ನೋಂದಾವಣೆಯಾಗದೇ ಇರುವ ದೊಡ್ಡ ಸಂಸ್ಥೆ RSS:ದೇಣಿಗೆಗೆ ಲೆಕ್ಕಾಚಾರವಿಲ್ಲ:ಪತ್ರಿಕಾಗೋಷ್ಠಿಯಲ್ಲಿ  ಅಮಲ ರಾಮಚಂದ್ರ :

 

 

ಬೆಳ್ತಂಗಡಿ: ದೇಶದಲ್ಲಿ ನೊಂದಾವಣೆಯಾಗದಿರುವ ದೊಡ್ಡ ಸಂಸ್ಥೆ ಆರ್.ಎಸ್.ಎಸ್.ಮಾತ್ರ, ರಶೀದಿ ನೀಡದೆ ದೇಣಿಗೆಯನ್ನು ಸಂಗ್ರಹಿಸುತ್ತಿದ್ದು ದೇಣಿಗೆ ಹಣಕ್ಕೆ ಲೆಕ್ಕಾಚಾರವನ್ನು ನೀಡದ ಸಂಘಟನೆ ಆರ್.ಎಸ್.ಎಸ್. ಆಗಿದೆ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಹೇಳಿದರು.

ಅವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಜೂ.29 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿ ವರ್ಷ ಗುರುಕಾಣಿಕೆಯ ಹೆಸರಿನಲ್ಲಿ ಜನರಿಂದ ಕಾನೂನಿನ ಮಾನ್ಯತೆಯಿಲ್ಲದೆ ಸಂಗ್ರಹಿಸುತ್ತಿರುವ ಕೋಟಿ ಕೋಟಿ ರೂಪಾಯಿ ದೇಣಿಗೆಗಳಿಗೆ ಯಾವುದೇ ರೀತಿಯ ಲೆಕ್ಕಪತ್ರವನ್ನಾಗಲಿ ಪಾರದರ್ಶಕತೆಯನ್ನಾಗಲೀ ಪ್ರದರ್ಶಿಸದೆ, ಪ್ರಶ್ನಿಸಿದವನನ್ನೇ “ನನ್ನನ್ನು ಪ್ರಶ್ನಿಸುವುದಕ್ಕೆ ನೀನು ಯಾರು” ಎಂದು ಕೇಳುತ್ತಿದೆ. ರಾಜ್ಯ ಗೃಹ ಸಚಿವರಾದ ಪ್ರಿಯಾಂಕಾ ಖರ್ಗೆಯವರು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಆರ್.ಎಸ್.ಎಸ್.ನ ನೋಂದಾವಣೆಯ ಕುರಿತು ಬರೆದ ಪತ್ರ ರವಾನಿಸಿದರು. “ನೀವು ಯಾಕೆ ರಿಜಿಸ್ಟ್ರೇಷನ್ ಮಾಡಿಸಿಲ್ಲ ಎಂಬುದಕ್ಕೆ ಇಂದಿನವರೆಗೆ ನಮಗೆ ಯಾರೂ ರಿಜಿಸ್ಟ್ರೇಷನ್ ಮಾಡುವಂತೆ ಹೇಳಿಲ್ಲ , ಹಿಂದೂ ಧರ್ಮವನ್ನೂ ರಿಜಿಸ್ಟ್ರೇಷನ್ ಮಾಡಲಾಗಿಲ್ಲ ಎಂಬ ಮೋಹನ್ ಭಾಗವತ್ ಮಾತು ತೂಕವಿಲ್ಲದ ಮತ್ತು ಜನರನ್ನು ದಾರಿ ತಪ್ಪಿಸುವಂತ ಮಾತಾಗಿದೆ. ದೇಶದಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತ ಆರ್.ಎಸ್.ಎಸ್.ನ ಸರಸಂಘಚಾಲಕರಿಗೆ ತಮ್ಮ ಸಂಸ್ಥೆಯನ್ನು ರಿಜಿಸ್ಟ್ರೇಷನ್ ಮಾಡಬೇಕೆಂದಿದ್ದರೆ ಬೇರೆ ಯಾರಾದರೂ ಹೇಳಬೇಕಾಗಿದೆ ಎಂದರೆ ಅವರೆಂತಹಾ ನೈತಿಕ ಅಧಃಪತನದಲ್ಲಿ ಇದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ತಿಳಿಸಿದರು.

