ಪಟ್ಟೂರು: ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ: ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಸೆ.02ರಂದು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟ ನಡೆಯಿತು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಯವರ ಕಛೇರಿ ಬೆಳ್ತಂಗಡಿ ತಾಲೂಕು, ಸಮೂಹ ಸಂಪನ್ಮೂಲ ಕೇಂದ್ರ ಕೊಕ್ಕಡ ಇವರ ವತಿಯಿಂದ ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು ( ಶ್ರೀರಾಮ ವಿದ್ಯಾ ಸಂಸ್ಥೆ ) ಇವರ ಸಹಯೋಗದೊಂದಿಗೆ ನಡೆದ ಈ ಪಂದ್ಯಾಟವನ್ನು ಪಟ್ರಮೆ ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಜ್ ಅಂಗಾರಗುಡ್ಡೆ ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಕೊಕ್ಕಡ ವಲಯದ ಸಿಆರ್ ಪಿ ವಿಲ್ಫ್ರೆಡ್ ಪಿಂಟೋ ಅವರು, ಪಟ್ಟೂರು ಶಾಲೆಯು ಇಲಾಖೆಯ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರವನ್ನು ನೀಡುತ್ತಾ ಬರುತ್ತಿರುವುದು ಸ್ಮರಣೀಯ. ಸ್ಪರ್ಧೆಯಲ್ಲಿ ಅನೇಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ಕಾರಣ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ಎನ್ನುವ ಭಾವನೆಯಿಂದ ತೀರ್ಪುಗಾರರು ಪರಿಗಣಿಸಬೇಕಿದೆ ಎಂದರು.

ಪಟ್ಟೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರವಿಚಂದ್ರ ಪುಡ್ಕೆತ್ತೂರು ಅವರು ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿಕೊಂಡಿದ್ದು ವೇದಿಕೆಯಲ್ಲಿ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವಿರಾಜ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಧರ್ಣಪ್ಪ ಗೌಡ ಮೊಟ್ಟಿಕಲ್ಲು, ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ರೈ ಪರಾರ್ತಿಮಾರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಜಯ ಉಪಸ್ಥಿತರಿದ್ದರು.

ಕ್ರೀಡಾಂಗಣವನ್ನು ನೇಲ್ಯಡ್ಕ ಸ. ಹಿ. ಪ್ರಾ. ಶಾಲೆಯ ದೈಹಿಕ ಶಿಕ್ಷಕ ಶ್ರೀಧರ್ ಕೆ. ಉದ್ಘಾಟಿಸಿದರು. ಈ ಸಂದರ್ಭ ಶಾಲೆಯಲ್ಲಿ ಸುಧೀರ್ಘಕಾಲ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸಿದ ಪುಷ್ಪಾ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಕ್ರೀಡಾಕೂಟದಲ್ಲಿ ಬಾಲಕರ 14 ತಂಡ ಹಾಗೂ ಬಾಲಕಿಯರ 7 ತಂಡ ಸ್ಪರ್ಧಿಸಿದ್ದು ಶಾಲಾ ಮಾತೃಭಾರತಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕರಿಸಿದರು.

ವಿದ್ಯಾ ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ವಂದಿಸಿದರು. ಸಹ ಶಿಕ್ಷಕಿ ಶ್ವೇತಕುಮಾರಿ ಎಂ ಪಿ ನಿರೂಪಿಸಿದರು.

error: Content is protected !!