ಚಾರ್ಮಾಡಿ: ಕನಪ್ಪಾಡಿ ಮೀಸಲು ಅರಣ್ಯದಲ್ಲಿ ಅಕ್ರಮ ಕಡವೆ ಬೇಟೆ..!: ಆರೋಪಿ ಮನೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ: ಕಡವೆ ಮಾಂಸ, ಬಂದೂಕು ಸಹಿತ ಓರ್ವ ಅರೆಸ್ಟ್..!

ಬೆಳ್ತಂಗಡಿ : ಕಡವೆ ಬೇಟೆಯಾಡಿ, ಮಾಂಸ ಮಾಡಿ ಮನೆಯಲ್ಲಿ ಶೇಖರಿಸಿಟ್ಟ ಆರೋಪಿ ಮನೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಜ.7 ರಂದು ದಾಳಿ ಮಾಡಿದ್ದಾರೆ.

ನೆರಿಯ ಗ್ರಾಮದ ಚಾರ್ಮಾಡಿ ಕನಪ್ಪಾಡಿ ಮೀಸಲು ಅರಣ್ಯದಲ್ಲಿ ಕುಳೆನಾಡಿ ನಿವಾಸಿ ದಿ.ತುಂಗಯ್ಯ ಗೌಡರ ಮಗ ಕೆ.ಅಶೋಕ್ ಕುಮಾರ್ (59) ಎಂಬಾತ ಕಡವೆಯನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಶೇಖರಿಸಿಟ್ಟದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಮನೆಗೆ ದಾಳಿ ಮಾಡಿ ಕಡವೆ ತಲೆ ಭಾಗ ಸಹಿತ 2 ಕೊಂಬು , 4 ಕೆ.ಜಿ ಕಡವೆ ಮಾಂಸ, 3ಕಾಲು, ದೇಹದ ಚರ್ಮ, ಸಿಂಗಲ್ ಬ್ಯಾರಲ್ ಬಂದೂಕು, ಒಂದು ಗುಂಡು, ಬೇಟೆಯಾಡಲು ಬಳಸಿದ ಖಾಲಿ ಒಂದು ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಕಾಯ್ದೆ 9, 39,50 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ , ನೆರಿಯ ವಲಯ ಉಪ ಅರಣ್ಯಾಧಿಕಾರಿ ಯತೀಂದ್ರ ಕುಮಾರ್, ಬೆಳ್ತಂಗಡಿ ಉಪ ಅರಣ್ಯಾಧಿಕಾರಿ ಪಾಂಡುರಂಗ ಕಮಾತಿ, ಉಜಿರೆ ಉಪ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ನಾವೂರು ಉಪ ವಲಯ ಅರಣ್ಯಾಧಿಕಾರಿ ರಾಜೇಶ್ , ಗೇರುಕಟ್ಟೆ ಉಪ ವಲಯ ಅರಣ್ಯಾಧಿಕಾರಿ ಪೂಜಾ, ಬೆಳ್ತಂಗಡಿ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಕೆ, ಅರಣ್ಯ ಗಸ್ತು ಪಾಲಕ ರವಿ ಮುಖ್ರಿ ಮತ್ತು ಪರಮೇಶ್ವರ.ಎ, ಅರಣ್ಯ ಅಧಿಸೂಚಿತ ನೌಕರ ಬಾಲಕೃಷ್ಣ ಮತ್ತು ಘಫೂರ್ ಮತ್ತು ಚಾಲಕ ಕುಸಲಪ್ಪ ಭಾಗಿಯಾಗಿದ್ದರು.

error: Content is protected !!