ಮಾವನ ಮನೆಯ ಬಾಡೂಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿದ ವ್ಯಕ್ತಿ: ‘ಮನೆಯಲ್ಲಿ ತುಂಬಾ ಗಲಾಟೆ ಆಗುತ್ತಿದೆ ಬನ್ನಿ’ ಎಂದು ನಾಟಕ: ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು..?

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಮಾವನ ಮನೆಯ ಪಿತೃಪಕ್ಷದ ಬಾಡೂಟಕ್ಕೆ ಹೋಗಲು ವ್ಯಕ್ತಿಯೊಬ್ಬ ಪೊಲೀಸ್ ಜೀಪ್ ಕರೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿ ಪಲ್ಗುಣಿ ಗ್ರಾಮದ ತನ್ನ ಮಾವನ ಮನೆಗೆ ಮಹಾಲಯ ಅಮಾವಾಸ್ಯೆಯ ಬಾಡೂಟಕ್ಕೆ ಹೋಗಬೇಕಿತ್ತು. ಆದರೆ ಕೊಟ್ಟಿಗೆಹಾರ ಸುತ್ತಮುತ್ತ ಮಳೆ ಸುರಿಯುತ್ತಿದ್ದರಿಂದ ಪಲ್ಗುಣಿ ಗ್ರಾಮಕ್ಕೆ ಹೋಗಲು ಯಾವ ವಾಹನಗಳು ಸಿಗಲಿಲ್ಲ. ಅದಕ್ಕಾಗಿ ಆತ 112 ಪೊಲೀಸ್ ಠಾಣೆಗೆ ಫೋನ್ ಮಾಡಿ ಸರ್, ‘ಮನೆಯಲ್ಲಿ ತುಂಬಾ ಗಲಾಟೆ ಆಗುತ್ತಿದೆ ಬನ್ನಿ’ ಎಂದು ಕೊಟ್ಟಿಗೆಹಾರಕ್ಕೆ ಪೊಲೀಸರನ್ನು ಕರೆಸಿಕೊಂಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಎಲ್ಲಿ ಗಲಾಟೆ ನಡಿ ಮನೆಗೆ ಹೋಗೋಣ ಎಂದಾಗ, ಸರ್.. ‘ಯಾವ ಗಲಾಟೆಯೂ ಇಲ್ಲ. ನಾನು ಪಲ್ಗುಣಿ ಗ್ರಾಮಕ್ಕೆ ನನ್ನ ಮಾವನ ಮನೆಗೆ ಪಿತೃಪಕ್ಷದ ಊಟಕ್ಕೆ ಹೋಗಬೇಕಿತ್ತು. ಅದಕ್ಕಾಗಿ ನಿಮಗೆ ಕರೆ ಮಾಡಿದೆ. ನನ್ನನ್ನು ಸ್ವಲ್ಪ ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡಿ ಸರ್’ ಎಂದು ಕೇಳಿದ್ದಾನೆ.

ಆತನ ಮಾತು ಕೇಳಿದ ಪೊಲೀಸರಿಗೆ ಬಯ್ಯಬೇಕೋ ಅಥವಾ ನಗಬೇಕೋ ಗೊತ್ತಾಗಲಿಲ್ಲ. ಬಳಿಕ ಪೊಲೀಸರು ಆತನಿಗೆ ‘ಪೊಲೀಸ್ ಜೀಪ್ ಇರುವುದು ಸಮಾಜದ ಕೆಲಸ, ಸರ್ಕಾರದ ಕೆಲಸ ಮಾಡೋದಕ್ಕೆ ಕಣಪ್ಪಾ. ನಿಂಗೆ ಮಾವನ ಮನೆಗೆ ಕರ್ಕಂಡ್ ಹೋಗಕ್ಕಲ್ಲ. ಇನ್ನೊಮ್ಮೆ ಹೀಗೆ ಮಾಡಬೇಡ’ ಎಂದು ಬುದ್ಧಿ ಹೇಳಿದ್ದಾರೆ. ನಂತರ ಪೊಲೀಸರೇ ಲಾರಿಯೊಂದನ್ನು ಕೈ ಹಿಡಿದು ನಿಲ್ಲಿಸಿ ಆತನನ್ನು ಪಲ್ಗುಣಿ ಗ್ರಾಮದ ಮಾವನ ಮನೆಗೆ ಕಳಿಸಿದ್ದಾರೆ.

error: Content is protected !!