ಕಾಸರಗೋಡು: ತೋಟದ ಕೆರೆಯಲ್ಲಿ ತಾಯಿ ಮತ್ತು ಎರಡು ವರ್ಷದ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಫೆ.21ರಂದು ಸಂಜೆ ಪೆರ್ಲ ಉಕ್ಕಿನಡ್ಕ ಸಮೀಪದ ಏಳ್ಕಾನದಲ್ಲಿ ನಡೆದಿದೆ.
ಉಕ್ಕಿನಡ್ಕ ಬಳಿಯ ಏಳ್ಕಾನ ದಟ್ಟಿಗೆಮೂಲೆಯ ಈಶ್ವರ ನಾಯ್ಕ ಎಂಬವರ ಪತ್ನಿ ಪರಮೇಶ್ವರಿ (42), ಪುತ್ರಿ ಪದ್ಮಿನಿ (2) ಮೃತಪಟ್ಟವರು.
ಪತಿ ಈಶ್ವರ ನಾಯ್ಕ ಹಾಗೂ ಅವರ ಪುತ್ರ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಸಂಜೆ ಅವರು ಹಿಂತಿರುಗಿ ಬಂದಾಗ ಮನೆಯಿಂದ ಇಬ್ಬರು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಕಂಗಿನ ತೋಟದ ಕೆರೆಯಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೂಡಲೇ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಗೆ ತಲುಪುವ ಮೊದಲೇ ಇವರು ಸಾವನ್ನಪ್ಪಿದ್ದರು.
ಪರಮೇಶ್ವರಿ ಮತ್ತು ಬಾಲಕಿ ಪದ್ಮನಿ ಸಾವಿನ ಬಗ್ಗೆ ಸಂಶಯಾಸ್ಪದ ಸಾವು ಎಂಬುದಾಗಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಸದ್ಯ ಘಟನೆ ಹೇಗೆ ಸಂಭವಿಸಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮಗು ಆಟವಾಡುತ್ತಾ ಕೆರೆ ಬದಿಗೆ ಹೋಗಿ ಬಿದ್ದಿರುವ ಬಗ್ಗೆ ಶಂಕೆ ಇದೆ. ಮಗು ಬಿದ್ದಿರುವುದು ಗೊತ್ತಾದ ಕೂಡಲೇ ತಾಯಿ ರಕ್ಷಣೆಗೆಂದು ಕೆರೆಗೆ ಹಾರಿದಾಗ ಇಬ್ಬರೂ ಮುಳುಗಿರುವ ಸಾಧ್ಯತೆ ಇದೆ. ತಾಯಿಗೆ ಈಜು ಕೂಡ ಬರುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.