ಫೆ.18 ರಿಂದ 27ರವರೆಗೆ ಕಾಜೂರು ಮಖಾಂ ಶರೀಫ್ ಉರೂಸ್

 

 

 

ಬೆಳ್ತಂಗಡಿ: ಕಾಜೂರು ಮಖಾಂ ಶರೀಫ್ ನಲ್ಲಿ ಈ ವರ್ಷದ ಉರೂಸ್ ಫೆ.18 ರಿಂದ ಫೆ.27ರವರೆಗೆ ಕಾಜೂರು ಕಿಲ್ಲೂರು ಜಮಾಅತರು ಜೊತೆ ಸೇರಿ ವೈಶಿಷ್ಟ್ಯಪೂರ್ಣವಾಗಿ ನಡೆಸಲು ತೀರ್ಮಾನಿದ್ದೇವೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಕಾಜೂರು ತಿಳಿಸಿದ್ದಾರೆ.

 

ಶನಿವಾರ ಬೆಳ್ತಂಗಡಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಉರೂಸ್ ಪ್ರಯುಕ್ತ 10‌ದಿನ ವಿದ್ವಾಂಸರಿಂದ ಧಾರ್ಮಿಕ ಪ್ರವಚನ, ಸಾಮೂಹಿಕ ಸರಳ ವಿವಾಹ, ಸಾರ್ವಜನಿಕ ಬೃಹತ್ ಆರೋಗ್ಯ ಮೇಳ, ಜನಪ್ರತಿನಿಧಿ ಸಂಗಮ, ಬೃಹತ್ ದಿಕ್ರ್ ಮತ್ತು ಬುರ್ದಾ ಮಜ್ಲಿಸ್, ಧಾರ್ಮಿಕ ವಿದ್ಯಾಭ್ಯಾಸ ಕಲಿತು ಭವಿಷ್ಯದ ಧರ್ಮಗುರುಗಳಾಗಲಿರುವ “ಮುತ‌ಅಲ್ಲಿಮರ ಸಂಗಮ”, ಸರ್ವಧರ್ಮೀಯರ ಸಂಗಮ ಹಾಗೂ ಮಹಾ ಅನ್ನದಾನಕ್ಕೆ ತಯಾರಿ ನಡೆದಿದೆ ಎಂದರು.
ಕಾಜೂರು ದರ್ಗಾಶರೀಫ್ ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಸಯ್ಯಿದ್ ಕೂರತ್ ತಂಙಳ್, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಸಂಪ್ರದಾಯದಂತೆ ಫೆ.18ರಂದು ಕಿಲ್ಲೂರು ಜಮಾಅತ್ ನಿಂದ ಸಂದಲ್ ಮೆರವಣಿಗೆ ಆಗಮಿಸಿ, ಧ್ವಜಾರೋಹಣವನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ನೆರವೇರಿಸಲಿದ್ದಾರೆ‌.

 

 

 

ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಉದ್ಘಾಟನೆ ನಡೆಸಲಿದ್ದಾರೆ.
ಫೆ.19 ರಂದು ಸಂಜೆ 7.00 ಕ್ಕೆ ರಿಫಾಯಿಯ್ಯ ದಪ್ಫ್ ಸಮಿತಿ ಕಾಜೂರು ಸಹಭಾಗಿತ್ವದಲ್ಲಿ ಸಾಮೂಹಿಕ ಸರಳ ವಿವಾಹ ಸಮಾರಂಭ ನಡೆಯಲಿದ್ದು, ಧಾರ್ಮಿಕ ಪಂಡಿತ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. ‌ಯೆನೆಪೋಯ ವಿವಿ ಕುಲಾದಿಪತಿ ವೈ. ಅಬ್ದುಲ್ಲಕುಂಞಿ ಉದ್ಘಾಟನೆ ನೆರವೇರಿಸಲಿದ್ದಾರೆ‌. ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಶೀದ್ ಝೈನಿ ಸಖಾಫಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸಯ್ಯಿದ್ ಕಾಜೂರು ತಂಙಳ್, ತಾ.ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಕರ್ನಾಟಕ ಮುಸ್ಲಿಂ ಜಮಾಅತ್ ತಾ. ಅಧ್ಯಕ್ಷ ಎಸ್.ಎಂ ತಂಙಳ್, ಗಂಜಿಮಠ ತಂಙಳ್, ಮುಮ್ತಾಝ್ ಅಲಿ ಕೃಷ್ಣಾಪುರ ಸಹಿತ ಉಲಮಾಗಳು, ಗಣ್ಯರು ಭಾಗವಹಿಸಲಿದ್ದಾರೆ. ವಧುವಿಗೆ 5 ಪವನ್ ಚಿನ್ನ, ವಸ್ತ್ರ ಮತ್ತು ಅವರ 5 ಸಾವಿರ ಬಂಧುಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಅದೇ ದಿನ ರಾಜ್ಯಮಟ್ಟದ ಇಸ್ಲಾಮಿಕ್ ಸಾಂಸ್ಕೃತಿಕ ದಫ್ಫ್ ಸ್ಪರ್ಧೆ ನಡೆಯಲಿದೆ.
ಫೆ.24 ರಂದು ರಾತ್ರಿ ಬೃಹತ್ ದಿಕ್ರ್ ಮತ್ತು ಬುರ್ದಾ ಮಜ್ಲಿಸ್ ನಡೆಯಲಿದ್ದು ನೇತೃತ್ವವನ್ನು ಸಯ್ಯಿದ್ ಬಾಯಾರ್ ತಂಙಳ್ ವಹಿಸಲಿದ್ದಾರೆ. ‌ಕಾಜೂರು ತಂಙಳ್ ಉದ್ಘಾಟಿಸಲಿದ್ದು, ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಅನೇಕ ಮಂದಿ ಸಯ್ಯಿದರುಗಳು, ವಿವಿಧ ಸುನ್ನೀ ಸಂಘಟನೆಗಳ ನಾಯಕರುಗಳು ಭಾಗವಹಿಸಲಿದ್ದಾರೆ.
ಫೆ.26 ರಂದು ಬೆಳಗ್ಗೆ ಯೆನಪೋಯ ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗಗಳ ತಜ್ಞ ವೈದ್ಯರ ಉಪಸ್ಥಿತಿಯಲ್ಲಿ 1 ಸಾವಿರ ಮಂದಿಯ ಬೃಹತ್ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ನಡೆಯಲಿದೆ. ಶಾಸಕ ಹರೀಶ್ ಪೂಂಜ ಈ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಲಿದ್ದಾರೆ. ಅಪರಾಹ್ನ 4ರಿಂದ ಜನಪ್ರತಿನಿಧಿ ಸಂಗಮ ನಡೆಯಲಿದ್ದು ಕಾಜೂರು ಆಸುಪಾಸಿನ ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಮತ್ತು ಇಂದಬೆಟ್ಟು ಗ್ರಾ.ಪಂ. ಮಟ್ಟದ ಜನಪ್ರತಿನಿಧಿಗಳು, ಸಹಕಾರಿ ಮತ್ತು ಧಾರ್ಮಿಕ ಸಂಸ್ಥೆಗಳ ಮುಖಂಡರ ಸಮಾವೇಶ ನಡೆಯಲಿದೆ.
