ವಿಶೇಷ ವರದಿ
ಪಿಲಿಗೂಡು: ರಾಜ್ಯ ಹೈವೇಯಿಂದ ಜಸ್ಟ್ 50 ಮೀಟರ್ ದೂರದಲ್ಲಿದ್ರೂ ನೆಟ್ ವರ್ಕ್ ಪಡೆಯಬೇಕಾದ್ರೆ ಗುಡ್ಡ ಏರಬೇಕಾದ ಪರಿಸ್ಥಿತಿ. ಆನ್ ಲೈನ್ ಕ್ಲಾಸ್, ಅಸೈನ್ಮೆಂಟ್ ಪೂರ್ಣಗೊಳಿಸಲು ಸೊಳ್ಳೆ ಕಚ್ಚಿಸಿಕೊಂಡು, ಮಳೆಯಲ್ಲಿ ಕೊಡೆ ಹಿಡಿದುಕೊಂಡು, ಹಗಲಲ್ಲಿ ಡೇರೆ ಕಟ್ಟಿಕೊಂಡು ಮನೆಯಿಂದ ದೂರದಲ್ಲಿರುವ ಕಾಡಿಗೆ ತೆರಳಿ ಕಷ್ಟಪಟ್ಟು ನೆಟ್ವರ್ಕ್ ಪಡೆದು ಶಿಕ್ಷಣ ಪಡೆಯಬೇಕಾದ ಪರಿಸ್ಥಿತಿ. ರಸ್ತೆಯಲ್ಲಿ ಸೊಪ್ಪು ಮಾರುವವರ ಬಳಿಯೂ ಡಿಜಿಟಲ್ ಪೇ ಇರುವ ಈ ಯುಗದಲ್ಲಿ ಈ ಊರು ನೆಟ್ವರ್ಕ್ ಆಹಾಕಾರ ಎದುರಿಸುತ್ತಿದೆ. ಇದುವೇ ಪಿಲಿಗೂಡು ಎಂಬ ಊರಿನ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ದುಸ್ಥಿತಿಯಾಗಿದೆ.
ಹೌದು… ಹೆಸರಿಗಷ್ಟೇ ಇದು ಡಿಜಿಟಲ್ ಯುಗ… ನೆಟ್ವರ್ಕ್ ಹುಡುಕ ಹೊರಟರೆ ಹರೋಹರ… ವಿಡಿಯೋ ಡೌನ್ಲೋಡ್ ಕನಸಿನ ಮಾತು… ಇಮೇಜ್ ಡೌನ್ಲೋಡ್ ಕಷ್ಟ ಕಷ್ಟ… ಟೆಕ್ಸ್ಟ್ ಮೆಸೇಜ್ ಅಷ್ಟ ಕಷ್ಟೇ… ಆನ್ ಲೈನ್ ಕ್ಲಾಸ್ ನಡೆದ್ರೆ ಗುಡ್ಡ ಏರಬೇಕಾಗಿರುವುದು ಪಕ್ಕಾ… ಇದು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಭಾರತದ ದುಸ್ಥಿತಿ ಎಂದರೆ ತಪ್ಪಾಗಲಾರದು.
ಪಿಲಿಗೂಡು ಸುತ್ತಮುತ್ತಲಿನ ಗುಡ್ಡಮಯ ಪ್ರದೇಶದಲ್ಲಿ ನೆಟ್ವರ್ಕ್ ಮರೀಚಿಕೆಯಾಗಿದೆ. ಉಳ್ಳವರು ನೆಟ್ವರ್ಕ್ ಬೂಸ್ಟರ್ ಅಳವಡಿಸಿದರು… ನಾನೇನು ಮಾಡಲಿ ಬಡವನಯ್ಯ ಎಂಬ ಪರಿಸ್ಥಿತಿ ಇಲ್ಲಿನ ಸ್ಥಳೀಯರದ್ದು. ಮುಖ್ಯವಾಗಿ ವಿವಿಧ ಸ್ಥರಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳದ್ದು. ಸ್ಥಳೀಯವಾಗಿ ಕಣಿಯೂರು, ಕುದ್ರಡ್ಕ, ಕುಪ್ಪೆಟ್ಟಿ, ನಾಳ ಎಂಬ ಪ್ರದೇಶಗಳಲ್ಲಿ ಇರುವ ಟವರ್ ಗಳ ನಡುವೆ ಇರುವ ಪ್ರದೇಶ ಪಿಲಿಗೂಡು, ಮಾವಿನಕಟ್ಟೆ, ಜೋಡುತ್ತಾರು, ಗುಂಪಕಲ್ಲು ಹಾಗೂ ಇತರ ಪ್ರದೇಶಗಳು. ಆದರೆ ಗುಡ್ಡಗಳಿಂದ ಆವೃತವಾದ ಈ ಪ್ರದೇಶದಲ್ಲಿ ನೆಟ್ವರ್ಕ್ ಎಂಬುದು ಮರೀಚಿಕೆ. ಡಿಜಿಟಲ್ ಡಿವೈಡ್, ಡಿಜಿಟಲ್ ಲಿಟ್ರಸಿ ಇಲ್ಲಿ ಅಕ್ಷರಸ್ಥರಿಗೂ ಕನಸಿನ ಮಾತು, ಕಾರಣ ನೆಟ್ವರ್ಕ್ ಸಮಸ್ಯೆ. ಇಲ್ಲಿ ವಾಹನದಲ್ಲಿ ಎಲ್ಲಿ ಬೇಕಾದರೂ ತಲುಪಬಹುದು ಆದರೆ ದೂರವಾಣಿ ಸಂಪರ್ಕ ಅಸಾಧ್ಯ.
