ಕುತ್ಲೂರು ನಕ್ಸಲ್ ಪೀಡಿತ ಪ್ರದೇಶವಲ್ಲ: “ಸಾಹಸಿಕ ಪ್ರವಾಸಿ ತಾಣ”: ರುದ್ರರಮಣೀಯ ಪ್ರಕೃತಿ ಸೌಂದರ್ಯಕ್ಕೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ನಕ್ಸಲ್ ಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದ ಕುತ್ಲೂರು ಈಗ ತನ್ನೂರಿನ ಕಳಂಕವನ್ನು ಕಳಚಿಕೊಂಡಿದೆ ಎಂದರೆ ತಪ್ಪಾಗಲಾರದು. ಕುತ್ಲೂರು ಈಗ ನಕ್ಸಲ್ ಪೀಡಿತ ಪ್ರದೇಶವಲ್ಲ ಬದಲಾಗಿ ಮನಮೋಹಕ ಪ್ರಕೃತಿ ಸೌಂದರ್ಯವನ್ನೇ ಹೊತ್ತು ನಿಂತಿರುವ “ಸಾಹಸಿಕ ಪ್ರವಾಸಿ ತಾಣ”. ಈ ಸೊಬಗು ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿ ಈ ಗ್ರಾಮ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಏರ್ಪಡಿಸಿದ್ದ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ-2024ರ “ಸಾಹಸಿಕ ಪ್ರವಾಸಿ ತಾಣ” ವಿಭಾಗದಲ್ಲಿ ಪ್ರಾಕೃತಿಕ ಸೌಂದರ್ಯವನ್ನೇ ಹೊದ್ದು ಮಲಗಿರುವ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮಕ್ಕೆ ಸೆ.27ರ ಶುಕ್ರವಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಹೊಂದುತ್ತಿರುವ ಗ್ರಾಮಗಳನ್ನು ಗುರುತಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಬೆಸ್ಟ್ ಟೂರಿಸಂ ವಿಲೇಜ್ ಕಾಂಪಿಟೇಶನ್ -2024 ಅನ್ನು ಏರ್ಪಡಿಸಲಾಗಿತ್ತು.

ನವದೆಹಲಿಯ ವಿಗ್ಯಾನ್ ಭವನದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್, ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು. ಕುತ್ಲೂರು ಗ್ರಾಮದ ಪರವಾಗಿ ಹರೀಶ್ ಡಾಕಯ್ಯ ಪೂಜಾರಿ, ಶಿವರಾಜ್ ಅಂಚನ್ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.

ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ನಿವಾಸಿಗಳಾಗಿದ್ದು, ಬೆಂಗಳೂರಿ ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಹರೀಶ್ ಡಾಕಯ್ಯ ಪೂಜಾರಿ, ಕತಾರ್ ಉದ್ಯೋಗಿ ಸಂದೀಪ್ ಕುತ್ಲೂರು ಮತ್ತು ಶಿವರಾಜ್ ಅಂಚನ್ ಅವರು ತಮ್ಮ ಗ್ರಾಮದ ಪ್ರವಾಸಿ ತಾಣಗಳು, ಪರಿಸರ ಹಾಗೂ ಪ್ರಕೃತಿಯ ಸೊಬಗಿನ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ಇದನ್ನು ಸ್ಪರ್ಧಾ ನಿಯಮದಂತೆ ಆನ್‌ಲೈನ್‌ನಲ್ಲಿ ಆಪ್‌ಲೋಡ್ ಮಾಡಿದ್ದರು. ಇದರ ಬಗ್ಗೆ ಹಲವು ಸುತ್ತುಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿಯನ್ನು ಪ್ರವಾಸೋದ್ಯಮ ಮಂತ್ರಾಲಯ ಪಡೆದುಕೊಂಡಿತ್ತು. ದೇಶಾದ್ಯಂತ ನಡೆದ ʼಅತ್ಯುತ್ತಮ ಪ್ರವಾಸಿ ಹಳ್ಳಿಗಳು’ ಸ್ಪರ್ಧೆಯಲ್ಲಿ ಕುತ್ತೂರು ಗ್ರಾಮ ಆಯ್ಕೆಯಾಗಿತ್ತು.

ಕುತ್ಲೂರು ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಪಶ್ವಿಮ ಘಟ್ಟದ ತಪ್ಪಲಿನಲ್ಲಿರುವ ಈ ಗ್ರಾಮವು ರುದ್ರರಮಣೀಯ ಪರ್ವತ ಶ್ರೇಣಿಗಳನ್ನು ಪ್ರವಾಸಿಗರ ಕಣ್ಣಮುಂದಿಡುತ್ತದೆ. ಗ್ರಾಮದಲ್ಲಿ ಅರ್ಬಿ ಫಾಲ್ಸ್ ಎನ್ನುವ ಅದ್ಭುತವಾದ ಜಲಪಾತವಿದೆ. ವರ್ಷದ 8 ತಿಂಗಳು ತುಂಬಿ ಹರಿಯುತ್ತಿರುವ ಈ ಜಲಪಾತವನ್ನು ನೋಡುವುದೇ ಒಂದು ಸೊಬಗು. ಪಕ್ಕದಲ್ಲೇ ನದಿ ಇದ್ದು, ಫಿಶಿಂಗ್ ಮಾಡಬಹುದು.

ಈ ಸ್ಥಳ ವೀಕ್ಷಣೆಗೆ ಬಂದ ಪ್ರವಾಸಿಗರು ಬಳಿಕ ಧರ್ಮಸ್ಥಳ, ಕಾರ್ಕಳ, ಮೂಡುಬಿದಿರೆ, ಮಂಗಳೂರು ಮತ್ತಿತರ ಜನ ಪ್ರಿಯ ಪ್ರವಾಸಿ ತಾಣ, ಬೀಚ್, ದೇವಸ್ಥಾನ, ತೀರ್ಥಕ್ಷೇತ್ರಗಳಿಗೂ ಭೇಟಿ ನೀಡಬಹುದು.

ಸದ್ಯ ಈ ಊರಿಗಿದ್ದ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಈಗ ಕಳಚಿಕೊಂಡು ಕುತ್ಲೂರು ಎಂದ ತಕ್ಷಣ “ಸಾಹಸಿಕ ಪ್ರವಾಸಿ ತಾಣ” ಎಂಬ ಹೆಸರು ಬರುವಂತಾಗಿದೆ. ಗ್ರಾಮಕ್ಕೆ ಸಿಕ್ಕ ರಾಷ್ಟ್ರಪ್ರಶಸ್ತಿಯಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

error: Content is protected !!