ವಿಶ್ವ ಗುರುವನ್ನಾಗಿಸುವ ಗುರಿ ಹೊಂದಿರುವ ಮೋದಿ ಆಡಳಿತ ಎಲ್ಲರಿಗೂ ಮಾದರಿ. ಕಾಂಗ್ರೆಸಿಗರಿಗೆ ಗಾಂಧಿ ಬೇಕು ಹೊರತು ಅವರ ಆದರ್ಶವಲ್ಲ: ಬಿಜೆಪಿ ವಕ್ತಾರೆ ತೇಜಸ್ವಿನಿ ರಮೇಶ್

 

ಬೆಳ್ತಂಗಡಿ : ಕಳೆದ 70 ವರ್ಷಗಳಿಂದ ಆಡಳಿತದಲ್ಲಿ ಬದಲಾವಣೆ ಆಗದನ್ನು ಕೇವಲ 7 ವರ್ಷದಲ್ಲಿ ಮುಂದುವರಿಯುತ್ತಿರುವ ತಂತ್ರಜ್ಞಾನ ಯುಗದಲ್ಲೂ ಜನಗಳ ನಿರೀಕ್ಷೆಯಂತೆ ಹೊಸ ಶಕೆ ಆರಂಭವಾಗಿದೆ. ಜನಸಂಘದಿಂದ ಇವತ್ತಿನ ವರೆಗೆ ಕನಸಿನ ಶ್ರೇಷ್ಠ ಭಾರತ ಹಿರಿಯರ ಮಾರ್ಗದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ, ಬಿಜೆಪಿ ರಾಜ್ಯ ವಕ್ತಾರೆ ಡಾ. ತೇಜಸ್ವಿನಿ ರಮೇಶ್ ಹೇಳಿದರು

ಅವರು ಬುಧವಾರ ಬೆಳ್ತಂಗಡಿ ಶ್ರೀಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

 

 

ನಮ್ಮ ಗುರಿಯನ್ನು ಮುಟ್ಟೋದಕ್ಕೆ ಒಂದು ಸಾಧನ ಅಧಿಕಾರ. ಇದೊಂದು ಜವಾಬ್ದಾರಿ. ದೇಹ ಅಳಿದರೂ ನಾವು ಮಾಡುವ ಸೇವೆ ಅಳಿಯಬಾರದು. ಇದನ್ನು ಪ್ರತಿಯೊಬ್ಬ ಕಾರ್ಯಕರ್ತ ಅರಿತು ಕೊಂಡಿದ್ದರಿಂದ ಗ್ರಾ.ಪಂ.ನಿಂದ ಪ್ರಧಾನಿ ತನಕ ಅಧಿಕಾರವೇ ಸೇವೆ. ದೇಶ ಮೊದಲು ಎಂಬುದು ಬಿಜೆಪಿಯ ರಾಜಕೀಯ ಸಂಸ್ಕೃತಿ. ಅಭಿವೃದ್ಧಿ ಮಾಡುವುದು, ಮೂಲಭೂತ ಸೌಕರ್ಯ ಒದಗಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಆದರೆ ರಾಷ್ಟ್ರ ರಕ್ಷಣೆ, ವಿಶ್ವದಲ್ಲಿ ಮನ್ನಣೆ, ಅಭಿವೃದ್ಧಿಯ ಜತೆಗೆ ವಿಶ್ವಗುರುವಾನ್ನಾಗಿಸುವ ಗುರಿ ಹೊಂದಿರುವ ಮೋದಿಯವರ ಆಡಳಿತ ಎಲ್ಲರಿಗೂ ಮಾದರಿ. ರಾಷ್ಟ್ರದ ಅಸ್ಮಿತೆ, ಸುರಕ್ಷತೆ, ಅಪಾಯದಲ್ಲಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕುರಿತು ಕೀಳು ಮನೋಭಾವ ಇತ್ತು. ಹಿಂದೆ ಬೇಡುವ ಕೈಯನ್ನು ಬದಲಾಯಿಸಿ ಇಂದು ನೀಡುವ ಕೈಯಾಗಿದೆ. ಇದು ನಮ್ಮ ದೇಶಕ್ಕೆ ಹೆಮ್ಮೆ ತರುವಂತಹ ಕೆಲಸ ಮೋದಿಯವರಿಂದ ಆಗಿದೆ ಎಂದರು.