ಪರಿಹಾರ ಲಭ್ಯ:
ಪಿಲಿಗೂಡು, ಮಾವಿನಕಟ್ಟೆ, ಜೋಡುತ್ತಾರು ಪ್ರದೇಶ ಗುಡ್ಡಗಳಿಂದ ಆವೃತವಾಗಿದೆ. ಇಲ್ಲಿ ಅಧ್ಯಯನ ಮಾಡುತ್ತಿರುವ ಹಲವಾರು ವಿದ್ಯಾರ್ಥಿಗಳು, ಉದ್ಯೋಗಸ್ಥರು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ನಂತಹಾ, ಇಮೇಜ್ ಡೌನ್ಲೋಡ್ ಸಂದರ್ಭದಲ್ಲಿ ಗುಡ್ಡ ಏರಬೇಕಾಗಿರುವುದು ಅನಿವಾರ್ಯವಾಗಿದೆ. ಆದರೆ ಇದುವೇ ಅಂತಿಮವಲ್ಲ. ಸ್ಥಳೀಯ ಪಿಲಿಗೂಡಿನ ಚಾಮುಂಡಿ ಗುಡ್ಡ, ಸಂತ ಅನ್ನಾರವರ ಚರ್ಚ್ ಗುಡ್ಡ ಮೊದಲಾದ ದೊಡ್ಡ ಬೆಟ್ಟಗಳಲ್ಲಿ ಏರ್ ಟೆಲ್ ಅಥವಾ ಜಿಯೋ ಟವರ್ ಅಳವಡಿಸಿದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಉಳಿದ ಸ್ಥಳೀಯ ಟವರ್ಗಳು ತುಂಬಾ ದೂರಲ್ಲಿದ್ದು ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತಾಗಿದೆ.
ನಾನು ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಮೂರು ವರ್ಷಗಳ ಕಾಲ ಗುಡ್ಡದಲ್ಲಿ ಸೊಳ್ಳೆ ಕಚ್ಚಿಸಿಕೊಂಡು, ಕಷ್ಟಪಟ್ಟು ಅಧ್ಯಯನ ಮಾಡಬೇಕಾದ ಪರಿಸ್ಥಿತಿ ಎದೆ. ತಂದೆ, ತಾಯಿ ರಾತ್ರಿ ಹೊತ್ತಿನಲ್ಲೂ ರಕ್ಷಣೆ ನೀಡಿದ ಪರಿಣಾಮ ವಿದ್ಯಾಭ್ಯಾಸ ಅಂತಿಮ ಹಂತಕ್ಕೆ ತಲುಪಿದೆ. ಈಗಲೂ ನಾಲ್ಕನೇ ವರ್ಷದ ಅಂತಿಮ ಹಂತದ ಪ್ರಾಜೆಕ್ಟ್ ವರ್ಕ್ ನಡೆಸಲು ಗುಡ್ಡ ಏರಬೇಕಾದ ಪರಿಸ್ಥಿತಿ ಅನಿವಾರ್ಯ. ನಾಲ್ಕುವರ್ಷಗಳದಲೂ ಇದು ನಡೆದಿದೆ.
ಪ್ರಜ್ಞಾ
ಇಂಜಿನಿಯರಿಂಗ್ ವಿದ್ಯಾರ್ಥಿನಿ, ಪಿಲಿಗೂಡು.
ನಾವು ರಾಜ್ಯ ಹೆದ್ದಾರಿಗೆ ಹತ್ತಿರವಾಗಿದ್ದರೂ, ನೆಟ್ವರ್ಕ್ನಿಂದ ದೂರವಾಗಿದ್ದೇವೆ. ಆನ್ ಲೈನ್ ಕ್ಲಾಸ್ ನಡೆಸಲು ಗುಡ್ಡ ಏರಬೇಕಾದ ಅನಿವಾರ್ಯ ಪರಿಸ್ಥಿತಿ ಹಲವು ವರ್ಷಗಳಿಂದ ಇದೆ. ಈ ಕುರಿತು ಏರೆ ಟೆಲ್, ಜಿಯೋ ಮೊದಲಾದ ಸಂಸ್ಥಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ. ಡಿಜಿಟಲ್ ಯುಗದಲ್ಲೂ ಇಲ್ಲಿನ ಜನ ಕರೆ ಮಾಡಲೂ ಕಷ್ಟಪಡಬೇಕಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಕಥೆ ದೇವರಿಗೇ ಪ್ರೀತಿ. ಅವರ ಕಷ್ಟ ಕೇಳುವವರಿಲ್ಲ. ಗುಡ್ಡ ಪ್ರದೇಶವಾದರೂ ಸರಿ ಸೂಕ್ತ ಜಾಗದಲ್ಕಿ ಟವರ್ ನಿರ್ಮಾಣ ನಡೆದು ನೆಟ್ವರ್ಕ್ ಲಭ್ಯತೆಗೆ ಎಲ್ಲರೂ ನೆರವಾಗಬೇಕಿದೆ.
ಹರ್ಷಿತ್ ಪಿಂಡಿವನ, ಉಪನ್ಯಾಸಕರು,
ಅಂಬಿಕಾ ಪದವಿ ಕಾಲೇಜು, ಪುತ್ತೂರು.