![]()
ಮಂಗಳೂರು: ನಗರದ ಬೈಕಂಪಾಡಿ ಹೆದ್ದಾರಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರ ತಂಡವೊಂದು, ಕಾರು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಇಂದು(ಸೋಮವಾರ) ಮುಂಜಾನೆ ನಡೆದಿದೆ.
ಕೇರಳದ ಪಯ್ಯನ್ನೂರು ನಿವಾಸಿ, ಚಿನ್ನದ ವರ್ತಕ ವಿಕಾಸ್ ಎಂಬುವರೇ ದರೋಡೆಗೊಳಗಾದವರು. ಮುಂಬೈ ಸಮೀಪದ ಸಾಂಗ್ಲಿಯಲ್ಲಿ ಪರಿಚಯಸ್ಥರ ಮದುವೆ ಮುಗಿಸಿ ಕುಟುಂಬ ಸಮೇತ ಕಾರಿನಲ್ಲಿ ಊರಿಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ನಡೆದಿದ್ದೇನು? ಸೋಮವಾರ ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ವಿಕಾಸ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದ ದರೋಡೆಕೋರರು ಬೈಕಂಪಾಡಿ ಬಳಿ ಅಡ್ಡಗಟ್ಟಿದ್ದಾರೆ. ಎರಡು ಇನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಸುಮಾರು 7 ರಿಂದ 8 ಮಂದಿಯಿದ್ದ ಖದೀಮರ ತಂಡ, ವಿಕಾಸ್ ಅವರನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿದೆ.
ಬೈಕಂಪಾಡಿಯಲ್ಲೇ ವಿಕಾಸ್ ಅವರನ್ನು ಬಿಟ್ಟು, ಅವರ ಪತ್ನಿ ಮತ್ತು ಮಗನಿದ್ದ ಕಾರನ್ನೇ ಅಪಹರಿಸಿದ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಸ್ವಲ್ಪ ದೂರದ ಕುಳೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಪತ್ನಿ ಮತ್ತು ಮಗನನ್ನು ಕಾರಿನಿಂದ ಕೆಳಗಿಳಿಸಿ, ಕಾರಿನೊಂದಿಗೆ ಚಾಲಕರು ಜಾಗ ಖಾಲಿ ಮಾಡಿದ್ದಾರೆ.
₹20 ಲಕ್ಷ ಮೌಲ್ಯದ ಸೊತ್ತು ಕಳವು: ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನದ ಆಭರಣಗಳು, ನಗದು ಸೇರಿದಂತೆ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ ಎಂದು ಸಂತ್ರಸ್ತ ವಿಕಾಸ್ ಪಣಂಬೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಠಾಣೆಯ ಪೊಲೀಸರು, ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ತೀವ್ರ ತನಿಖೆ ಕೈಗೊಂಡಿದ್ದಾರೆ..