ಮತ ಪ್ರಭುವಿನ ಮಹಾ ತೀರ್ಪು,ಮತ ಎಣಿಕೆ ಪ್ರಾರಂಭ:ಮಧ್ಯಾಹ್ನ ಸ್ಪಷ್ಟ ಚಿತ್ರಣ:

 

 

 

ಬೆಂಗಳೂರು: ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದೆ. 2,615 ಅಭ್ಯರ್ಥಿಗಳ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಿದ ಬಳಿಕ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ.

224 ಕ್ಷೇತ್ರಗಳಿಗೆ ವಿವಿಧ ರಾಜಕೀಯ ಪಕ್ಷಗಳಿಂದ 5053 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 3953 ಸ್ವೀಕೃತವಾದರೆ, 502 ತಿರಸ್ಕೃತವಾಗಿದ್ದವು. 563 ನಾಮಪತ್ರ ವಾಪಸ್​ ಪಡೆಯಲಾಗಿತ್ತು. ಹೀಗಾಗಿ ಒಟ್ಟು 2615 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರಲ್ಲಿ 2429 ಪುರುಷ ಅಭ್ಯರ್ಥಿಗಳಿದ್ದರೆ, 185 ಮಹಿಳಾ ಅಭ್ಯರ್ಥಿಗಳು, 1 ತೃತೀಯ ಲಿಂಗಿ, 918 ಪಕ್ಷೇತರರು ಇದ್ದಾರೆ.ರಾಜ್ಯದಲ್ಲಿರುವ ಒಟ್ಟು ಮತದಾರರು: ರಾಜ್ಯದಲ್ಲಿ ಒಟ್ಟು 5,21,76,579 ಕೋಟಿ ಮತದಾರರು ಇದ್ದಾರೆ. ಇದರಲ್ಲಿ 2,62,42,561 ಪುರುಷ ಹಾಗೂ 2,59,26,319 ಮಹಿಳೆಯರು, 4839 ಇತರ ಮತದಾರರು ಇದ್ದಾರೆ.

ಮೀಸಲು ಕ್ಷೇತ್ರಗಳ ವಿವರ: ಮೀಸಲಾತಿ ಕ್ಷೇತಗಳಲ್ಲಿ ಪರಿಶಿಷ್ಟ ಜಾತಿಗೆ (ಎಸ್​ಸಿ) 36, ಪರಿಶಿಷ್ಟ ಪಂಗಡಕ್ಕೆ 15, ಸಾಮಾನ್ಯ ವರ್ಗಕ್ಕೆ 173 ಕ್ಷೇತ್ರಗಳು ಮೀಸಲಾಗಿವೆ. ಕಣದಲ್ಲಿ ಅತಿ ಹಿರಿಯ ಸ್ಪರ್ಧಿ ಅಂದರೆ, 91 ವರ್ಷದ ಶಾಮನೂರು ಶಿವಶಂಕರಪ್ಪ ಅವರು ಕಣದಲ್ಲಿದ್ದಾರೆ. ಇವರು ಕಾಂಗ್ರೆಸ್​ ಅಭ್ಯರ್ಥಿ. ಅತಿ ಕಿರಿಯ ಅಂದರೆ, 25 ವರ್ಷದ 10 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ.ಅತಿ ಹೆಚ್ಚು ಅಭ್ಯರ್ಥಿಗಳ ಕ್ಷೇತ್ರಗಳು: ಒಟ್ಟು 16 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುವುದು. ಒಂದು ಇವಿಎಂನಲ್ಲಿ ಗರಿಷ್ಠ 16 ಅಭ್ಯರ್ಥಿಗಳ ಹೆಸರು ಹಾಗೂ ಚಿಹ್ನೆಗೆ ವ್ಯವಸ್ಥೆ ಇರುತ್ತದೆ. ಅದಕ್ಕಿಂತ ಹೆಚ್ಚಾದರೆ ಪ್ರತಿ 16 ಅಭ್ಯರ್ಥಿಗಳಿಗೆ ಒಂದರಂತೆ ಹೆಚ್ಚುವರಿ ಮತಯಂತ್ರಗಳ ಸಂಪರ್ಕ ಕಲ್ಪಿಸಬೇಕು.

ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಅಂದರೆ, 24 ಜನರು ಸ್ಪರ್ಧೆಯಲ್ಲಿದ್ದಾರೆ. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ 23 ಅಭ್ಯರ್ಥಿಗಳು, ಚಿತ್ರದುರ್ಗದಲ್ಲಿ 21, ಬೆಂಗಳೂರಿನ ಯಲಹಂಕದಲ್ಲಿ 20, ಚಿತ್ರದುರ್ಗದಲ್ಲಿ 21, ಗಂಗಾವತಿಯಲ್ಲಿ 19 ಇದ್ದಾರೆ. ಹನೂರು, ಗೌರಿಬಿದನೂರು, ರಾಜಾಜಿನಗರ, ರಾಯಚೂರು, ಕೋಲಾರದಲ್ಲಿ 18 ಅಭ್ಯರ್ಥಿಗಳು ಇದ್ದಾರೆ. ಬ್ಯಾಟರಾಯನಪುರ, ಶ್ರೀರಂಗಪಟ್ಟಣ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳಿದ್ದಾರೆ. ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 16 ಅಭ್ಯರ್ಥಿಗಳಿದ್ದಾರೆ.ಅತಿ ಕಡಿಮೆ ಅಭ್ಯರ್ಥಿಗಳ ಕ್ಷೇತ್ರಗಳು: ಯಮಕನಮರಡಿ, ದೇವದುರ್ಗ, ಕಾಪು, ಬಂಟ್ವಾಳ, ತೀರ್ಥಹಳ್ಳಿ, ಕುಂದಾಪುರ, ಮಂಗಳೂರು ಕ್ಷೇತ್ರಗಳಲ್ಲಿ 5 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.

ಮತಗಟ್ಟೆಗಳ ವಿವರ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳು ಇವೆ. ವಿಶೇಷವಾಗಿ 1,320 ಮಹಿಳಾ ಮತಗಟ್ಟೆಗಳು, 224 ಯುವ ಅಧಿಕಾರಿಗಳು ನಿರ್ವಹಣೆಯ, 224 ವಿಶೇಷಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1200 ಸೂಕ್ಷ್ಮ ಮತಗಟ್ಟೆಗಳಿವೆ. ಶೇ.50 ರಷ್ಟು ಮತಗಟ್ಟೆಗಳು ವೆಬ್‌ಕಾಸ್ಟಿಂಗ್‌ ಸೌಲಭ್ಯವನ್ನು ಹೊಂದಿವೆ.ಪ್ರದೇಶವಾರು ವಿಧಾನಸಭಾ ಕ್ಷೇತ್ರಗಳು: ಬೆಂಗಳೂರು ಪ್ರದೇಶದಲ್ಲಿ 28, ಮಧ್ಯ ಕರ್ನಾಟಕದಲ್ಲಿ 55, ಕರಾವಳಿ ಕರ್ನಾಟಕದಲ್ಲಿ 19, ಕಲ್ಯಾಣ ಕರ್ನಾಟಕ 41, ಕಿತ್ತೂರು ಕರ್ನಾಟಕ 50, ಹಳೆ ಮೈಸೂರು ಕರ್ನಾಟಕ 61 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಭದ್ರತಾ ವ್ಯವಸ್ಥೆ: ಮತದಾನದ ದಿನ ಯಾವುದೇ ಅಹಿತರ ಘಟನೆ ನಡೆಯದಂತೆ ತಡೆಯಲು 1.5 ಲಕ್ಷ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 464 ಪ್ಯಾರಾಮಿಲಿಟರಿ ಫೋರ್ಸ್, 304 ಡಿವೈಎಸ್​ಪಿ, 991 ಇನ್ಸ್​ಪೆಕ್ಟರ್​ಗಳು ಸೇರಿ 84 ಸಾವಿರ ಪೊಲೀಸರಿಂದ ಬಂದೋಬಸ್ತ್ ಇರಲಿದೆ. 185 ಬಾರ್ಡರ್ ಚೆಕ್‌ಪೋಸ್ಟ್​ಗಳನ್ನು ಮಾಡಲಾಗಿದೆ.ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು- ಬಿಜೆಪಿ: ಶಿಗ್ಗಾಂವಿಯಿಂದ ಬಸವರಾಜ ಬೊಮ್ಮಾಯಿ, ಶಿಕಾರಿಪುರದಿಂದ ಬಿ ವೈ ವಿಜಯೇಂದ್ರ, ಪದ್ಮನಾಭನಗರ ಹಾಗೂ ಕನಕಪುರದಿಂದ ಆರ್​ ಅಶೋಕ್​, ವರುಣಾ ಹಾಗೂ ಚಾಮರಾಜನಗರದಿಂದ ಸಚಿವ ವಿ ಸೋಮಣ್ಣ, ಮಲ್ಲೇಶ್ವರಂನಿಂದ ಅಸ್ವತ್ಥ ನಾರಾಯಣ, ಗೋಕಾಕ್​ನಿಂದ ರಮೇಶ್ ಜಾರಕೀಹೊಳಿ, ತಿಪಟೂರಿನಿಂದ ಬಿ ಸಿ ನಾಗೇಶ್, ಬಳ್ಳಾರಿ ಗ್ರಾಮೀಣದಿಂದ ಬಿ ಶ್ರೀರಾಮುಲು, ಮುದೋಳ್​ನಿಂದ ಗೋವಿಂದ್​ ಕಾರಜೋಳ, ಚಿಕ್ಕಮಗಳೂರಿನಿಂದ ಸಿಟಿ ರವಿ ಕಣದಲ್ಲಿದ್ದಾರೆ. ಚಿಕ್ಕಬಳ್ಳಾಪುರದಿಂದ ಸುಧಾಕರ್​.

