ಬಸ್ ಕಿಟಕಿಯ ಹೊರಗೆ ತಲೆ ಹಾಕಿ ಉಗುಳಲು ಯತ್ನ , ಲಾರಿ ಡಿಕ್ಕಿ ಹೊಡೆದು ಬೇರ್ಪಟ್ಟ ವಿದ್ಯಾರ್ಥಿಯ ರುಂಡ:

 

 

 

 

ಹುಬ್ಬಳ್ಳಿ: ಸಂಚರಿಸುತಿದ್ದ  ಸರ್ಕಾರಿ  ಬಸ್​ನ ಕಿಟಕಿಯಿಂದ  ತಲೆ ಹೊರಹಾಕಿ ಉಗುಳುತ್ತಿರುವ ವೇಳೆ  ಲಾರಿ ಬಡಿದು  ಪ್ರಯಾಣಿಕನೊಬ್ಬನ   ರುಂಡ  ಬೇರ್ಪಟ್ಟ ಘಟನೆ ಕುಂದಗೋಳ ಪಟ್ಟಣದ ಹುಬ್ಬಳ್ಳಿ – ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಕೊಪ್ಪದ ಕೆರೆಯ ಬಳಿ ಬುಧವಾರ ಸಂಜೆ ಸಂಭವಿಸಿದೆ.

ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ಎಂಬಾತನೇ ದುರ್ಘಟನೆಯಲ್ಲಿ ಮೃತಪಟ್ಟ ಬಾಲಕ. ಶಿರೂರ ಗ್ರಾಮದ ನಿವಾಸಿಯಾಗಿದ್ದ ಈತ ಐಟಿಐ ವಿದ್ಯಾರ್ಥಿಯಾಗಿದ್ದ.

ಬುಧವಾರ ​ಸಂಜೆ ಸುಮಾರು 5 ಗಂಟೆಯ ವೇಳೆಗೆ ಲಕ್ಷ್ಮೇಶ್ವರ ಡಿಪೋಗೆ ಸೇರಿದ ಕೆಎ 26 ಎಫ್ 1039 ನಂಬರಿನ ಸಾರಿಗೆ ಬಸ್​​ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಎಂ – ಸ್ಯಾಂಡ್ ತುಂಬಿಕೊಂಡು ಹೋಗುತ್ತಿದ್ದ ಕೆಎ 04 ಎಡಿ 7218 ನಂಬರಿನ ಲಾರಿಯು ಓವರ್ ಟೆಕ್‌ ಮಾಡುತ್ತಿದ್ದ ಸಂದರ್ಭದಲ್ಲೇ ಫಕ್ಕೀರೇಶ ತಲೆ ಹೊರಗೆ ಹಾಕಿ ಉಗುಳುತ್ತಿದ್ದ ವೇಳೆ ಲಾರಿ ಅವನ ತಲೆಗೆ ತಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​ನ ಕಿಟಕಿಯಿಂದ ಹೊರಗಿದ್ದ ವಿದ್ಯಾರ್ಥಿ ಫಕ್ಕೀರೇಶನ ತಲೆ (ರುಂಡ) ಕತ್ತರಿಸಿ ರಸ್ತೆಗೆ ಬಿದ್ದಿದ್ದು, ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ.

ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಈ ದಾರುಣ ದೃಶ್ಯವನ್ನು ಕಂಡು ಕಂಬನಿ ಮಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!