ಕಾಂಗ್ರೇಸಿಗರಿಗೆ ಗಾಂಧೀ ಬೇಕು ಹೊರತು ಅವರ ಆದರ್ಶವಲ್ಲ. ಸ್ವಚ್ಚ ಭಾರತ್, ಗ್ರಾಮ ನೈರ್ಮಲ್ಯ ಮೂಲಕ ಅವರ ಆದರ್ಶವನ್ನು ಬಿ.ಜೆ.ಪಿ ಪಾಲಿಸುತ್ತಿದೆ. ಬೇಡದೇ ಇರುವ ಕಾನೂನುಗಳನ್ನು ತೆಗೆದು ಹಾಕುವಲ್ಲಿ ನಮ್ಮ ಪಾತ್ರ ಪ್ರಮುಖವಾಗಿದೆ. ರೈತರ ಜತೆ 18 ಬಾರಿ ಮಾತುಕತೆ ಮಾಡಿದ್ದೆವು. ರೈತರನ್ನು ದಾರಿ ತಪ್ಪಿಸುವ ಮೂಲಕ ರಾಷ್ಟ್ರದ ಗಮನವನ್ನು ಬೇರೆಡೆ ತರಿಸಿ ಭಾರತ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಕಾರ್ಯತಂತ್ರಗಳು ನಡೆಯುತ್ತಿದೆ. ಇಂತಹ ಚಳುವಳಿಗಳನ್ನು ರೈತರ ಕೈಯಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ. ಕಳ್ಳ ನಿದ್ದೆ ಮಾಡುವವರನ್ನು ಎದ್ದೇಳಿಸಲು ಸಾದ್ಯವಿಲ್ಲ ಎಂದು ವಿಪಕ್ಷವನ್ನು ಟೀಕಿಸಿದರು.

