
ಬೆಳ್ತಂಗಡಿ : ಅಂಗಳಕ್ಕೆ ನಾಯಿ ತಂದು ಹಾಕಿದ ಚೆಂಡಿನಂಥ ಸ್ಫೋಟಕ ವಸ್ತುವನ್ನು ಬಾಲ್ ಎಂದು ಭ್ರಮಿಸಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಭಯಂಕರ ಸದ್ದಿನಲ್ಲಿ ಸ್ಫೋಟಗೊಂಡು ಬಾಲಕ ಗಾಯಗೊಂಡು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾದ
ಮನೆಗೆ ಗುರುವಾರ ಸಂಜೆ ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡ ಭೇಟಿ ನೀಡಿ ಘಟನಾ ಸ್ಥಳದಲ್ಲಿ ಪರಿಶೀಲಿಸಿ ಮಹಜರು ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಮನೆಯಂಗಳದಲ್ಲಿ ಬುಧವಾರ ಸಂಜೆ ಸಂಭವಿಸಿದ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದ.
ಚೆಂಡಿನಂಥ ವಸ್ತುವೊಂದನ್ನು ಮನೆಯ ನಾಯಿ ಎಲ್ಲಿಂದಲೋ ಕಚ್ಚಿಕೊಂಡು ಬಂದು ಅಂಗಳದ ಬದಿಯಲ್ಲಿ ಹಾಕಿದ್ದು ಇದು ಏನೆಂದು ತಿಳಿಯದ ಮುಗ್ಧ ಮಕ್ಕಳು ಬಾಲ್ ಎಂದು ಕ್ರಿಕೆಟ್ ಆಡುತ್ತಿದ್ದಾಗ ಆ ವಸ್ತು ಸ್ಫೋಟಗೊಂಡ ಪರಿಣಾಮ ಅವಘಡ ಸಂಭವಿಸಿತ್ತು.
ಅಂಗಳದಲ್ಲಿ ಮಕ್ಖಳಿಬ್ಬರು ಆಟವಾಡುತ್ತಿದ್ದ ವೇಳೆ ಪತ್ತೆಯಾದ ಚೆಂಡಿನಂಥ ವಸ್ತುವೊಂದನ್ನು ಹೆಕ್ಕಿಕೊಂಡು ಬಂದ ಬಾಲಕರಿಬ್ಬರು ಕ್ರಿಕೆಟ್ ಆಟವಾಡಿದ್ದಾರೆ.
ಏನೂ ಅರಿಯದ ಮುಗ್ಧ ಮಕ್ಕಳ ಪೈಕಿ
ಒಬ್ಬ ಬೌಲಿಂಗ್ ಮಾಡಿದ್ದು ಇನ್ನೊಬ್ಬ ಬ್ಯಾಟಿಂಗ್ ಮಾಡಿದ ಸಂದರ್ಭ ಸ್ಫೋಟಗೊಂಡಿದ್ದು ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ ಗಾಯಗೊಂಡಿದ್ದ.
ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಫೋಟಗೊಂಡ ಮನೆಗೆ
ಧರ್ಮಸ್ಥಳ ಎಸ್ ಐ ಸಮರ್ಥ್ ಗಾಣಿಗೇರ,
ಸೋಕೋ ವಿಭಾಗದ ಸುಮಂತ್, ಆಶಿಫ್ ಅವರುಗಳನ್ನೊಳಗೊಂಡ
ಪೊಲೀಸರ ತಂಡ ಗುರುವಾರ
ಸಂಜೆ ಭೇಟಿ ನೀಡಿ ಮನೆಯವರಿಂದ ಘಟನೆಯ ಮಾಹಿತಿ ಪಡೆದಿದ್ದಾರೆ.
ಈ ಸಂದರ್ಭ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಸ್ಫೋಟಕದ ಅವಶೇಷ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಖಂಡಿಗ, ಸ್ಥಳೀಯರಾದ ಸಂತೋಷ್ ಬಲಿಪೆ ಇದ್ದರು.