ಮಾರ್ಚ್ 18-19 ರಂದು “ಖಿಯಾದ” SSF ರಾಜ್ಯ ಪ್ರತಿನಿಧಿ ಸಮಾವೇಶ: ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಾಜ್ಯದ 2000 ಪ್ರತಿನಿಧಿಗಳು: ಕಾಶಿಬೆಟ್ಟು ಮಲ್‌ಜಅ ಕ್ಯಾಂಪಸ್‌ನಲ್ಲಿ ಸಮಾವೇಶ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಇದರ ಗ್ರಾಂಡ್ ಪ್ರತಿನಿಧಿ ಸಮಾವೇಶ ಮಾರ್ಚ್ 18-19 ರಂದು ಕಾಶಿಬೆಟ್ಟು ಮಲ್‌ಜಅ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲೆತೀಫ್ ಸಅದಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ. ಕಾವಳಕಟ್ಟೆ ಹಝ್ರತ್ ಉದ್ಘಾಟಿಸಲಿದ್ದಾರೆ. ಎಸ್‌ಎಮ್‌ಎ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಧ್ವಜಾರೋಹಣ ನಡೆಸಲಿದ್ದಾರೆ. ಮಾರ್ಚ್ 19 ರಂದು ಸಂಜೆ 4.00 ಕ್ಕೆ ಹಳೆಪೇಟೆಯಿಂದ ಉಜಿರೆ ಬೆಳಾಲು ತಿರುವು ರಸ್ತೆವರೆಗೆ ಕಾರ್ಯಕರ್ತರ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಯುನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆಗಳಿಗೆ ನಾಯಕರಾಗಿ ಆಯ್ಕೆಯಾದ 2 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಜ್ಯ ಮತ್ತು ಹೊರರಾಜ್ಯದ ಖ್ಯಾತ ತರಬೇತುದಾರರಿಂದ ವಿಶೇಷ ತರಬೇತಿ, ಹಾಗೂ ಮುಂದಿನ ಎರಡು ವರ್ಷಕ್ಕೆ ಸಂಘಟನೆ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿ ನಡೆಯಲಿದೆ. ರಾಜ್ಯ SSF ಇದರ ವಾರ್ಷಿಕ ಕೌನ್ಸಿಲ್ ಸಭೆ ಕೂಡ ನಡೆದು ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಮಾ.19 ರಂದು ಸಮಾರೋಪ ಸಮಾರಂಭದಲ್ಲಿ ನವ ನಾಯಕತ್ವದ ಘೋಷಣೆ ನಡೆಯಲಿದೆ.

ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಅಧ್ಯಕ್ಷ, ಖಾಝಿ ಮಾಣಿ ಉಸ್ತಾದ್ ಸೇರಿದಂತೆ ತಾಲೂಕಿನ ಎಲ್ಲಾ ಸಯ್ಯಿದರುಗಳು, ಸುನ್ನೀ ಸಂಘ ಕುಟುಂಬದ ಸಂಘಟನೆಗಳಾದ ಕರ್ನಾಟಕ ಸುನ್ನೀ ವಿದ್ಯಾರ್ಥಿ ಸಂಘಟನೆ(SBS), ಸುನ್ನೀ ಯುವಜನ ಸಂಘ(SYS), ಕರ್ನಾಟಕ ಮುಸ್ಲಿಂ ಜಮಾಅತ್ ( KMJ), ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ ( SMA), ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ( SJM), ಸುನ್ನೀ ಜಂಇಯ್ಯತುಲ್ ಉಲಮಾ (SJU) ಮೊದಲಾದ ಸಂಘಟನೆಗಳ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ “ಖಿಯಾದ” ರಾಜ್ಯ ಪ್ರತಿನಿಧಿ ಸಮಾವೇಶದ ಅಮೀರ್ ಮುಸ್ತಫಾ ನಈಮಿ, ರಾಜ್ಯ ಆತಿಥೇಯ “ಖಿಯಾದ ಟೀಮ್ ಅನ್ಸಾರಿ” ಸ್ವಾಗತ ಸಮಿತಿ ಚೇರ್ಮನ್ ಸಲೀಂ ಕನ್ಯಾಡಿ, ಕೋಶಾಧಿಕಾರಿ ಅಬೂಬಕ್ಕರ್ ಮಲೆಬೆಟ್ಟು, ಸಂಘಟಕರುಗಳಾದ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಆಲಿಕುಂಞಿ ಮುಂಡಾಜೆ, ಎಂ.ಎ ಕಾಸಿಂ ಮುಸ್ಲಿಯಾರ್ ಮಾಚಾರು ಉಪಸ್ಥಿತರಿದ್ದರು.

error: Content is protected !!