ಬೆಳ್ತಂಗಡಿ:ನದಿಗೆ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮುಂಡಾಜೆ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತ ವ್ಯಕ್ತಿ ಮುಂಡಾಜೆ ಗ್ರಾಮದ ಚೆನ್ನಿಗುಡ್ಡೆ ನಿವಾಸಿ ಪೂವಪ್ಪ ನಾಯ್ಕ ಎಂದು ತಿಳಿದು ಬಂದಿದೆ.
ಪೂವಪ್ಪ ನಾಯ್ಕ ಅವರು ಗುರುವಾರ ಸಂಜೆ ಮನೆ ಸಮೀಪದ ಮುಂಡ್ರುಪ್ಪಾಡಿ ಸೇತುವೆಯ ಮೃತ್ಯುಂಜಯ ನದಿಗೆ ಮೀನು ಹಿಡಿಯಲೆಂದು ಬಲೆ ಹಿಡಿದುಕೊಂಡು ಹೋಗಿ ನದಿಯ ಸೇತುವೆ ಅಡಿಯಲ್ಲಿ ಬಲೆ ಹಾಕಿ
ತನ್ನ ಮಗ ದಿನೇಶ್ ನನ್ನು ಅಲ್ಲೆ ಬಿಟ್ಟು ಮತ್ತೊಂದು ಕಡೆ ಬಲೆ ಹಾಕಲು ತೆರಳಿ ಅಲ್ಲಿಂದ ರಾತ್ರಿ ಸುಮಾರು 7.30. ಕ್ಕೆ ಹಿಂತಿರುಗಿದ್ದು ನಂತರ ಡ್ಯಾಂ ಬಳಿಯ ಬಲೆ ತೆಗೆಯಲು ವಾಪಸ್ಸು ಹೋದವರು ಸುಮಾರು ಹೊತ್ತಾದರೂ ಬಾರದೇ ಇದ್ದಾಗ ದಿನೇಶ್ ಅವರು ಇತರರಿಗೆ ಮಾಹಿತಿ ನೀಡಿ ಹುಡುಕಾಡಿದಾಗ ಸ್ಥಳೀಯರೊಬ್ಬರ ತೋಟದಲ್ಲಿ ಬಾಯಿಯಲ್ಲಿ ನೊರೆ ಬಂದ ರೀತಿಯಲ್ಲಿ ಬಿದ್ದಿದ್ದು, ಪರಿಶೀಲಿಸಿದಾಗ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮಗ ದಿನೇಶ್ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.