ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೊಬೈಲ್ ಫೋನ್‌ಗಳ ಪತ್ತೆಗಾಗಿ ತೀವ್ರ ಶೋಧ: ಅಗ್ನಿಶಾಮಕ ಅಧಿಕಾರಿಗಳ ಸಹಾಯಕ್ಕೆ ಪೊಲೀಸರ ಮೊರೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಭಾರೀ ತನಿಖೆಯಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ 2 ಮೊಬೈಲ್ ಫೋನ್ ಗಳು ಪೊಲೀಸರ ಕೈಗೆ ಸಿಗದಿರುವ ಕಾರಣ ಅವುಗಳ ಪತ್ತೆಗೆ ತೀವ್ರ ಶೋಧಕಾರ್ಯ ನಡೆಯುತ್ತಿದೆ.

ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡುವಾಗ A5 ಆರೋಪಿ ರಾಘವೇಂದ್ರನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ಜೊತೆಗೆ ಆರೋಪಿಗಳ ಸಿಟ್ಟಿಗೆ ಕಾರಣವಾದ ಮೆಸೇಜ್ ಸೇರಿದಂತೆ ಇತರೆ ಅಂಶಗಳು ರೇಣುಕಾಸ್ವಾಮಿಯ ಮೊಬೈಲ್ ಫೋನ್‌ನಲ್ಲಿವೆ. ಆದರೆ, ಜೂನ್ 9ರ ಮುಂಜಾನೆ ರೇಣುಕಾಸ್ವಾಮಿ ಹಾಗೂ ರಾಘವೇಂದ್ರನ ಮೊಬೈಲ್ ಪಡೆದುಕೊಂಡಿದ್ದ ಆರೋಪಿ ಪ್ರದೋಶ್, ಅವುಗಳನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ.

ಕಳೆದ ಕೆಲವು ದಿನಗಳಿಂದಲೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೂ ಮೊಬೈಲ್ ಸಿಗದಿರುವ ಕಾರಣ ಫೋನ್‌ಗಳ ಪತ್ತೆಗಾಗಿ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ನೆರವು ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಮೊಬೈಲ್ ಪತ್ತೆ ಹಚ್ಚಿಕೊಡುವಂತೆ ರಾಜಾಜಿನಗರ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಪೊಲೀಸರು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!