ರಸ್ತೆ ಕಾಮಗಾರಿಯ ಕಬ್ಬಿಣದ ಪ್ಲೇಟ್ ಕಳ್ಳತನ ಪ್ರಕರಣ: ಆರೋಪಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು:

 

 

 

ಪುತ್ತೂರು: ರಸ್ತೆ ಕಾಮಗಾರಿ ಗುತ್ತಿಗೆದಾರ ಕಂಪೆನಿಗೆ ಸೇರಿದ 40ಕ್ಕೂ ಅಧಿಕ ಕಬ್ಬಿಣದ ಪ್ಲೇಟ್​ಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಕಳ್ಳ ಹಾಗೂ ಕುಖ್ಯಾತ ಗರುಡ ಗ್ಯಾಂಗ್​ನ ಸದಸ್ಯನನ್ನು ಉಪ್ಪಿನಂಗಡಿ ಪೊಲೀಸರ ತಂಡ ಕಡಬದ ಆತನ ಮನೆಯಿಂದ ಬಂಧಿಸಿದೆ.
10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಯ ಪೊಲೀಸರಿಗೆ ಬೇಕಾಗಿದ್ದ, ಕಡಬ ತಾಲೂಕಿನ ಐತ್ತೂರು ಗ್ರಾಮದ ಕಾರ್ಯತಡ್ಕ ನಿವಾಸಿ ಅಬ್ದುಲ್ ಹಮೀದ್ ಅಲಿಯಾಸ್ ಹಮೀದ್ (27) ಎಂಬಾತನೇ ಬಂಧಿತ ಆರೋಪಿ. ಆರೋಪಿಯು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ, ಬೆದ್ರೋಡಿ, ನೀರಕಟ್ಟೆ ಎಂಬಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಆರೋಪಿಯು 2023ರ ಅಕ್ಟೋಬರ್​ 10ರಂದು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಹೆದ್ದಾರಿ 75ರ ಅಗಲೀಕರಣ ಕಾಮಗಾರಿಗೆ ಉಪಯೋಗಿಸುವ ಕೆಎನ್ಆರ್ ಸಂಸ್ಥೆಯ ಕಬ್ಬಿಣದ ಪ್ಲೇಟ್‌ಗಳನ್ನು ಕಳ್ಳತನ ಮಾಡಿದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ, ದಾವಣಗೆರೆ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ, ಸಕಲೇಶಪುರ ನಗರ ಪೊಲೀಸ್ ಠಾಣಾ ‌ವ್ಯಾಪ್ತಿಯಲ್ಲಿ ಪ್ರಕರಣ, ಕಡಬ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಹಾಗೂ ಕನ್ನ ಕಳವು ಪ್ರಕರಣ, ಬೆಂಗಳೂರು ಕೊತ್ತುಲೂರು ಪೊಲೀಸ್ ಠಾಣೆಯಲ್ಲಿ ದರೊಡೆ ಪ್ರಕರಣ, ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದರೊಡೆ ಪ್ರಕರಣ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಲ್ಲಿ ಈತ ಅರೋಪಿಯಾಗಿದ್ದಾನೆ. ಈ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಹಾಗೂ ಈತನ ವಿರುದ್ಧ ಅರೆಸ್ಟ್​ ವಾರಂಟ್ ಕೂಡಾ ಇತ್ತು.ಇತನ ಪತ್ತೆ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ತನಿಖಾ ಪಿಎಸ್ಐ ರುಕ್ಮಾ ನಾಯ್ಕ್, ಹೆಡ್‌ಕಾನ್​ಸ್ಟೇಬಲ್ ಹಿತೋಷ್, ಸಿಬ್ಬಂದಿ ಹೇಮರಾಜ್, ಗಿರೀಶ್, ಶಿವರಾಜ್ ಟಕ್ಕಳಿಕೆ, ಕಡಬ ಪೊಲೀಸ್ ಠಾಣಾ ಸಿಬ್ಬಂದಿ ರಾಜು ನಾಯ್ಕ ಸಹಕರಿಸಿದರು.

error: Content is protected !!