ಮೋದಿಯವರ ಆಡಳಿತದಲ್ಲಿ ದೇಶದ ರಕ್ಷಣೆಯ ಜತೆಗೆ ದೇಶದ ಹಿತ ದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳಾಗಿದೆ. ನಾವು ಪ್ರತಿಯೊಬ್ಬರು ಮೋದಿಯವರ ಹಾಗೆ ಕೆಲಸ ಮಾಡಿರುವ ಪರಿಣಾಮ ಈಗ ನಾವು ಅದಿಕಾರದಲ್ಲಿದ್ದೇವೆ. ಅಧಿಕ ದ್ರವ್ಯಗಳು ಜಲ ಮಾರ್ಗದ ಮೂಲಕ ಬರುತ್ತಿದ್ದವು. ಈಗ ಜಲ ಮಾರ್ಗವನ್ನು, ವಾಯು ಮಾರ್ಗವನ್ನು, ಭೂಮಾರ್ಗ ಸುರಕ್ಷಿತ ಮಾಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಆಗಿದೆ. ಜತೆಗೆ ಅಕ್ರಮ ಶಸ್ತ್ರಾಸ್ತ್ರ, ಅಕ್ರಮ ಭಯೋತ್ಪಾದಕ ತರಬೇತಿಯನ್ನು ನಿಲ್ಲಿಸಲಾಗಿದೆ. ನಮ್ಮಲ್ಲಿ ಕುಟುಂಬ, ಸಂಸ್ಕೃತಿ ಉಳಿಯಬೇಕು. ಆರೋಗ್ಯವಂತ ಯುವಕ ಯುವತಿಯರ ಅಗತ್ಯವಿದೆ. ಲವ್ ಜಿಹಾದ್, ಹನಿಟ್ರ್ಯಾಪ್‌ಗಳು ನಡೆಯುತ್ತಿದ್ದು, ಇಂತಹವುಗಳನ್ನು ನಿಲ್ಲಿಸಬೇಕಾಗಿದೆ. ನಮ್ಮ ಮಕ್ಕಳಿಗೆ ನರೇಂದ್ರ ಮೋದಿಯವರ ಜೀವನ ಮತ್ರು ಕಠಿಣ ಹಾದಿಯ ಕುರಿತು ಪಿ.ಎಚ್.ಡಿ ಮಾಡಬೇಕು ಎಂದು ಸಲಹೆ ನೀಡಿದರು.
ನಮ್ಮ ಸಂವಿಧಾನವನ್ನು ಓದಿದರೆ ಯಾವೊಬ್ಬನು ಕ್ರೈಂ ಮಾಡಲು ಸಾಧ್ಯವಿಲ್ಲ. ಗೋವುಗಳ ಹತ್ಯೆ ಮಾಡುವರಿಗೆ ಪ್ರತ್ಯುತ್ತರ ನೀಡಲು ನಮ್ಮ ಕಾರ್ಯಕರ್ತರು ಸಿದ್ದರಿದ್ದಾರೆ. ಪ್ರಧಾನಿ ಮೋದಿಯವರ ಆಡಳಿತ ಬಂದ ಮೇಲೆ ಹಿರಿಯರಿಗೆ ಒಂದು ಹುದ್ದೆ ಒಂದು ಪೆನ್ಷನ್, ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಣ್ಣ ಉದ್ಯಮಗಳಿಗೆ ವ್ಯವಹಾರ ಮಿತಿಯನ್ನು ೪೦ ಲಕ್ಷಕ್ಕೆ ಹೆಚ್ಚಳ, ಹಣಕಾಸು ಸುಧಾರಣೆಯಲ್ಲಿ ನೋಟು ಅಮಾನ್ಯ, ಆರೋಗ್ಯಕರ ಟ್ಯಾಕ್ಸ್ ಪದ್ದತಿ, ತ್ರಿವಳಿ ತಲಾಖ್, 370 ವಿಧಿ ರದ್ದು ಮೊದಲಾದ ಪ್ರಮುಖ ಬದಲಾವಣೆ ದೇಶದಲ್ಲಿ ಆಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು,
ಕಳೆದ 40-50 ವರ್ಷಗಳಿಂದ ಯಾವ ಉದ್ದೇಶದಿಂದ ನಮ್ಮ ಹಿರಿಯರು ದುಡಿದಿದ್ದಾರೋ ಅದೇ ರೀತಿ ಪ್ರಧಾನಿ ಮೋದಿಯವರಿಂದ ಹಿಡಿದು ಗ್ರಾ.ಪಂ. ಸದಸ್ಯರ ತನಕ ಕಾರ್ಯಕರ್ತರ ಜತೆಗೂಡಿ ಬಿಜೆಪಿ ಪಕ್ಷ ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ. 2024 ರಲ್ಲಿ ಮತ್ತೊಮ್ಮೆ ಮೋದಿ ಆಡಳಿತವನ್ನು ದೇಶದಲ್ಲಿ ತಂದೇ ತರುತ್ತೇವೆ ಎಂಬ ದೃಢ ಸಂಕಲ್ಪ ಮಾಡಿದ್ದೇವೆ. ಯಾರನ್ನು ವೈಭವೀಕರಿಸಿಕೊಂಡು ಮಾಡುವ ಕಾರ್ಯಕ್ರಮ ಇದಲ್ಲ. ನಮ್ಮೆಲ್ಲ ಭಾರತೀಯತೆಯ, ನಮ್ಮ ದೇಶದ ಮಣ್ಣಿನ ಸಂಸ್ಕೃತಿಯ ಪರಂಪರೆಯ ಜೀವನ ಮೌಲ್ಯಗಳ ಪ್ರತೀಕವಾಗಿ ಮೋದಿಯವರು ನಮ್ಮ ಪ್ರಧಾನಿಯಾಗಿದ್ದಾರೆ. 20 ವರ್ಷ ರಾಜಕೀಯ ಜೀವನದಲ್ಲಿ ಒಂದೇ ರಜೆ ತೆಗೆದುಕೊಳ್ಳದ ನೇತಾರ ಮೋದಿಯವರಾಗಿದ್ದಾರೆ. ವಿರೋಧ ಪಕ್ಷದವರಿಗೆ ಭ್ರಷ್ಟಚಾರದ ಆರೋಪ ಮಾಡುವ ಅವಕಾಶ ನೀಡದೇ 7 ವರ್ಷದಲ್ಲಿ ಯಾವುದೇ ಕಳಂಕವಿಲ್ಲದ ಆಡಳಿತವನ್ನು ಮೋದಿಯವರು ನೀಡಿದ್ದಾರೆ ಎಂದರು.

