ಹಾಲಿನ ದರ ಹೆಚ್ಚಾಗಿಲ್ರಿ, ಅಷ್ಟೇ ರೇಟಿದೆ: ಹೆಚ್ಚುವರಿಯಾಗಿ ಕೊಡುತ್ತಿರುವ ಹಾಲಿಗೆ ಮೊತ್ತ ಸೇರಿಸಿದ್ದೇವೆ’: ನಂದಿನಿ ಹಾಲಿನ ಬೆಲೆ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ರಾಜ್ಯಾದ್ಯಂತ ಹಾಲಿ ದರ ಹೆಚ್ಚಳದ ಬಗ್ಗೆ ಆಕ್ರೋಶ ಕೇಳಿ ಬರುತ್ತಿರುವ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿನ ದರ ಏರಿಕೆಗೆ ಸ್ಪಷ್ಪ ವಿವರಣೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಂದಿನಿ ಹಾಲಿನ ದರ ಹೆಚ್ಚಳವಾಗಿಲ್ಲ, ಹೆಚ್ಚುವರಿಯಾಗಿ ಕೊಡುತ್ತಿರುವ ಹಾಲಿಗೆ ಪಡೆಯಬೇಕಾದ ಮೊತ್ತ ಸೇರಿಸಿದ್ದೇವೆ ಅಷ್ಟೆ. ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿಗೆ ಮಾರುಕಟ್ಟೆ ಒದಗಿಸಲು ಇದು ಅನಿವಾರ್ಯ” ಎಂದಿದ್ದಾರೆ.

“ಕಳೆದ ವರ್ಷ ಈ ಸಮಯದಲ್ಲಿ 90 ಲಕ್ಷ ಲೀಟರ್ ಹಾಲು ಇತ್ತು. ಈಗ 99 ಲಕ್ಷ ಲೀಟರ್‌ಗಿಂತಲೂ ಹೆಚ್ಚಾಗಿದೆ. ನಾವು ರೈತರಿಂದ ಹಾಲು ಖರೀದಿ ಮಾಡಲೇಬೇಕು. ಅವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಉತ್ಪಾದನೆಯಾದ ಹಾಲಿಗೆ ಮಾರುಕಟ್ಟೆ ಒದಗಿಸಲೇಬೇಕು. ಹಾಗಾಗಿ ಅರ್ಧ ಲೀಟರ್‌ಗೆ 50 ಎಂಎಲ್ ಜಾಸ್ತಿ ಮಾಡಿದ್ದೇವೆ. ಕ್ವಾಂಟಿಟಿ ಹೆಚ್ಚು ಮಾಡಿದ್ದೇವೆ. ಆ ಹೆಚ್ಚುವರಿ ಕ್ವಾಂಟಿಟಿಗೆ ಬೇಕಾದ ಬೆಲೆಯನ್ನು ನಿಗದಿ ಮಾಡಿದ್ದೇವೆ. 50 ಮಿಲಿ ಲೀಟರ್‌ಗೆ ಬೇಕಾದ ಹಣವನ್ನು ಹೆಚ್ಚು ಮಾಡಿದ್ದೇವೆ. 50 ಎಂಎಲ್‌ಗೆ 2.10 ರೂ. ಆಗಲಿದೆ. ಅದನ್ನು ಎರಡು ರೂ. ನಿಗದಿ ಮಾಡಿದ್ದೇವೆ” ಎಂದರು.

ಬಿಜೆಪಿ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಬಿಜೆಪಿಯವರು ಸುಮ್ಮನೆ ಹಾಲಿನ ದರ ಹೆಚ್ಚಳ ಅಂತಾ ಹೇಳುತ್ತಾರೆ ಎಂದು, ನೀವು ಅದನ್ನೇ ಕೇಳಬೇಡಿ’ ಎಂದಿದ್ದಾರೆ.

error: Content is protected !!