 

 

 

 

ಆರ್.ಎಸ್.ಎಸ್‌ಗೆ ನೂರು ವರ್ಷವಾದರೂ ಇಂದಿನವರೆಗೆ ಸಂಸ್ಥೆಗೆ ಸರಿಯಾದ ವಿಳಾಸವೇ ಇಲ್ಲ. ಆರ್.ಎಸ್.ಎಸ್. ಎಂತೆಂತಹ ದೇಶಭಕ್ತರನ್ನು ನಿರ್ಮಾಣ ಮಾಡಿದೆ ಎಂಬುದಕ್ಕೆ ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ, ಭಕ್ತರ ಕಾಣಿಕೆಯ ಕೋಟ್ಯಂತರ ರೂಪಾಯಿಗಳ ಹಗರಣ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ ಎಂದು ಅಭಿಪ್ರಾಯ ಪಟ್ಟರು.

ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಪೂರ್ವದಲ್ಲಿ ದೇಶದ ಪ್ರತಿ ಮನೆಗೆ ಮಂತ್ರಾಕ್ಷತೆಯನ್ನು ಹಂಚಿ ರಾಮಮಂದಿರವನ್ನು ಚುನಾವಣೆಯಲ್ಲಿ ಮತ ಧೃವೀಕರಣಕ್ಕೆ ಬಳಸಿದ ಕಾರ್ಯಕರ್ತರಿಗಾಗಲಿ ಯಾವ ದೇಶ ಪ್ರೇಮವೂ ಇಲ್ಲ, ಯಾವ ರಾಮ ಭಕ್ತಿಯು ಇಲ್ಲ, ಯಾವ ಜವಾಬ್ದಾರಿಯು ಇಲ್ಲ ಎನ್ನುವುದು ಸಾಬೀತಾಗುತ್ತದೆ. ಮಂತ್ರಾಕ್ಷತೆಯನ್ನು ಮನೆಮನೆಗೆ ಹಂಚಿದ್ದರು ಅದೇ ರೀತಿಯಲ್ಲಿ ತಾವು ಲೂಟಿ ಹೊಡೆದ ಹಣವನ್ನು ಮನೆ ಮನೆಗಳಿಗೆ ಹಂಚಿ ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ತಮ್ಮನ್ನು ತಾವು ಕಾನೂನಿನ ವ್ಯಾಪ್ತಿಯೊಳಗೆ ಒಳಪಡಿಸುವುದೇ ದೇಶ ಪ್ರೇಮ, ಸೌಹರ್ದತೆಯ ಪ್ರೀತಿಯ ಪಸರಿಸುವ ದೇಶವಾಗಲಿ ಎಂದು ಹೇಳಿದ ಅವರು ನಮ್ಮ ಪಕ್ಷದವರು ಆರ್‌ಎಸ್‌ಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಲ್ಲ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾವಿದ್ದ ವೇಳೆ ಕಾಲ ಕಾಲಕ್ಕೆ ಆರ್‌ಎಸ್‌ಎಸ್‌ನ್ನು ಬ್ಯಾನ್ ಮಾಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಅಣೆ ಪ್ರಮಾಣಕ್ಕೆ ಹರೀಶ್ ಪೂಂಜ ಸಲಹೆ:
ರಾಜ್ಯದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಾಲ್ಯದಲ್ಲಿ ನಡೆದ ಅಡ್ಡ ಮತದಾನ ವಿಚಾರಕ್ಕೆ ಅಣೆ ಪ್ರಮಾಣ ಪ್ರಹಸಾನ ನಡೆದಿದೆ. ಪವಿತ್ರ ಕ್ಷೇತ್ರದಲ್ಲಿ ರಾಜಕೀಯದ ಅಣೆಪ್ರಮಾಣದ ಹೇಯ ಕೃತ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿದ್ದು ಅವರಿಗೆ ಶಾಸಕ ಹರೀಶ್ ಪೂಂಜ  ಪುಸಲಾಯಿಸಿ ಸಲಹೆ ನೀಡಿದ್ದಾರೆ ಎಂದು ದೂಷಿಸಿದರು.

ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ, ಬೆಳ್ತಂಗಡಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಗೌಡ ಸವಣಾಲು ಹಾಗೂ ಅಳದಂಗಡಿ ಪ್ಯಾಕ್ಸ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!