ಕಾಲರಾ ಬಗ್ಗೆ ಮುಂಜಾಗೃತ ಕ್ರಮ: ಪ್ರಕಟನೆ ಹೊರಡಿಸಿ ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್

ಬೆಳ್ತಂಗಡಿ: ಬೇಸಿಗೆ ಮತ್ತು ಮಳೆಗಾಲದ ಅವಧಿಯಲ್ಲಿ ಕರುಳು ಬೇನೆ/ಕಾಲರಾ ಪ್ರಕರಣಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಕಟನೆ ಹೊರಡಿಸಿ ಮುಂಜಾಗೃತ ಕ್ರಮಗಳ ಕುರಿತು ವಿವರಣೆ ನೀಡಿದ್ದಾರೆ.

ಕುಡಿಯಲು ಶುದ್ಧವಾದ ನೀರನ್ನು ಉಪಯೋಗಿಸಬೇಕು. ಅಂದರೆ ನಳ್ಳಿ ಬೋರ್‌ವೆಲ್‌ಗಳು ಕ್ರಿಮಿನಾಶಕ ಸಿಂಪಡಿಸಿದ ನೀರನ್ನು ಕ್ಲೋರಿನೇಟ್ ಮಾಡಿ ಉಪಯೋಗಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಇನ್ನೂ ಕ್ಷೇಮ

ಮಲ ಮೂತ್ರ ವಿಸರ್ಜನೆಗೆ ಶೌಚಾಲಯ ಬಳಸತಕ್ಕದ್ದು. ಬಯಲು ಶೌಚಾಲಯವನ್ನು ಸಂಪೂರ್ಣ ತಪ್ಪಿಸತಕ್ಕದ್ದು.

ಯಾವಾಗಲೂ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿಟ್ಟ ತಿಂಡಿ ತಿನಿಸು, ಪಾನೀಯ ಹಾಗೂ ಕತ್ತರಿಸಿದ ಹಣ್ಣು ಹಂಪಲುಗಳನ್ನು ತಿನ್ನಬಾರದು.

ಬೀದಿಯಲ್ಲಿ ಮರಾಟ ಮಾಡುವ ಐಸ್ ಕ್ಯಾಂಡಿ ಮತ್ತು ಐಸ್ ಕ್ರೀಮ್‌ಗಳನ್ನು ಮಕ್ಕಳಿಗೆ ಕೊಡಿಸಬಾರದು.

ಧೂಳು ಮತ್ತು ನೊಣಗಳಿಂದ ರಕ್ಷಿಸಲು ಎಲ್ಲಾ ಆಹಾರ ಮತ್ತು ಕುಡಿಯುವ ನೀರನ್ನು ಮುಚ್ಚಿಡುವುದು. ಹಣ್ಣು ಹಂಪಲು ಉಪಯೋಗಿಸುವ ಮುನ್ನ ತೊಳಿಯುವುದು. ಆಹಾರ ಪದಾರ್ಥಗಳು ಕೆಡುವ ಮುನ್ನ ವಿಲೇವಾರಿ ಮಾಡತಕ್ಕದ್ದು.

ಕಾಲರಾ/ಕರುಳುಬೇನೆ/ಅತಿಸಾರ ಭೇದಿ ಕಂಡು ಬಂದಲ್ಲಿ ರೋಗಿಗೆ ಹೆಚ್ಚು ದ್ರವರೂಪದ ಆಹಾರ ಪದಾರ್ಥಗಳಾದ ಗಂಜಿ ನೀರು, ಹಾಲು, ಎಳನೀರು ಹಾಗೂ ಆರೋಗ್ಯ ಕಾರ್ಯಕರ್ತರಲ್ಲಿ ದೊರೆಯುವ ಪುನರ್ಜಲೀಕರಣ ದ್ರಾವಣಗಳನ್ನು ನೀಡುತ್ತಾ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು.

ಕರುಳು ಬೇನೆ/ಕಾಲರಾ ವಿರುದ್ಧ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವ ಚಿಕಿತ್ಸೆಯನ್ನು ಪಡೆಯುವುದು.

ಹೋಟೇಲು, ಕ್ಯಾಂಟಿನ್ ಇತ್ಯಾದಿಗಳಲ್ಲಿ ಕುಡಿಯಲು ಬಿಸಿನೀರು ಹಾಗೂ ಬಿಸಿ ಆಹಾರವನ್ನು ಕೇಳಿ ಪಡೆಯುವುದು.

ತಮ್ಮ ಸುತ್ತಮುತ್ತಲಿನ ಪರಿಸರ ನೈರ್ಮಲ್ಯವನ್ನು ಕಾಪಾಡುವುದು.

error: Content is protected !!