ಮುಂಡಾಜೆ, ಬೈಕ್ ಗೆ ಬೊಲೆರೋ ವಾಹನ ಡಿಕ್ಕಿ, ಬಾಲಕಿ ಸಾವು,ವ್ಯಕ್ತಿ ಗಂಭೀರ:

 

 

ಬೆಳ್ತಂಗಡಿ : ಮುಂಡಾಜೆಯ ರಾಷ್ಟ್ರೀಯ ಹೆದ್ದಾರಿಯ ಸೀಟು ಕಾಡು ಎಂಬಲ್ಲಿ ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಬಾಲಕಿಯ ತಂದೆ ಗಂಭೀರ ಗಾಯಗೊಂಡ ಘಟನೆ ಜು.27ರಂದು ಸಂಜೆ ನಡೆದಿದೆ.

ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಗೋಖಲೆಯವರು ಮಗಳಾದ ಅನರ್ಘ್ಯ(13)ಳನ್ನು ಕುಳ್ಳಿರಿಸಿಕೊಂಡು ಮುಂಡಾಜೆ ಕಡೆ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಬೊಲೆರೋ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಲ್ಲದೇ , ಬೈಕನ್ನು ಸುಮಾರು 30 ಮೀಟರಿಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದೆ.

ಈ ವೇಳೆ ಬೈಕ್‌ನಲ್ಲಿದ್ದ ಅನರ್ಘ್ಯಳ ತಲೆ ಮೇಲೆಯೇ ಬೊಲೆರೋ ವಾಹನ ಹರಿದು ಹೋದ ಕಾರಣ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬಾಲಕಿ ಉಜಿರೆ ಖಾಸಗಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಎನ್ನಲಾಗಿದೆ.

ಬೈಕ್ ಚಲಾಯಿಸುತ್ತಿದ್ದ ಗುರುಪ್ರಸಾದ್ ಗೋಖಲೆಯವರಿಗೂ ಗಂಭೀರ ಗಾಯಗಳಾಗಿದ್ದು ಅವರು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತವೆಸಗಿದ ನೆರಿಯದ ಬೊಲೆರೋ ಚಾಲಕ ಅಲ್ಲಿಂದ ಪರಾರಿಯಾಗಲೆತ್ನಿಸಿದ್ದು, ಸ್ಥಳೀಯರು ತಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!