ವಿಶ್ವ ಬೆರಾಗುವ ರೀತಿಯಲ್ಲಿ ಕೋವಿಡ್ ಸಂದರ್ಭ ಪ್ರಧಾನಿಯವರು ನಿಭಾಯಿಸಿದ್ದಾರೆ. ಕಾಂಗ್ರೆಸ್‌ನವರಿಗೆ ಅದು ಅರ್ಥವಾಗದು. ಅವರು ದೇಶದ ಕುರಿತು ಆಲೋಚಿಸದೇ ಸ್ವಂತದ ಕುರಿತು ಆಲೋಚಿಸುವವರು. ಅವರು ಗಾಂಧೀಜಿಯವರ ಹೆಸರು ಹೇಳಿಕೊಂಡು ಅಧಿಕಾರ ನಡೆಸಿದ್ದಾರೆ. ಇದೀಗ ಬೆಳ್ತಂಗಡಿಯಲ್ಲಿ ಕೇಸರಿ ಶಾಲು ಹಾಕಿಕೊಂಡು ವಿಪಕ್ಷದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಅದು ಬಿಜೆಪಿ ಹಿಂದುತ್ವದ ಸಾಧನೆ. ಹಿಂದುತ್ವದ ಓಟು ಲೆಕ್ಕಕ್ಕೆ ಇಲ್ಲವೆಂದವರು ಇದೀಗ ನಾಟಕ ಮಾಡುತ್ತಿರುವ ಅವರು ಎಷ್ಟು ಹತಾಶೆ ಹೊಂದಿದ್ದಾರೆ ಎಂದು ಅರ್ಥ ಆಗುತ್ತಿದೆ. ಯಾವುದೇ ತುಕುಡೆಗಳು ಬರಲಿ. ಅದನ್ನು ಎದುರಿಸುವ ಶಕ್ತಿ ನಮಗಿದೆ. ಟೀಕಾಕಾರಿಗೆ ಸರಿಯಾದ ಉತ್ತರ ಕೋಡುವ ಶಕ್ತಿ ನಮಗೂ ಇದೆ. ಆದರೆ ಟೀಕಾಕಾರರಂತೆ ಗೌರವ ಕಳೆದುಕೊಳ್ಳಲು ನಾವು ತಯಾರಿಲ್ಲ ಎಂದರು.

ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಮಂಡಲ ಪ್ರ.ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್ ಮತ್ತು ಗಣೇಶ್ ಗೌಡ, ಕಾರ್ಯದರ್ಶಿ ಪ್ರಶಾಂತ್ ಕೆ. ಪಾರೆಂಕಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ಧನ್, ಮಹಿಳಾ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ತಾಲೂಕು ಅಧ್ಯಕ್ಷೆ ವಿಜಯಾ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಮೊದಲಾದವರು ಇದ್ದರು.

ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಹಕಾರ ಭಾರತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿ, ಮಂಡಲ ಉಪಾಧ್ಯಕ್ಷ ಸೀತಾರಾಮ ಬೆಳಾಲು ವಂದಿಸಿದರು.

 

error: Content is protected !!