ಪಡಂಗಡಿ ಸ್ನಾನಕ್ಕೆ ತೆರಳಿದ ಯುವಕ ನದಿಯಲ್ಲಿ ಮುಳುಗಿ ಸಾವು

ಬೆಳ್ತಂಗಡಿ: ಪಡಂಗಡಿ ಸಮೀಪ ಪಲ್ಗುಣಿ ನದಿಯ ಮಾಂತ್ರಾಯಿ ಗುಂಡಿಯಲ್ಲಿ ಸ್ನಾನ ಮಾಡುತ್ತಿದ್ದ ಗೆಳೆಯನನ್ನು ರಕ್ಷಿಸಲು ಹೋದ ಯುವಕ ನದಿಯ ಸುಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.

ಕಾರ್ಯಾಣ ನಿವಾಸಿ ದುಗ್ಗಪ್ಪ ಎಂಬವರ ಮಗ ನಿಶಾಂತ್ (೨೨) ಯುವಕನೇ ಸಾವನ್ನಪ್ಪಿದವ. ಈತ ಮತ್ತು ಸ್ನೇಹಿತರು ಸ್ಥಳೀಯ ಹೊಳೆಗೆ ಸ್ನಾನಕ್ಕೆಂದು ಹೋಗಿದ್ದರು. ಸ್ನೇಹಿತನೋರ್ವ ನೀರಿನಲ್ಲಿ ಮುಳುಗಿದ್ದು ಆತನನ್ನು ನಿಶಾಂತ್ ಮತ್ತು ಗೆಳೆಯರು ಸೇರಿ ರಕ್ಷಿಸಿ, ದಡಕ್ಕೆ ತಂದಿದ್ದರೂ, ನಿಶಾಂತ್ ಸುಳಿಗೆ ಸಿಲುಕಿದ್ದಾನೆ. ಸುಮಾರು ಇಪ್ಪತ್ತು ನಿಮಿಷ ನೀರಿನೊಳಗಿದ್ದು ಬಳಿಕ ಸ್ಥಳಿಯ ಮುಳುಗು ತಜ್ಞರು ಈತನನ್ನು ಮೇಲಕ್ಕೆ ಎತ್ತಿದ್ದಾರೆ.

ಈ ವೇಳೆ ಆತನ ಸ್ನೇಹಿತರು ನಿಶಾಂತ್‌ನನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳಕ್ಕೆ ಅಂಬುಲೆನ್ಸ್ ತರಿಸಿದ್ದು ಆದರೆ ದುರಾದೃಷ್ಟವಶಾತ್ ಆ ವೇಳೆಗಾಗಲೇ ನಿಶಾಂತ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡುತ್ತಿದ್ದ ನಿಶಾಂತ್ ಕ್ರೀಡಾ ಕ್ಷೇತ್ರ ಅಪಾರ ಆಸಕ್ತಿ ಹೊಂದಿದ್ದ, ಈತ ಬಳಂಜ ವಾಲಿಬಾಲ್ ಕ್ಲಬ್‌ನ ಸದಸ್ಯರಾಗಿದ್ದರು.

error: Content is protected !!