ಕಾಂಗ್ರೆಸ್​: ಇನ್ನು ಕಾಂಗ್ರೆಸ್​ನಿಂದ ಪ್ರಮುಖವಾಗಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಇನ್ನು ಡಿ ಕೆ ಶಿವಕುಮಾರ್ ಕನಕಪುರ, ಬಿಟಿಎಂ ಲೇಔಟ್​ನಿಂದ ರಾಮಲಿಂಗಾರೆಡ್ಡಿ, ಬಬಲೇಶ್ವರದಿಂದ ಎಂ ಬಿ ಪಾಟೀಲ್​, ಯಮಕನಮರಡಿಯಿಂದ ಸತೀಶ್​ ಜಾರಕಿಹೊಳಿ, ಬಾಲ್ಕಿಯಿಂದ ಈಶ್ವರ್​ ಖಂಡ್ರೆ, ಹಳಿಯಾಳದಿಂದ ಆರ್ ವಿ ದೇಶಪಾಂಡೆ, ಕೊರಟಗೆರೆಯಿಂದ ಜಿ ಪರಮೇಶ್ವರ್​, ದೇವನಹಳ್ಳಿಯಿಂದ ಮಾಜಿ ಕೇಂದ್ರ ಸಚಿವ ಕೆ ಎಚ್​ ಮುನಿಯಪ್ಪ, ಚಿತ್ತಾಪುರದಿಂದ ಪ್ರಿಯಾಂಕ್​ ಖರ್ಗೆ, ಹುಬ್ಬಳ್ಳಿ- ಧಾರವಾಡ ಕೇಂದ್ರದಿಂದ ಜಗದೀಶ್​ ಶೆಟ್ಟರ್​​, ಅಥಣಿಯಿಂದ ಲಕ್ಷ್ಮಣ್​ ಸವದಿ ಕಣದಲ್ಲಿದ್ದಾರೆ.ಇನ್ನು ಜೆಡಿಎಸ್​ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣದಿಂದ, ರೇವಣ್ಣ ಹೊಳೆ ನರಸೀಪುರ, ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ, ಚಾಮುಂಡೇಶ್ವರಿಯಿಂದ ಜಿ ಟಿ ದೇವೇಗೌಡ ಕಣದಲ್ಲಿದ್ದಾರೆ.

error: Content is protected !!