ಕಿಂಡಿ ಅಣೆಕಟ್ಟಿನ ಹೊಂಡದಲ್ಲಿ ಮುಳುಗಿ ಯುವಕ ಮೃತ್ಯು: ಅನಾಥವಾದ ಸಹೋದರಿ

ಬೆಳ್ತಂಗಡಿ: ಕಿಂಡಿ ಅಣೆಕಟ್ಟು ಹೊಂಡದಲ್ಲಿ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ಕುಕ್ಕೇಡಿ ಸಮೀಪದ ಉಮಿಲಾಯಿ ಎಂಬಲ್ಲಿ ನಡೆದಿದೆ.

ಮಾಲಾಡಿ ಗ್ರಾಮದ ಪುರಿಯ ನಿವಾಸಿ ದಿ|ಕುಂಞ ಮತ್ತು ದಿ| ಗುಲಾಬಿ ದಂಪತಿಯ ಪುತ್ರ ರವೀಂದ್ರ(20) ಉಮಿಲಾಯಿ ಕಿಂಡಿ ಅಣೆಕಟ್ಟಿನ ಕೆಳಗಡೆ ಇರುವ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ.

ರವೀಂದ್ರ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಇದ್ದವರು ರಕ್ಷಣೆಗೆ ಮುಂದಾದರೂ ಕಿಂಡಿ‌ ಅಣೆಕಟ್ಟು ಬಳಿಯ ಹೊಂಡದಲ್ಲಿ ಆಳ ಹೆಚ್ಚು ಇದ್ದುದರಿಂದ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತರ ತಂದೆ ಹಲವು ವರ್ಷಗಳ ಹಿಂದೆ ನಿಧನ ಹೊಂದಿದ್ದರು, ತಾಯಿ ನಾಲ್ಕು ತಿಂಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಇದೀಗ ರವೀಂದ್ರ ಅವರ ಸಹೋದರಿ ಆನಾಥೆಯಾಗಿದ್ದಾರೆ.

ತಂದೆ, ತಾಯಿ‌‌ ನಿಧನದ ಬಳಿಕ ರವೀಂದ್ರ ಹಾಗೂ ಅವರ ಸಹೋದರಿ ಮಾವನ ಮನೆಯಲ್ಲಿದ್ದರು. ರವೀಂದ್ರ ಅವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಇವರ ಸಹೋದರಿ ಗೇರುಬೀಜದ ಫ್ಯಾಕ್ಟರಿಗೆ ಕೆಲಕ್ಕೆ ಹೋಗುವ ಮೂಲಕ ಜೀವನ ಸಾಗಿಸುತ್ತಿದ್ದರು. ಇದೀಗ ಸಹೋದರನನ್ನು ಕಳೆದುಕೊಂಡು ಅನಾಥೆಯಾಗಿದ್ದಾರೆ.

ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!