ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಶಿವಮೊಗ್ಗದ ವ್ಯಕ್ತಿ: ಬೆಳ್ತಂಗಡಿ ಪೊಲೀಸರಿಂದ ಪರಿಶೀಲನೆ

ಉಜಿರೆ: ಮಾವಂತೂರು ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ.29 ರಂದು ಬೆಳಕಿಗೆ ಬಂದಿದೆ.

ಶಿವಮೊಗ್ಗ ನಿವಾಸಿ ಅವಿವಾಹಿತ ಕಾರ್ತಿಕ್ (29) ಜೂನ್ 26 ರಂದು ಲಾಡ್ಜ್ ನಂಬರ್ 303 ರಲ್ಲಿ ರೂಂ ಪಡೆದುಕೊಂಡು ಉಳಿದುಕೊಂಡಿದ್ದರು. ಜೂನ್ 28 ರಂದು ರೂಂ ಒಳಗೆ ಹಗ್ಗವನ್ನು ಫ್ಯಾನ್‌ಗೆ ಹಾಕಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ 29 ರಂದು ಸಿಬ್ಬಂದಿಗಳು ಬಾಗಿಲು ಬಡಿದರೂ ಕಾರ್ತಿಕ್ ರೂಂ ನಿಂದ ಹೊರಬಾರದೆ ಇದ್ದಾಗ, ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳ್ಕಕೆ ಆಗಮಿಸಿದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್ ಮತ್ತು ತಂಡ ರೂಂನ ಬಾಗಿಲು ಮುರಿದು ಒಳಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಪರಿಶೀಲನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಮನೆಯ ವಿಳಾಸ ಪತ್ತೆಯಾಗಿದ್ದು ಮನೆಯವರನ್ನು ಸಂಪರ್ಕಿಸಲಾಗಿದೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!