ಫೆ. 27 ರಂದು ಸಂಜೆ ಸರ್ವಧರ್ಮೀಯರ ಸೌಹಾರ್ದ ಸಂಗಮ‌ ನಡೆಯಲಿದ್ದು ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಬಿ‌.ಎಂ. ಫಾರೂಕ್ ನಡೆಸಲಿದ್ದಾರೆ. ಪ್ರಭಾಷಣವನ್ನು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರು ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರ. ಕಾರ್ಯದರ್ಶಿ ಮೌಲಾನಾ ಎನ್.ಕೆ.ಎಂ ಶಾಫಿ ಸ‌ಅದಿ ಬೆಂಗಳೂರು ನಡೆಸಲಿದ್ದಾರೆ‌. ಸಯ್ಯಿದ್ ಕಾಜೂರು ತಂಙಳ್, ಅಝೀಝ್ ದಾರಿಮಿ ಚೊಕ್ಕಬೆಟ್ಟು ಮತ್ತು ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ. ಜೋಸೆಫ್ ವಲಿಯಪರಂಬಿಲ್ ಸಂದೇಶ ನೀಡಲಿದ್ದಾರೆ.
ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಉಪನಾಯಕ ಯು‌.ಟಿ ಖಾದರ್, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಮಾಜಿ‌ ಸಚಿವ ಝಮೀರ್ ಅಹಮ್ಮದ್, ಬಿ. ರಮಾನಾಥ ರೈ ಹಾಗೂ ಕೆ. ಗಂಗಾಧರ ಗೌಡ, ಮಾಜಿ‌ ಮುಖ್ಯ ಸಚೇತಕ ವಸಂತ ಬಂಗೇರ, ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಹುಸೇನ್ ಪಠಾಣ್, ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಅಡ್ವಕೇಟ್ ರಿಯಾಝ್ ಖಾನ್ ಮತ್ತು ಯಾಕೂಬ್ ಯೂಸುಫ್ ಹೊಸನಗರ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ. ಶೇಖ್ ಬಾವಾ ಹಾಜಿ ಸಹಿತ ಪ್ರಮುಖ ಗಣ್ಯರುಗಳು ಭಾಗವಹಿಸಲಿದ್ದಾರೆ.
ಅಂದೇ ರಾತ್ರಿ ಸಯ್ಯಿದ್ ಕುಂಬೋಳ್ ತಂಙಳ್ ನೇತೃತ್ವದಲ್ಲಿ ಉರೂಸ್ ಸಮಾರೋಪ ನಡೆಯಲಿದ್ದು, ಸಯ್ಯಿದ್ ಕಾಜೂರು ತಂಙಳ್, ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಹೈದ್ರೋಸಿ ತಂಙಳ್, ಡಾ‌.ಕಾವಳಕಟ್ಟೆ ಹಝ್ರತ್, ಮೋನು ಹಾಜಿ ಕಣಚ್ಚೂರು, ರಫೀಕ್ ಸ‌ಅದಿ ಕಿಲ್ಲೂರು ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಧಾರ್ಮಿಕ ಪ್ರವಚನದ ಭಾಗವಾಗಿ ಫೆ‌.17 ರಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ‌ ಶೈಖುನಾ ಮಾಣಿ ಉಸ್ತಾದ್, ಫೆ.22 ರಂದು ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ನೇತೃತ್ವದಲ್ಲಿ ಇಬ್ರಾಹಿಂ ಖಲೀಲ್ ಹುದವಿ ಕಾಸರಗೋಡು, ಫೆ‌.26 ರಂದು ವಾಗ್ಮಿ ಕುಮ್ಮನಂ ನಿಝಾಮುದ್ದೀನ್ ಅಝ್ಹರಿ ಅಲ್ ಖಾಸಿಮಿ ಕೊಲ್ಲಂ ಕೇರಳ ಇವರಿಂದ ಪ್ರಭಾಷಣ ನಡೆಯಲಿದೆ. ಉರೂಸಿನ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ ಅನ್ನದಾನ ನಡೆಯಲಿದೆ‌ ಎಂದರು.
ಪತ್ರಿಕಾಗೋಷ್ಠಿಯಲ್ಲಿ  ಉರೂಸ್  ಸಮಿತಿ ಪ್ರಧಾನ ಕಾರ್ಯದರ್ಶಿ ಜೆ. ಹೆಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಉರೂಸ್ ಸಮಿತಿ ಕೋಶಾಧಿಕಾರಿ
ಕೆ.ಎಮ್ ಮುಹಮ್ಮದ್ ಕಮಾಲ್ ಕಾಜೂರು, ಉರೂಸ್ ಸಮಿತಿ ಉಪಾಧ್ಯಕ್ಷ ಹಾಜಿ ಬಿ.ಹೆಚ್.ಅಬೂಬಕ್ಕರ್ ಕಿಲ್ಲೂರು, ಜೊತೆ ಕಾರ್ಯದರ್ಶಿ ಅಶ್ರಫ್ ತಿಮ್ಮನಬೆಟ್ಟು ಕಿಲ್ಲೂರು   ಉಪಸ್ಥಿತರಿದ್ದರು.

error: Content is protected !!