ಬೆಳ್ತಂಗಡಿ: ಬಲ್ಲಾಳರಾಯನ ದುರ್ಗಕ್ಕೆ ಬೆಳ್ತಂಗಡಿ ಮೂಲಕ ಚಾರಣಕ್ಕೆ ತೆರಳಿದ್ದ 10 ವಿದ್ಯಾರ್ಥಿಗಳ ತಂಡ ಬಲ್ಲಾಳರಾಯನ ದುರ್ಗಾದ ದಟ್ಟ ಕಾಡಿನಲ್ಲಿ ಸಿಲುಕಿ ಹಾಕಿಕೊಂಡ ಘಟನೆ ಸೋಮವಾರ ನಡೆದಿದ್ದು ತಡರಾತ್ರಿಯ ವೇಳೆ ಹತ್ತು ಮಂದಿಯನ್ನು ಪೊಲೀಸರು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲೆಯ ಮೆಡಿಕಲ್ ಕಾಲೇಜೊಂದರ ಐದು ಮಂದಿ ವಿದ್ಯಾರ್ಥಿ ಐದು ಮಂದಿ ವಿದ್ಯಾರ್ಥಿನಿಗಳ ತಂಡ ಬೆಳ್ತಂಗಡಿಗೆ ಬಂದು ಅರಣ್ಯದ ಮೂಲಕ ಟ್ರೆಕ್ಕಿಂಗ್ ಆರಂಭಿಸಿತು. ರಾತ್ರಿಯ ವೇಳೆ ದಟ್ಟ ಕಾಡಿನಲ್ಲಿ ಸರಿಯಾಗಿ ದಾರಿ ಸಿಗದೇ ಸಿಲುಕಿಕೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಾರ್ಯ ಪ್ರವೃತ್ತರಾದ ಚಿಕ್ಕಮಗಳೂರು ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಜೊತೆ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು ತಡ ರಾತ್ರಿಯ ವೇಳೆ ಇವರನ್ನು ದಟ್ಟ ಅರಣ್ಯದಲ್ಲಿ ಪತ್ತೆ ಹಚ್ಚವಲ್ಲಿ ಯಶಸ್ವಿಯಾಗಿದ್ದು ಬೆಳಗ್ಗಿನ ಜಾವ ಅರಣ್ಯದಿಂದ ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ತಿಳಿದು ಬಂದಿದೆ.