ಬೆಳಾಲು ಕೊಲೆ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ: ಅಳಿಯ ಹಾಗೂ ಮೊಮ್ಮಗನಿಂದ ನಡೆದ ಕೃತ್ಯ..!

 

 

 

 

ಬೆಳ್ತಂಗಡಿ: ಬೆಳಾಲಿನ ಎಸ್ ಪಿ ಬಿ ಕಾಂಪೌಂಡ್ ನಿವಾಸಿ ನಿವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್(83) ಕೊಲೆ ಪ್ರಕರಣದ ಆರೋಪಿಗಳು ಪೊಲೀಸರ ಸೆರೆಯಾಗಿದ್ದಾರೆ.

ಕೊಲೆಯಾದ ಎಸ್ ಪಿ ಬಾಲಕೃಷ್ಣ ಭಟ್ ಅವರ ಅಳಿಯ (ಮಗಳ ಪತಿ) ರಾಘವೇಂದ್ರ ಹಾಗು ಅವರ ಮಗನನ್ನು (ಮೃತ ಬಾಲಕೃಷ್ಣ ಅವರ ಮೊಮ್ಮಗ ) ಪೊಲೀಸರು ಬಂಧಿಸಿದ್ದಾರೆ.

 

ಧರ್ಮಸ್ಥಳ ಪೊಲೀಸರು ಮೊಬೈಲ್ ,ಸಿಸಿಕ್ಯಾಮರ ಹಾಗೂ ವಿವಿಧ ರೀತಿಯಲ್ಲಿ  ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಾಲಕೃಷ್ಣ ಭಟ್  ಬಡೆಕ್ಕಿಲ್ಲಾಯ ಅವರ ಆಳಿಯ ರಾಘವೇಂದ್ರ ಕೆಧಿಲಾಯ(53) ಮತ್ತು ಮೊಮ್ಮಗ ಮುರುಳಿಕೃಷ್ಣ(20) ಎಂಬವರನ್ನು ಆ.24 ರಂದು ಕಾಸರಗೋಡು ಮನೆಯಿಂದ ವಶಕ್ಕೆ ಪಡೆದು  ವಿಚಾರಣೆ ನಡೆಸಿದಾಗ ಬಾಲಕೃಷ್ಣ ಭಟ್  ಬಡೆಕ್ಕಿಲ್ಲಾಯರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕೆ ಆಳಿಯನ ಜೊತೆ ಬಂದಿದ್ದ ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದು ಆರೋಪಿಗಳಿಬ್ಬರನ್ನು ಕೋರ್ಟ್ ರಜೆ ಇರುವ ಕಾರಣದಿಂದ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಆ.24 ರಂದು ಸಂಜೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆ.27 ರಂದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.

ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ನಿವೃತ್ತ ಶಿಕ್ಷಕಿ ದಿ.ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರು ಇದೆ ಕಾರಣದಿಂದ ಬಾಲಕೃಷ್ಣ ಭಟ್ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷಿ ಆಗಿರುವ ರಾಘವೇಂದ್ರ ಕೆಧಿಲಾಯ ಮತ್ತು ಮಗ ಮುರಳಿ ಕೃಷ್ಣ ಕೋಪಗೊಂಡು ಹತ್ಯೆ ಮಾಡುವ ಯೋಜನೆ ರೂಪಿಸಿ ಅಪ್ಪ-ಮಗ ಸೇರಿಕೊಂಡು ಕಾಸರಗೋಡು ಮನೆಯಿಂದ ಮಾರಕಾಸ್ತ್ರ ರೆಡಿ ಮಾಡಿಕೊಂಡು ನೇರ ವಿಜಯಲಕ್ಷ್ಮಿಯ ಸ್ಕೂಟರ್ ನಲ್ಲಿ ರಾಘವೇಂದ್ರ ಕೆಧಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ  ಬಂದು ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದು ಮಧ್ಯಾಹ್ನ  ಊಟ ಮಾಡಿ ಚಾ ಕುಡಿದ  ನಂತರ  ತಂದಿದ್ದ ಆಯುಧದಿಂದ ಮೊಮ್ಮಗ ಮುರುಳಿಕೃಷ್ಣ ಹಿಂಬದಿಯ ಕುತ್ತಿಗೆಗೆ ಕಡಿದಿದ್ದಾರೆ ಈ ವೇಳೆ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಮತ್ತೆ ದಾಳಿ‌ ಮಾಡಿ ಕೊಲೆ ಮಾಡಿದ್ದಾರೆ. ನಂತರ  ಹಾಸು ಕಲ್ಲು ತಲೆಯ ಮೇಲೆ ಇಟ್ಟು ಬಳಿಕ
ನೇರ ಸ್ಕೂಟರ್ ಮೂಲಕ ಕಾಸರಗೋಡು ಮನೆ ಸೇರಿದ್ದರು.ತಂದೆಯನ್ನು ಪತಿ ಮತ್ತು ಮಗ  ಸೇರಿ ಕೊಲೆ ಮಾಡಿರುವುದು  ವಿಜಯಲಕ್ಷ್ಮಿಗೆ ತಿಳಿದಿಲ್ಲ. ಧರ್ಮಸ್ಥಳ ಪೊಲೀಸರು ಕಾಸರಗೋಡು ಮನೆಗೆ ಬಂದು ವಶಕ್ಕೆ ಪಡೆದ ಬಳಿಕ ಕೊಲೆ ಮಾಡಿದ ರಹಸ್ಯಗಳು ಗೊತ್ತಾಗಿದೆ ಎನ್ನಲಾಗಿದೆ. ಭಾಲಕೃಷ್ಣ  ಭಟ್ ಜೊತೆ ಕಿರಿಯ ಮಗ ಸುರೇಶ್ ಭಟ್ ಅವರನ್ನೂ ಕೂಡ ಕೊಲೆ ಮಾಡಲು ಯೋಜನೆ ರೂಪಿಸಿ ಬಂದಿದ್ದರು ಹಾಗೂ ಬಾಲಕೃಷ್ಣ ಭಟ್ ಕೊಲೆ ಬಳಿಕ ಸುರೇಶ್ ಭಟ್ ಬರುವಿಕೆಗಾಗಿ ಸ್ವಲ್ಪ ಸಮಯ ಮನೆಯಲ್ಲಿ ಕಾದು ಕುಳಿತ್ತಿದ್ದರು ಆದರೆ ಬಾರದೆ  ಇದ್ದಾಗ ಬಾಲಕೃಷ್ಣ ಭಟ್ ಅವರ 50 ಸಾವಿರದ ಎರಡು ಬಾಂಡ್ ಪೇಪರ್ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ಹಂತಕರು ತೆಗೆದುಕೊಂಡು ಬಂದ ದಾರಿಯಲ್ಲಿ ವಾಪಸ್ ತಮ್ಮ ಮನೆಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾ‌ರೆ.

ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ – ದಿ.ಲೀಲಾರವರಿಗೆ ಒಟ್ಟು ಮೂರು ಜನ ಮಕ್ಕಳು ಮೊದಲ ಮಗ ಹರೀಶ್ ಭಟ್ ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎರಡನೇ ಮಗಳು ವಿಜಯಲಕ್ಷ್ಮಿ(49) ಇವರನ್ನು 22 ವರ್ಷದ ಹಿಂದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮುಲ್ಲೇರಿಯಲ್ಲಿ ಕೃಷಿ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಇವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಇವರಲ್ಲಿ ಮೊದಲ ಮಗ ಮುರಳಿಕೃಷ್ಣ(20) ಹಾಗೂ ಪಿಯುಸಿ ಓದುತ್ತಿರುವ ಮಗಳು ಇದ್ದಾರೆ.ಕಿರಿಯ ಮಗ ಸುರೇಶ್ ಭಟ್(48) ಅವಿವಾಹಿತನಾಗಿದ್ದು ಪುತ್ತೂರಿನಲ್ಲಿ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೊಲೆ ಬಳಿಕ ಮಂಗಳೂರು ಶ್ವಾನ ದಳ ತಂಡ ಘಟನಾ ಸ್ಥಳಕ್ಕೆ ಬಂದು ಮನೆಯೊಳಗಿಂದ ಆರೋಪಿಗಳ ಸುಳಿವಿಗಾಗಿ ವಾಸನೆ ಹಿಡಿದು ಅಂಗಳ ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡಕ್ಕೆ ಬಿಸಾಕಿದ ಎರಡು ಬಾಳೆ ಎಲೆ ಕಡೆಗೆ ಹೋಗಿ ಸುಳಿವು ನೀಡಿತ್ತು ಬಳಿಕ ಅಲ್ಲಿಂದ ರಸ್ತೆಗೆ ಹೋಗಿರುವ ಬಗ್ಗೆ ಸುಳಿವು ನೀಡಿತ್ತು ಪೊಲೀಸ್ ಇಲಾಖೆಯ ಶ್ವಾನ ಬ್ರೇವ್. ಪೊಲೀಸರಿಗೆ ಅಲ್ಲಿಯೇ ಮೊದಲ ಸುಳಿವು ಕುಟುಂಬದೊಳಗಿನವರೆ ಮನೆಗೆ ಬಂದು ಊಟ ಮತ್ತು ಚಾ ಕುಡಿದು ಕೃತ್ಯ ಎಸಗಿರುವ ಬಗ್ಗೆ ಗೊತ್ತಾಗಿದೆ ಇದರಿಂದ ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ನಂಬರ್ ಪಡೆದು ಕಾರ್ಯಾಚರಣೆ ನಡೆಸಿದಾಗ ಆಳಿಯ ಮತ್ತು ಮೊಮ್ಮಗ ಸಿಕ್ಕಿ ಬಿದ್ದಿದ್ದಾರೆ.

*ಅಜ್ಜನ ಶವ ನೋಡಲು ಬಾರದ ಮೊಮ್ಮಗ:* ಬಾಲಕೃಷ್ಣ ಭಟ್ ಕೊಲೆ ಬಳಿಕ ಬೆಳಾಲು ಮನೆಗೆ ಆ.21 ರಂದು ಮಧ್ಯಾಹ್ನದ ಬಳಿಕ ಮೃತದೇಹ ನೋಡಲು ಮಗಳು ವಿಜಯಲಕ್ಷ್ಮಿ ಮತ್ತು ಆಳಿಯ ರಾಘವೇಂದ್ರ ಕೆಧಿಲಾಯ ಕಾರಿ‌ನಲ್ಲಿ ಬಂದಿದ್ದರು. ಮೊಮ್ಮಗ ಮುರುಳಿಕೃಷ್ಣ ಮಾತ್ರ ಬಂದಿರಲ್ಲಿಲ್ಲ. ವಿಚಾರಣೆಯಲ್ಲಿ ಬಾಲಕೃಷ್ಣ ಭಟ್ ಅವರನ್ನು ತಾವು ತಂದಿದ್ದ ಮಾರಕಾಸ್ತ್ರದಿಂದ ರಾಘವೇಂದ್ರ ಕೆಧಿಲಾಯನ ಮಗ ಮುರುಳಿಕೃಷ್ಣ ಅಜ್ಜನ ಕುತ್ತಿಗೆಗೆ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಂದೆ ರಾಘವೇಂದ್ರ ಕೆಧಿಲಾಯ ನೋಡುತ್ತಾ ನಿಂತಿದ್ದ ಬಳಿಕ ಕಪಾಟಿನಲ್ಲಿದ್ದ ದಾಖಲೆ ಪತ್ರ ಹಾಗೂ ಬಾಂಡ್ ಪೇಪರ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮುರುಳಿಕೃಷ್ಣ ವಿರುದ್ಧ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈತ ಪಿಯುಸಿವರೆಗೆ ಕಾಲೇಜ್ ಹೋಗಿದ್ದು ಬಳಿಕ ಗೆಳೆಯರೊಂದಿಗೆ ತಿರುಗಾಟ ಹಾಗೂ ಮೋಜು ಮಾಸ್ತಿ ಮಾಡುತ್ತಿರುತ್ತಾನೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮಾರ್ಗದರ್ಶನಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ -1 ಕಿಶೋರ್.ಪಿ , ಸಬ್ ಇನ್ಸ್ಪೆಕ್ಟರ್ -2 ಸಮರ್ಥ್.ಆರ್.ಗಾಣಿಗೇರಾ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

error: Content is protected !!