ಧರ್ಮಸ್ಥಳ ಚಿನ್ನಾಭರಣ ಕಳ್ಳತನ ಪ್ರಕರಣ: ತಾಯಿ ಮಗಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ ಧರ್ಮಸ್ಥಳ ಪೊಲೀಸರು:ನ್ಯಾಯಂಗ ಬಂಧನ:

 

 

 

 

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಒಳಗಡೆ ಆಂದ್ರಪ್ರದೇಶದ ಭಕ್ತಾದಿಗಳ ಬ್ಯಾಗ್ ನಿಂದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ-ಮಗಳನ್ನು 5 ತಿಂಗಳ ಬಳಿಕ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆಂದ್ರಪ್ರದೇಶದ ನೆಲ್ಲೂರು ನಿವಾಸಿ ಜೆ.ಲತಾ ಕುಟುಂಬ ಸಮೇತ ಮೇ.2 ರಂದು ಮನೆಯಿಂದ ಹೊರಟು ಮೇ.3 ರಂದು ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವರ ದರ್ಶನಕ್ಕೆ ಬಂದಿದ್ದು ಈ ವೇಳೆ ತನ್ನ ಬ್ಯಾಗ್ ನಲ್ಲಿ 6,79,000 ರೂಪಾಯಿ ಮೌಲ್ಯದ 97 ಗ್ರಾಂ ಚಿನ್ನಾಭರಣವನ್ನು ಇಟ್ಟುಕೊಂಡಿದ್ದರು. ಬಳಿಕ ಉಡುಪಿ ಕಡೆ ಕೆಲಸದ ವಿಚಾರವಾಗಿ ಹೋಗುವಾಗ ಬ್ಯಾಗ್ ನೋಡಿದಾಗ ಅದರಲ್ಲಿ ಇಟ್ಟಿದ ಚಿನ್ನಾಭರಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದ್ದ ತಕ್ಷಣ ಉಡುಪಿಯಿಂದ ವಾಪಸ್ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ಮೇ.4 ರಂದು ಜೆ.ಲತಾ ಪ್ರಕರಣ ದಾಖಲಿಸಿದ್ದರು.

 

 

 

ಧರ್ಮಸ್ಥಳ ಪೊಲೀಸರು ಪ್ರಕರಣದ ಬಗ್ಗೆ ಕಳೆದ ಐದು ತಿಂಗಳಿನಿಂದ ವಿವಿಧ ಅಯಾಮಗಳಲ್ಲಿ ತನಿಖೆ ಮಾಡುತ್ತಿರುವಾಗ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗಳಿಬ್ಬರು ವಿವಿಧ ಕಡೆ ಪ್ರಯಾಣ ಮಾಡಿಕೊಂಡು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರು‌. ಕೊನೆಗೂ ಆರೋಪಿಗಳನ್ನು ನ.23 ರಂದು ಧರ್ಮಸ್ಥಳದ ದ್ವಾರದ ಬಳಿ ಮತ್ತೆ ಕಳ್ಳತನ ಮಾಡಲು ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ ಸಟಲ್ಮೆಂಟ್ 2 ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬಿ.ಬಿ.ಜಾನ್(59) ಮತ್ತು ಮಗಳು ಮಸಾಭಿ @ ಆರತಿ (34) ಎಂಬವರನ್ನು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ನ.23 ರಂದು ಭಾನುವಾರ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.ನ.24 ರಂದು ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳ್ಳತನ ಮಾಡಿದ ಸುಮಾರು 5,32,000 ಸಾವಿರ ಮೌಲ್ಯದ 76 ಗ್ರಾಂ ಚಿನ್ನಾಭರಣ ಆರೋಪಿಗಳ ಹುಬ್ಬಳಿ ಮನೆಯಿಂದ ನ.25 ರಂದು ಮಂಗಳವಾರ ಧರ್ಮಸ್ಥಳ ಪೊಲೀಸರು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳಿಬ್ಬರ ಮೇಲೆ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ‌. ಇಬ್ಬರು ಕೂಡ ದೇವಾಲಯಗಳನ್ನು ಟಾರ್ಗೆಟ್‌ ಮಾಡಿ ಭಕ್ತಾಧಿಗಳ ಸೋಗಿನಲ್ಲಿ ಹೋಗಿ ಚಿನ್ನಾಭರಣ ಮತ್ತು ಹಣ ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದಾರೆ ಎನ್ನಲಾಗಿದೆ. ಇಬ್ಬರು ಆರೋಪಿಗಳ ವಿಚಾರಣೆ ಹಾಗೂ ಮಹಜರು ಮುಗಿಸಿರುವ ಕಾರಣದಿಂದ ಧರ್ಮಸ್ಥಳ ಪೊಲೀಸರು ನ.26 ರಂದು ಬುಧವಾರ ಸಂಜೆ 4:30 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ್ ನೇತೃತ್ವದಲ್ಲಿ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ, ಸಿಬ್ಬಂದಿ ರಾಜೇಶ್, ಪ್ರಶಾಂತ್, ಚರಣ್ ರಾಜ್, ಸಂದೀಪ್, ಮಲ್ಲಿಕಾರ್ಜುನ್, ಶಶಿಕುಮಾರ್, ಮಂಜುನಾಥ್ ಪಾಟೀಲ್, ಪ್ರಮೋದಿನಿ, ಸುನಿತಾ, ಸೌಭಾಗ್ಯ, ದೀಪಾ, ಉಷಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

error: Content is protected !!