ತೆಲಿಪಾಲೆ ಮೂಲಕ ಬೆಳಕಿಗೆ ಬಂದ ಸಣ್ಣ ಕಲಾವಿದ ನಾನು. ನನ್ನನ್ನು ಗುರುತಿಸಿ ಚಿತ್ರದಲ್ಲಿ ಸಂಭಾಷಣೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ರೂಪೇಶ್ ಶೆಟ್ಟಿ ಅವರಿಗೆ ನಾನು ಧನ್ಯವಾದವನ್ನು ಅರ್ಪಿಸುತ್ತೇನೆ. ಮಂಗಳೂರು ಮಾತ್ರವಲ್ಲದೆ ಬೆಂಗಳೂರಿನ ಕನ್ನಡಿಗರು ಕೂಡ ಚಿತ್ರದ ಹಾಸ್ಯ ದೃಶ್ಯಗಳಿಗೆ ನಗುತ್ತಿದ್ದಾರೆ. ಭಾಷೆ ಅರ್ಥವಾಗದೆ ಇದ್ದರೂ ಕಲಾವಿದರ ನಟನೆ ಜನರನ್ನು ಮುಟ್ಟಿದೆ ಎಂದರೆ ಅದಕ್ಕೆ ರೂಪೇಶ್ ಶೆಟ್ಟಿ ಅವರ ದಕ್ಷ ನಿರ್ದೇಶನ ಕಾರಣ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಟಿ ರಚನಾ ರೈ, ಭೋಜರಾಜ್ ವಾಮಂಜೂರ್, ಪಂಚಮಿ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ನವೀನ್ ಶೆಟ್ಟಿ, ನಿರ್ಮಾಪಕ ಮಂಜುನಾಥ್ ಅತ್ತಾವರ, ಸಂಗೀತ ನಿರ್ದೇಶಕ ಲಾಯ್ ವೇಲೆಂಟೈನ್ ಡಿಸೋಜ, ಚಿತ್ರ ವಿತರಣೆಕಾರ ಸಚಿನ್ ಎ.ಎಸ್. ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.

130ಕ್ಕೂ ಹೆಚ್ಚು ಚಿತ್ರಮಂದಿರಗಲ್ಲಿ ಬಿಡುಗಡೆಯಾದ ಮೊದಲ ತುಳು ಚಿತ್ರ:

ಸರ್ಕಸ್ ಇಲ್ಲಿಯವರೆಗೆ 14 ದೇಶಗಳು ಸೇರಿ ಒಟ್ಟು 130 ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ಇದರ ಜತೆ ಏಕಕಾಲದಲ್ಲಿ ದೇಶದಾದ್ಯಂತ ಬಿಡುಗಡೆಯಾದ ಮೊದಲ ತುಳು ‘ಪ್ಯಾನ್ ಇಂಡಿಯಾ’ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಭಾರತ್ ಸಿನಿಮಾಸ್ ನಿಂದ ಕನ್ನಡದಷ್ಟೇ ಆದಾಯದ ಉಡುಗೊರೆ:

ಸರ್ಕಸ್ ಚಿತ್ರ ತಂಡದ ಶ್ರಮವನ್ನು ನೋಡಿ ಭಾರತ್ ಸಿನಿಮಾಸ್ ಕನ್ನಡ ಚಿತ್ರಗಳಿಗೆ ಸಿಗುವ ಆದಾಯದ ಶೇಕಡಾವನ್ನೇ ಸರ್ಕಸ್ ಗೆ ನೀಡಲು ನಿರ್ಧಾರಿಸಿದ್ದಾರೆ, ಆದರೆ ಮೊದಲ ವಾರದಲ್ಲಿ ತನ್ನ ಸಂಸ್ಥೆಯ ಚಿತ್ರಮಂದಿರಗಳಲ್ಲಿ 18000 ಜನರು ವೀಕ್ಷಿಸಬೇಕೆಂಬ ಷರತ್ತನ್ನು ಹಾಕಲಾಗಿತ್ತು. ಭಾರತ್ ಸಿನಿಮಾಸ್ ನ ಮುಖ್ಯಸ್ಥರಾದ ಬಾಲಕೃಷ್ಣ ಶೆಟ್ಟಿಯವರ ಈ ನಿರ್ಧಾರದಿಂದ ಸರ್ಕಸ್ ತಂಡಕ್ಕೆ ತುಂಬಾ ದೊಡ್ಡ ಮಟ್ಟದ ಸಹಕಾರವಾಗಿದೆ.

ನಿರ್ಮಾಪಕರು ಹಾಕಿದ ಬಂಡವಾಳ ವಾಪಾಸ್!

ಈಗಾಗಲೇ ನಿರ್ಮಾಪಕರು ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಾಸ್ ಬಂದಿದೆ.
ರೂಪೇಶ್ ಶೆಟ್ಟಿ ನಿರ್ದೇಶನದ ಗಿರಿಗಿಟ್ ಹಾಗೂ ಸರ್ಕಸ್ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿದೆ. ಗಿರಿಗಿಟ್ ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ.
“ಸಲಗ” ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳುವಿಗೆ ಪರಿಚಯ ಆಗಿದ್ದಾರೆ.
ಅದೇ ರೀತಿ ರಚನಾ ರೈ ಎಂಬ ನಟಿಯನ್ನು ತುಳು ಸಿನಿಮಾ ರಂಗಕ್ಕೆ ಪರಿಚಯಿಸಲಾಗಿದೆ.
ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್‌ ಡಿ. ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ಪ್ರದೀಪ್ ಆಳ್ವ, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್ ತಾರಾಂಗಣದಲ್ಲಿದ್ದಾರೆ.
ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕರಾವಳಿಯಾದ್ಯಂತ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ತೀಕರಣ ನಡೆದಿದೆ.
ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ, ರಾಹುಲ್ ವಶಿಷ್ಠ ಸಂಕಲನ, ಲೋಯ್ ಅವರ ಸಂಗೀತ ಈ ಚಿತ್ರಕ್ಕಿದೆ.

error: Content is protected !!